ಸಿಎಂ ಸಿದ್ದರಾಮಯ್ಯ ಕೇಜ್ರಿವಾಲ್ ದಾರಿ ತುಳಿಯದೆ ರಾಜೀನಾಮೆ ಕೊಡಲಿ; ಪ್ರತಾಪ್ ಸಿಂಹ ಒತ್ತಾಯ
ಮುಡಾ ಸೈಟು ಹಂಚಿಕೆ ಹಗರಣಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದು, ಸಿದ್ದರಾಮಯ್ಯ ಎಲ್.ಕೆ.ಅಡ್ವಾಣಿ, ಬಿ.ಎಸ್.ಯಡಿಯೂರಪ್ಪ ಅವರನ್ನು ಅನುಕರಣೆ ಮಾಡಿ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಅದುಬಿಟ್ಟು ಅರವಿಂದ ಕೇಜ್ರಿವಾಲ್ ಹಾದಿ ಹಿಡಿಯಬಾರದು ಎಂದು ಮಾಜಿ ಸಂಸದ ಪ್ರತಾಪಸಿಂಹ ಒತ್ತಾಯಿಸಿದರು.
ಎಕ್ಸ್ನಲ್ಲಿ ವಿಡಿಯೋ ಪೋಸ್ಟ್ ಮಾಡಿರುವ ಅವರು, ಸಿದ್ದರಾಮಯ್ಯ ಅವರು ತಮ್ಮ ಪತ್ನಿ ಹೆಸರಿನಲ್ಲಿ ತೆಗೆದುಕೊಂಡಿರುವ 14 ಸೈಟ್ಗಳನ್ನು ವಾಪಸ್ ನೀಡಿ ತನಿಖೆಗೆ ಆಗ್ರಹಿಸುವಂತೆ ಒಂದು ತಿಂಗಳ ಹಿಂದೆಯೇ ಒತ್ತಾಯಿಸಿದ್ದೆ. ಹೀಗೆ ಮಾಡಿದ್ದರೆ ಎಲ್ಲಾ ಕಳ್ಳರು ಸಿಕ್ಕಿ ಬೀಳುತ್ತಿದ್ದರು. ಆದರೆ, ನಾನು ನೀಡಿದ ಕಾಳಜಿಯುಕ್ತ ಸಲಹೆಯನ್ನು ಸ್ವೀಕರಿಸದ ಪರಿಣಾಮ ಇಂದು ಸಿಎಂ ಸಿದ್ದರಾಮಯ್ಯ ಗಂಡಾಂತರವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.

ನಾವು ಪಾದಯಾತ್ರೆ ನಡೆಸುವಾಗ ಡಿ.ಕೆ.ಶಿವಕುಮಾರ್ ಅವರು ಶಿಕಾರಿಪುರಕ್ಕೆ ಡಮ್ಮಿ ಅಭ್ಯರ್ಥಿ ಹಾಕಿದ್ದು ನಾವೇ ಎನ್ನುತ್ತಾರೆ. ಬಿ ಫಾರಂಗೆ ಸಹಿ ಹಾಕದೆ ನಾಗರಾಜುಗೌಡರಿಗೆ ಟಿಕೆಟ್ ತಪ್ಪಿಸಿದ್ದು ಯಾರು? ಇದು ತಾನೆ ಹೊಂದಾಣಿಕೆ ರಾಜಕೀಯ? ಈಗಲಾದರೂ ಅಡ್ಜೆಸ್ಟ್ಮೆಂಟ್ ರಾಜಕೀಯ ಕೊನೆಯಾಗಿ, ಸ್ವಚ್ಛ ರಾಜಕೀಯ ಬರಬೇಕು. ಕಾಂಗ್ರೆಸ್ ಸರ್ಕಾರ ಆರೋಪಿಸಿರುವ ಪ್ರಕರಣವನ್ನು ತನಿಖೆಗೆ ಒಪ್ಪಿಸಬೇಕು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ನಾನು ರಾಜೀನಾಮೆ ಕೊಡುವುದಿಲ್ಲ, ಜಗ್ಗಲ್ಲ, ಬಗ್ಗಲ್ಲ ಅನ್ನುವುದನ್ನೆಲ್ಲ ಬಿಡಬೇಕು. ಕಾನೂನಿಗೆ ಪ್ರತಿಯೊಬ್ಬರೂ ಗೌರವ ಕೊಡಬೇಕು. ಹಿಂದುಳಿದ ವರ್ಗಗಳ ನಾಯಕ ಎನ್ನಿಸಿಕೊಂಡಿರುವ ನೀವು ಒಳ್ಳೆಯ ಕೆಲಸ ಮಾಡಿದ್ದೀರಿ. ತಕ್ಷಣ ರಾಜೀನಾಮೆ ಕೊಟ್ಟು, ಕುರ್ಚಿಯನ್ನು ಬಿಟ್ಟು ಬನ್ನಿ. ನಿಮ್ಮ ಮೇಲೆ ಗೌರವ ಇನ್ನೂ ಹೆಚ್ಚಾಗುತ್ತದೆ ಎಂದರು.
5 ಸಾವಿರ ನಿವೇಶನ ಅಕ್ರಮ ಹಂಚಿಕೆ
2019ರಲ್ಲಿ ಮುಡಾ ಸುಪರ್ದಿಯಲ್ಲಿ 9 ಸಾವಿರ ನಿವೇಶನಗಳಿದ್ದವು. ಈ ಪೈಕಿ 5 ಸಾವಿರಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ. ಹಿಂದಿನ ಬಿಜೆಪಿ ಹಾಗೂ ಈಗಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ನಿಯಮ ಬಾಹಿರವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ. ಮುಡಾದ ಕರ್ಮಕಾಂಡದ ರೂವಾರಿಗಳಾದ, ಈ ಹಿಂದಿನ ಮುಡಾ ಆಯುಕ್ತರಾದ ನಟೇಶ್ ಹಾಗೂ ದಿನೇಶ್ ಅವರಿಬ್ಬರನ್ನು ಈ ಕೂಡಲೇ ಬಂಧಿಸಬೇಕು ಎಂದು ಒತ್ತಾಯಿಸಿದರು.












Click it and Unblock the Notifications