ರಾಮ್‌ದಾಸ್ ಗೆ ಸಚಿವ ಸ್ಥಾನ ಕೊಡದಿದ್ದಕ್ಕೆ ಬಿಎಸ್ ವೈ ವಿರುದ್ಧ ವಿಡಿಯೋ ಹರಿಬಿಟ್ಟ ಪ್ರೇಮಕುಮಾರಿ

ಮೈಸೂರು, ಫೆಬ್ರವರಿ 08: ನಿನ್ನೆಯಷ್ಟೇ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಸಂಪುಟದಲ್ಲಿ ಶಾಸಕ‌ ರಾಮದಾಸ್ ಗೆ ಸ್ಥಾನ ಸಿಗದಿದ್ದಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಪ್ರೇಮ ಕುಮಾರಿ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. "ನನ್ನ ಕಾರಣ ಮುಂದಿಟ್ಟುಕೊಂಡು ಯಡಿಯೂರಪ್ಪ ರಾಮ್‌ದಾಸ್ ಗೆ ಸಚಿವ ಸ್ಥಾನ ತಪ್ಪಿಸಿದ್ದಾರೆ. ಆ ಮೂಲಕ ನಮ್ಮ ಕುಟುಂಬ ಹಾಗೂ ರಾಮ್‌ದಾಸ್ ರನ್ನು ತುಳಿಯುತ್ತಿದ್ದಾರೆ. ವೀರಶೈವ ಲಿಂಗಾಯತ ವ್ಯಕ್ತಿಯಾಗಿ ವೀರಶೈವ ಲಿಂಗಾಯತ ಕುಟುಂಬದ ಹೆಣ್ಣುಮಗಳಿಗೆ ಅನ್ಯಾಯ ಮಾಡುತ್ತಿದ್ದಾರೆ" ಎಂದು ದೂರಿದ್ದಾರೆ.

"ಯಡಿಯೂರಪ್ಪ ನಾಲಾಯಕ್ ಮುಖ್ಯಮಂತ್ರಿ" ಎಂದಿರುವ ಅವರು, "ನಮ್ಮದು ವೈಯಕ್ತಿಕ ವಿಚಾರ. ಆದರೆ ಇದನ್ನೇ ಮುಂದಿಟ್ಟುಕೊಂಡು ರಾಮದಾಸ್ ಅವರಿಗೆ ಮಂತ್ರಿ ಸ್ಥಾನ ನೀಡಿಲ್ಲ. ಯಡಿಯೂರಪ್ಪ ತಮ್ಮ ಶಿಷ್ಯನ ಮೂಲಕ ರಾಮ್‌ದಾಸ್ ಹಾಗೂ ನನ್ನನ್ನು ದೂರ ಮಾಡಿದ್ದಾರೆ. ನಾನು ಎಲ್ಲಾ ದಾಖಲೆ ಇಟ್ಟುಕೊಂಡಿದ್ದೇನೆ. ಕೋರ್ಟ್‌ನಲ್ಲಿ ನನಗೆ ನ್ಯಾಯ ಸಿಗುತ್ತೆ" ಎಂದು ಹರಿಹಾಯ್ದಿದ್ದಾರೆ. 9.21 ನಿಮಿಷದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

"ಕೇಸ್ ಬೇರೆ, ಸಿದ್ಧಾಂತ ಬೇರೆ, ಸೀಟ್ ಕೊಡಿ ಎಂದು ಕೇಳಿದ್ದೆ"

"ನ್ಯಾಯಾಲಯದಲ್ಲಿ ನನ್ನ, ರಾಮದಾಸ್ ಅವರ ಪ್ರಕರಣ ನಡೆಯುತ್ತಿದೆ. ಅದರ ಬಗ್ಗೆ ನಾನು ಈಗ ಹೆಚ್ಚು ಮಾತನಾಡುವುದಿಲ್ಲ. ಆದರೆ ಈಗ ಯಡಿಯೂರಪ್ಪನವರ ಸರ್ಕಾರ ಇದೆ. ಕೇಸ್ ಬೇರೆ, ಪಕ್ಷದ ಸಿದ್ಧಾಂತಗಳೇ ಬೇರೆ. ಆ ಕಾರಣವಾಗಿ ರಾಮದಾಸ್ ಅವರಿಗೆ ಸೀಟ್ ಕೊಡಿ ಎಂದು ಕೇಳಿದ್ದೆ. ರಾಮದಾಸ್ ಅವರೂ ಕೇಳಿಕೊಂಡದ್ದರು. ಆದರೂ ಯಡಿಯೂರಪ್ಪ, ಹೈಕಮಾಂಡ್ ಸ್ಥಾನವನ್ನು ಕೊಟ್ಟಿಲ್ಲ.

ನಾನು ಯಾವುದೇ ಪಕ್ಷಕ್ಕೂ ಸೇರಿಲ್ಲ. ನನ್ನ ಗಂಡ ಬಿಜೆಪಿಯಲ್ಲಿದ್ದಾರೆ ಎಂದು
ಅವರಿಗೆ ಬೆಂಬಲಿಸಿದೆ" ಎಂದು ಯಡಿಯೂರಪ್ಪ ಅವರು ಸ್ಥಾನ ಕೊಡದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ವೀರಶೈವ ಹೆಣ್ಣು ಮಗಳಿಗೆ ನ್ಯಾಯ ಕೊಡಿಸದವರು ಆ ಸ್ಥಾನದಲ್ಲಿ ಇರಬೇಕಾ?"

"ಆದರೆ ನಾನು ಇಷ್ಟೆಲ್ಲಾ ಹೇಳಿದ್ದರೂ ನಮ್ಮ ಪ್ರಕರಣದ ಸಬೂಬು ಹೇಳಿಕೊಂಡು ಮಂತ್ರಿ ಸ್ಥಾನ ತಪ್ಪಿಸಿದ್ದಾರೆ. ಸ್ಥಾನ ಸಿಗದಿದ್ದಕ್ಕೆ ನಾನು ಕಾರಣ ಎಂದು ಯಡಿಯೂರಪ್ಪ ಹೇಳಿದ್ದಾರೆ. ರಾಮದಾಸ್ ಗೆ ಮತ್ತೊಬ್ಬರನ್ನು ಅಂಟು ಹಾಕಿ ಸಂಸಾರ ಒಡೆಯೋದಕ್ಕೆ ಯಡಿಯೂರಪ್ಪ ಅಂಡ್ ಟೀಮ್ ಪರೋಕ್ಷ ಬೆಂಬಲ ಕೊಟ್ಟು ನಮ್ಮಿಬ್ಬರ ಸಂಬಂಧ ಒಡೆಯುತ್ತಿದ್ದಾರೆ. ಹೆಣ್ಣುಮಗಳಿಗೆ ನ್ಯಾಯ ಕೊಡಿಸಲಾರದ ಇವರು ಮುಖ್ಯಮಂತ್ರಿ ಸ್ಥಾನದಲ್ಲಿ ಇರಬೇಕಾ?" ಎಂದು ಪ್ರಶ್ನಿಸಿದ್ದಾರೆ.

"ಇವರು ಮುಖ್ಯಮಂತ್ರಿ ಆಗಲು ನಾಲಾಯಕ್"

"ನ್ಯಾಯಾಲಯದಲ್ಲಿ ನಮ್ಮ ಪ್ರಕರಣ ಇದ್ದರೂ ಗಂಡ ಬೇಕು ಎಂದು ಬಂಗಾರ ಮಾರಿ ಹೋರಾಟ ಮಾಡುತ್ತಿದ್ದೇನೆ. ಆದರೆ ನನ್ನನ್ನು ಹುಚ್ಚು ಹಿಡಿದಿದೆ ಅನ್ನುವ ಥರ ಬಿಂಬಿಸಲು ಹೋಗಿದ್ದಾರೆ. ಹೆಣ್ಣು ಮಗಳಿಗೆ ನ್ಯಾಯ ಕೊಡಲು ಆಗದ ಇವರು ನಾಲಾಯಕ್ ಮುಖ್ಯಮಂತ್ರಿ ಎಂದು ಧೈರ್ಯವಾಗಿ ಹೇಳುತ್ತೇನೆ. ನಮ್ಮ ಸಂಸಾರದಲ್ಲಿ ಬೇಳೆ ಬೇಯಿಸಿಕೊಳ್ಳಲು ಇವರಾರು? ಹೆಣ್ಣು ಮಗಳಿಗೆ ನ್ಯಾಯ ಕೊಡಿಸಲು ಆಗಲ್ಲ ಎಂದರೆ ಮುಖ್ಯಮಂತ್ರಿ ಜಾಗದಲ್ಲಿ ಏಕೆ ಕುಳಿತುಕೊಂಡಿದ್ದೀರ" ಎಂದು ಹರಿಹಾಯ್ದಿದ್ದಾರೆ.

"ಹತ್ತು ಜನ್ಮ ಕಳೆದರೂ ರಾಮದಾಸ್ ಬಿಡಲ್ಲ"

"ನಮ್ಮ ಸಂಸಾರ ಒಡೆದದ್ದು ಯಡಿಯೂರಪ್ಪ ಶಿಷ್ಯ. ಇವರು ಮುಖ್ಯಮಂತ್ರಿ ಎಂದು ನಾನು ಸಹಿಸಿಕೊಂಡರೆ, ನಮ್ಮ ಜೀವನದಲ್ಲೇ ಆಟ ಆಡ್ತಿದ್ದಾರೆ. ನಮ್ಮ ಸಂಸಾರದಲ್ಲಿ ನಿಮ್ಮ ಪಾತ್ರವೇನು? ನಿಮ್ಮ ಖುರ್ಚಿ ಉಳಿಸಿಕೊಳ್ಳಲು ಇನ್ನೊಬ್ಬರ ಕಟುಂಬ ಏಕೆ ಒಡೆಯುತ್ತೀರ? ನಮಗೂ ಬೆಂಬಲ, ಶಕ್ತಿ ಇದೆ. ಹೆಣ್ಣು ಮಕ್ಕಳೆಂದರೆ ಏನಂದುಕೊಂಡಿದ್ದೀರ? ನಮಗೂ ನ್ಯಾಯ ಎಂದರೆ ಏನು ಎಂದು ಗೊತ್ತಿದೆ. ನನ್ನ ಜೀವನವನ್ನು ತುಳಿದರು, ರಾಮದಾಸ್ ಅವರಾದರೂ ಮುಂದೆ ಬರಲಿ ಎಂದು ಕಾಯುತ್ತಿದ್ದೆವು. ಈಗ ಅದೂ ಆಗಲಿಲ್ಲ. ನಾವು ಮೂಲ ಬಿಜೆಪಿಗರು. ನೀವು ಪಕ್ಷ ಒಡೆದು ಹೋಗಿ ಈಗ ನಮ್ಮನ್ನೇ ತುಳಿಯುತ್ತಿದ್ದೀರ. ನಿಮ್ಮ ಹುಳುಕುಗಳನ್ನೆಲ್ಲ ಹೊರಗೆ ತೆಗೆಯುತ್ತೇವೆ. ಜೀವ ಇರುವವರೆಗೂ ರಾಮದಾಸ್ ಬಿಡಲ್ಲ. ಹತ್ತು ಜನ್ಮ ಬಂದರೂ ರಾಮದಾಸ್ ಬಿಡುವುದಿಲ್ಲ" ಎಂದು ಎಚ್ಚರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+