ಭರ್ಜರಿ ಚಪ್ಪಾಳೆ ತಟ್ಟುವ ಜನ ಯಾವ ಪಕ್ಷಕ್ಕೆ ವೋಟ್ ಹಾಕ್ತಾರೆ?
ಮೈಸೂರು, ಮಾರ್ಚ್ 23 : ವಿಧಾನಸಭಾ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮೂರು ರಾಜಕೀಯ ಪಕ್ಷಗಳು ಸಾರ್ವಜನಿಕ ಸಮಾವೇಶದ ಹೆಸರಲ್ಲಿ ಲಕ್ಷಾಂತರ ಜನರನ್ನು ಸೇರಿಸಿ ಒಂದರ ಹಿಂದೆ ಒಂದರಂತೆ ಸಮಾವೇಶವನ್ನು ನಡೆಸುತ್ತಲೇ ಇದೆ.
ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಜನರು ಕೂಡ ಅಂದು ನಾಯಕರು ಮಾತನಾಡುವ ಭಾಷಣಕ್ಕೆ ಕೇಕೆ ಹಾಕಿ, ಚಪ್ಪಾಳೆ ತಟ್ಟಿ ಪ್ರೋತ್ಸಾಹ ನೀಡುತ್ತಾರೆ. ಆದರೆ ಈ ಸಮಾವೇಶಗಳಲ್ಲಿ ಕೇಳಿಬರುವ ಚಪ್ಪಾಳೆ ಎಷ್ಟರ ಮಟ್ಟಿಗೆ ಮತಗಳಾಗಿ ಪರಿವರ್ತನೆಯಾಗುತ್ತದೆ ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯೇ ಸರಿ.
ಚುನಾವಣಾ ಪ್ರಚಾರ ಚಿತ್ರಸಂಪುಟ : ಬಿಜೆಪಿ | ಕಾಂಗ್ರೆಸ್ | ಜೆಡಿಎಸ್
ಸಮಾವೇಶದ ಹಿನ್ನೆಲೆ : ಚುನಾವಣೆಗೆ ಆರು ತಿಂಗಳ ಮೊದಲೇ ಬಿಜೆಪಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ರಾಜ್ಯದ ವಿವಿಧ ಭಾಗಗಳಲ್ಲಿ ಒಂದಿಲ್ಲೊಂದು ನೆಪದಲ್ಲಿ ಬೃಹತ್ ಸಮಾವೇಶಗಳನ್ನು ನಡೆಸುತ್ತಿದ್ದಾರೆ. ಈ ವೇಳೆ ಲಕ್ಷಾಂತರ ಜನರನ್ನು ಸೇರಿಸಿ ಪ್ರತಿಪಕ್ಷಗಳನ್ನು ಟೀಕಿಸುತ್ತ ತಮ್ಮ ಅವಧಿಯಲ್ಲಿನ ಸಾಧನೆಯನ್ನು ಹೇಳಿಕೊಳ್ಳುವ ಪ್ರಯತ್ನ ಮಾಡುತ್ತಾರೆ.
ಆದರೆ ಈ ರೀತಿ ನಡೆಯುವ ಬಹುತೇಕ ಸಮಾವೇಶಗಳಲ್ಲಿ ಸಾರ್ವಜನಿಕರಿಂದ ಹೆಚ್ಚಾಗಿ ಅವರ ಪಕ್ಷದ ಕಾರ್ಯಕರ್ತರೇ ಭಾಗವಹಿಸುತ್ತಾರೆ. ಆದ್ದರಿಂದ ಸಮಾವೇಶದಲ್ಲಿ ಕಾಣಿಸಿಕೊಳ್ಳುವ ಜನರ ಅಭಿಪ್ರಾಯ ಆ ಭಾಗದ ಜನರ ಮನಸ್ಥಿತಿ ಎಂದುಕೊಳ್ಳುವುದು ಕಷ್ಟ. ಇನ್ನು ಅನೇಕರು ಮೂರು ಪಕ್ಷಗಳು ನಡೆಸುವ ಸಮಾವೇಶಗಳಲ್ಲಿ ಭಾಗವಹಿಸಿ, ಮೂರು ಪಕ್ಷದ ನಾಯಕರ ಪರ ಘೋಷಣೆ ಕೂಗುತ್ತಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಇಂತಹ ಮತದಾರರು ಯಾವ ಪಕ್ಷದ ಪರ ಅಂತಿಮವಾಗಿ ನಿಲ್ಲುತ್ತಾರೆ ಎಂಬುದು ಕಷ್ಟ. ಕೆಲವು ಭಾಗದಲ್ಲಿ ಸ್ಥಳೀಯ ನಾಯಕರು ಹಾಗೂ ಟಿಕೆಟ್ ಆಕಾಂಕ್ಷಿಗಳು ತಮ್ಮ ಶಕ್ತಿಯನ್ನು ಪಕ್ಷದ ನಾಯಕರಿಗೆ ತೋರಿಸಬೇಕೆಂಬ ಉದ್ದೇಶದಿಂದಲೇ ಬಲವಂತವಾಗಿ ಜನರನ್ನು ಕೂಡಿ ಹಾಕುತ್ತಾರೆ ಎನ್ನುವ ಮಾತಿದೆ. ಈ ರೀತಿ ಬಲವಂತಕ್ಕೆ ಬಂದು ಕುಳಿತುಕೊಳ್ಳುವವರು ಅದೇ ಪಕ್ಷಕ್ಕೆ ಮತ ನೀಡುತ್ತಾರೆ ಎಂದು ನಂಬುವುದು ಕಷ್ಟ ಸಾಧ್ಯ.
ಭಾಷಣಗಳಿಗೆ ಚಪ್ಪಾಳೆ ತಟ್ಟುತ್ತಾರೆ: ಮತ ಹಾಕುವುದು ಅನುಮಾನ
ಸಮಾವೇಶದಲ್ಲಿ ಭಾಗವಹಿಸುವ ಜನಸಂಖ್ಯೆ ಮತಗಳಾಗಿ ಪರಿಗಣಿಸುವುದಿಲ್ಲ ಎನ್ನುವ ಸತ್ಯ, ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರಿಗೂ ಅರಿವಿದೆ. ಆದರೂ ಎಲ್ಲಾ ನಾಯಕರು ಚಪ್ಪಾಳೆಗಳು ಮತಗಳಾಗಿ ಪರಿವರ್ತನೆಯಾಗುತ್ತದೆ ಎಂಬ ಮಾತನ್ನು ಹೇಳಿಕೊಳ್ಳುತ್ತಾರೆ. ಆದರೆ ಈ ಸಮಾವೇಶಗಳಿಂದ ಹೆಚ್ಚುವರಿ ಮತಗಳು ಪಕ್ಷಕ್ಕೆ ಬಂದರೂ ಅದು ದೊಡ್ಡ ವಿಷಯವೆಂದು ಹಿರಿಯ ರಾಜಕಾರಣಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕೆಲ ಸಮಾವೇಶಗಳ ಮಾಹಿತಿ ಇಲ್ಲಿದೆ
ಪರಿವರ್ತನಾ ಯಾತ್ರೆ : ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಹಲವೆಡೆ ಭಾಗವಹಿಸಿದ್ದ ಬಿಜೆಪಿ ಪರಿವರ್ತನಾ ಕಾರ್ಯಕ್ರಮದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಜನ ಸೇರಿದ್ದರು. ಆದರೆ ಅಂದು ಸೇರಿದ್ದ ಎಲ್ಲರೂ ಬಿಜೆಪಿಗೆ ಮತ ನೀಡುತ್ತಾರೆ ಎನ್ನುವ ಯಾವುದೇ ಭರವಸೆ ಇಲ್ಲ. ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅನೇಕರು ಬಿಜೆಪಿಗೆ ವೋಟ್ ನೀಡುವುದಕ್ಕಿಂತ ಹೆಚ್ಚಾಗಿ ಮೋದಿ ಅವರನ್ನು ಹತ್ತಿರದಿಂದ ನೋಡಬೇಕೆಂಬ ಕಾರಣಕ್ಕೆ ಆಗಮಿಸಿರುತ್ತಾರೆ. ರಾಜ್ಯದ ವಿವಿಧ ಭಾಗದಲ್ಲಿ ಬಿಜೆಪಿಯಿಂದ ನವ ಕರ್ನಾಟಕ ನಿರ್ಮಾಣದ ಹೆಸರಿನಲ್ಲಿ ಅನೇಕ ಕಾರ್ಯಕ್ರಮಗಳಲ್ಲಿಯೂ ಇದೇ ವರೆಸೆ. ಈ ವೇಳೆ ಬಿಜೆಪಿ ಅಭ್ಯರ್ಥಿಗಳ ಪ್ರಚಾರಕ್ಕಾಗಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಸೇರಿದಂತೆ ಸಾಲು ಸಾಲು ನಾಯಕರು ಆಗಮಿಸುತ್ತಾರೆ. ಅಷ್ಟೇ ಏಕೆ ಫಿಲಂ ಸ್ಟಾರ್ ಕೂಡ ಆಗಮಿಸುತ್ತಾರೆ. ಆದರೆ ಇವರನ್ನು ನೋಡಿಕೊಂಡು ಸ್ಥಳೀಯ ಅಭ್ಯರ್ಥಿಗೆ ಮತ ಏಕೆ ನೀಡಬೇಕೆಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ.
ಕಾಂಗ್ರೆಸ್ ಗೆ ಸಿಗಲಿದೆಯಾ ಜನಾಶೀರ್ವಾದ ?
ಕಾಂಗ್ರೆಸ್ ನ ಜನಾಶೀರ್ವಾದ ಯಾತ್ರೆ: ಇನ್ನು ಜನಾಶೀರ್ವಾದ ಯಾತ್ರೆಯ ಹೆಸರಿನಲ್ಲಿ ರಾಜ್ಯದ ಮೂಲೆ ಮೂಲೆಗಳಲ್ಲಿ ಪ್ರವಾಸ ನಡೆಸುತ್ತಿರುವ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸಿಗುತ್ತಿರುವ ಜನಬೆಂಬಲ ಮತಗಳಾಗಿ ಎಷ್ಟರ ಮಟ್ಟಿಗೆ ಪರಿವರ್ತನೆಯಾಗಲಿವೆ ಎನ್ನುವ ಮೇಲೆ ಯಾತ್ರೆಯ ಯಶಸ್ಸನ್ನು ಅಳೆಯಬಹುದು. ಈ ಹಿಂದೆ ಗುಜರಾತ್ ನಲ್ಲಿ ನಡೆದ ಸಾಲು -ಸಾಲು ಕಾಂಗ್ರೆಸ್ ಸಮಾವೇಶಗಳಲ್ಲಿ ಲಕ್ಷಾಂತರ ಜನ ಭಾಗವಹಿಸಿ ರಾಹುಲ್ ಭಾಷಣಕ್ಕೆ ಚಪ್ಪಾಳೆ ತಟ್ಟಿದ್ದರು. ಆದರೆ ಅಂತಿಮವಾಗಿ ಬಿಜೆಪಿ ಚುನಾವಣೆಯಲ್ಲಿ ಗೆಲುವು ಸಾಧಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯುವಲ್ಲಿ ಯಶ ಕಂಡಿತ್ತು. ಅದೇ ರೀತಿ ರಾಜ್ಯದಲ್ಲಿಯೂ ಚಪ್ಪಾಳೆಯೊಂದಿಗೆ ಬರುವ ಮತಗಳೆಷ್ಟು ಎನ್ನುವ ಚಿಂತೆಯಲ್ಲಿ ಕಾಂಗ್ರೆಸ್ ನಾಯಕರಿದ್ದಾರೆ. ರಾಜ್ಯದಲ್ಲಿಯೂ ಗುಜರಾತ್ ಮಾದರಿಯಲ್ಲಿ ರಾಹುಲ್ ಗಾಂಧಿ ಆರಂಭಿಸಿರುವ ಯಾತ್ರೆಯಲ್ಲಿ ಜನ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಮುಂಬೈ ಕರ್ನಾಟಕ ಭಾಗದಲ್ಲಿ ಮೂರು ದಿನಗಳ ಕಾಲ ನಡೆದ ಭರ್ಜರಿ ಪ್ರಚಾರದ ರಾಲಿಯಲ್ಲಿ ಲಕ್ಷಗಳ ಲೆಕ್ಕದಲ್ಲಿ ಸಾರ್ವಜನಿಕರು ಬಂದು ಭಾಷಣಕ್ಕೆ ಚಪ್ಪಾಳೆ ಹೊಡೆದಿದ್ದಾರೆ. ಆದರೆ ಇದರಲ್ಲಿ ಎಷ್ಟು ನೂತನ ಕಾಂಗ್ರೆಸ್ ಮತದಾರರು ಸೇರಿದ್ದಾರೆ ಎನ್ನುವುದು ಕಾಲವೇ ನಿರ್ಧರಿಸಲಿದೆ .
ಜೆಡಿಎಸ್ ಗೂ ಇದೇ ಸ್ಥಿತಿ
ರಾಷ್ಟ್ರೀಯ ಪಕ್ಷಗಳಿಗೆ ಸೆಡ್ಡು ಹೊಡೆದು ಈ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯಲು ಸಜ್ಜಾಗಿರುವ ಜೆಡಿಎಸ್ ನ ಪರಿಸ್ಥಿತಿ ಭಿನ್ನವಾಗಿಲ್ಲ. ಕುಮಾರ ಪರ್ವದ ಹೆಸರಿನಲ್ಲಿ ಹಂತ - ಹಂತವಾಗಿ ರಾಜ್ಯದ ಎಲ್ಲ ಕ್ಷೇತ್ರದಲ್ಲಿ ನಡೆಯುತ್ತಿರುವ ಸಮಾವೇಶಕ್ಕೆ ಕುಮಾರಸ್ವಾಮಿ ಅವರಿಗೆ ಉತ್ತಮ ಬೆಂಬಲ ದೊರೆಯುತ್ತಿದೆ ಎನ್ನಲಾಗಿದೆ. ಆದರೆ ಈ ಎಲ್ಲ ಚಪ್ಪಾಳೆ ಶಿಳ್ಳೆಗಳು ಮತ ಪರಿವರ್ತನೆಗೆ ಆಗುತ್ತಿಲ್ಲ. ಒಂದು ವೇಳೆ ಈ ಜನರೆಲ್ಲ ಜೆಡಿಎಸ್ ಗೆಬೆಂಬಲ ನೀಡಿದರೆ ಮುಂದಿನ ಬಾರಿ ಖಂಡಿತವಾಗಿ ಜೆಡಿಎಸ್ ಅಧಿಕಾರದ ಗದ್ದುಗೆ ಏರಲಿದೆ ಎಂದು ಜೆಡಿಎಸ್ ಮುಖಂಡರೊಬ್ಬರು ಪ್ರತಿಕ್ರಿಯಿಸಿದ್ದಾರೆ.