ಮಳೆಗಾಗಿ ಬರಿಗಾಲಲ್ಲಿ ಬೆಟ್ಟ ಏರಿದ ಹಿರೀಕ್ಯಾತನಹಳ್ಳಿ ಗ್ರಾಮಸ್ಥರು
ಮೈಸೂರು, ಜೂನ್ 27: ಗ್ರಾಮೀಣ ಪ್ರದೇಶದ ಜನರು ತಮ್ಮ ಊರಿನ, ಅದರಲ್ಲೂ ಮಳೆ ಕರುಣಿಸುವ ದೇವರ ಪೂಜೆಯನ್ನು ಮಾಡುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ.
ಕೆಲವು ಊರುಗಳಲ್ಲಿ ಮುಂಗಾರು ಆರಂಭದ ಸಮಯದಲ್ಲಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿ, ಮಳೆ- ಬೆಳೆ ಕರುಣಿಸುವಂತೆ ದೇವರಲ್ಲಿ ಬೇಡಿಕೊಳ್ಳಲಾಗುತ್ತದೆ. ಇದು ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದ್ದು, ಈಗಲೂ ಮುಂದುವರಿಯುತ್ತಿದೆ.
ಹುಣಸೂರು ತಾಲೂಕಿನ ಹಿರೀಕ್ಯಾತನಹಳ್ಳಿ ಗ್ರಾಮದ ಜನರು ಪ್ರತಿ ವರ್ಷದಂತೆ ಈ ವರ್ಷವೂ ಸ್ಥಳೀಯ ಕುಂತಿ ಬೆಟ್ಟದಲ್ಲಿ ನೆಲೆಸಿರುವ ಕುಂತಮ್ಮ ದೇವರಿಗೆ ಪೂಜೆ ಮಾಡಿ, ಮಳೆ- ಬೆಳೆ ಆಗುವಂತೆ ಪ್ರಾರ್ಥಿಸಿದ್ದಾರೆ.
ಪುರುಷರು ಮತ್ತು ಮಹಿಳೆಯರು ಬರಿಗಾಲಿನಲ್ಲಿ ಬೆಟ್ಟವನ್ನೇರಿ, ಪೂಜಾ ಕೈಂಕರ್ಯ ಮಾಡಿ, ಕುಂತಮ್ಮ ದೇವಿಯನ್ನು ಪ್ರಾರ್ಥಿಸಿದರೆ ಮಳೆ ಬಂದು ಜನ- ಜಾನುವಾರು ನೆಮ್ಮದಿಯಿಂದ ಬದುಕಲು ಸಾಧ್ಯ ಎಂಬುದು ನಂಬಿಕೆ. ಹೀಗಾಗಿ ಅಲ್ಲಿಗೆ ತೆರಳಿ ಪೂಜೆಯನ್ನು ಮಾಡುತ್ತಾರೆ.
ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯದಂತೆ ಈ ಬಾರಿಯೂ ಗ್ರಾಮದ ಮಹಿಳೆಯರು ಮತ್ತು ಪುರುಷರು ಸ್ನಾನ ಮಾಡಿ, ಮಡಿಯನ್ನುಟ್ಟು, ಬರಿಗಾಲಿನಿಂದ ತಮಟೆ ವಾದ್ಯದೊಂದಿಗೆ ಮೆರವಣಿಗೆಯಲ್ಲಿ ತೆರಳಿ, ಬೆಟ್ಟ ಹತ್ತಿದರು. ಕುಂತಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಆ ನಂತರ ಅಲ್ಲಿಯೇ ಅಡುಗೆ ಮಾಡಿ, ಹಣ್ಣು- ತುಪ್ಪ ನೈವೇದ್ಯ ಮಾಡಿ, ದೇವರಿಗೆ ಅರ್ಪಿಸಿದರು. ಅಲ್ಲದೆ, ಸಾವಿರಾರು ಮಂದಿಗೆ ಸಿಹಿ ಊಟ ಬಡಿಸಿ, ದೇವರ ದರ್ಶನ ಪಡೆದರು. ಉತ್ತಮ ಮಳೆ ಬೀಳಲಿ ಎಂದು ಬೇಡಿಕೊಂಡರು.