10 ಲಕ್ಷಕ್ಕಿಂತ ಅಧಿಕ ಹಣ ಡ್ರಾ ಮಾಡಿದರೆ ಪೊಲೀಸ್ ಕಣ್ಗಾವಲು!
ಮೈಸೂರು, ಫೆಬ್ರವರಿ 18; ಮೈಸೂರು ನಗರ ವ್ಯಾಪ್ತಿಯಲ್ಲಿ ಪ್ರತಿದಿನ ವಿವಿಧ ಬ್ಯಾಂಕುಗಳಲ್ಲಿ 10 ಲಕ್ಷಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡುವವರಿಗೆ ಭದ್ರತೆ ಒದಗಿಸಲು ಪೊಲೀಸ್ ಇಲಾಖೆ ಮುಂದಾಗಿದೆ. ಈ ಹಣ ಡ್ರಾ ಮಾಡುವವರ ವಿವರವನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ನೀಡುವಂತೆ ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಎಲ್ಲಾ ಬ್ಯಾಂಕುಗಳಿಗೆ ಸೂಚಿಸಿದ್ದಾರೆ.
ಮೂರು ದಿನಗಳ ಹಿಂದೆ ವಾಣಿ ವಿಲಾಸ್ ಮೊಹಲ್ಲಾದಲ್ಲಿ ಎಚ್ಡಿಎಫ್ಸಿ ಬ್ಯಾಂಕ್ ಮುಂದೆ ಮನೋಜ್ ಕುಮಾರ್ ಎಂಬವರು ಕಾರನ್ನು ನಿಲ್ಲಿಸಿದ್ದರು. ಕಾರಿನಲ್ಲಿ 10 ಲಕ್ಷ ರೂ.ಗಳನ್ನು ಇಟ್ಟಿದ್ದರು. ಇದನ್ನು ಗಮನಿಸಿದ್ದ ದುಷ್ಕರ್ಮಿಗಳು ಕಾರಿನ ಗಾಜು ಒಡೆದು ಹಣ ಎಗರಿಸಿ ಪರಾರಿಯಾಗಿದ್ದರು.
ಈ ಹಿನ್ನಲೆಯಲ್ಲಿ ಅಧಿಕ ಹಣದೊಂದಿಗೆ ಸಂಚರಿಸುವ ಗ್ರಾಹಕರಿಗೆ ಭದ್ರತೆಯೊದಗಿಸುವ ದೃಷ್ಟಿಯಿಂದ ಐದು ಅಂಶಗಳನ್ನೊಳಗೊಂಡ ಪತ್ರವನ್ನು ಬ್ಯಾಂಕ್ ವ್ಯವಸ್ಥಾಪಕರಿಗೆ ಬರೆಯುವಂತೆ ಆಯುಕ್ತರು ತಿಳಿಸಿದ್ದು, ಅದರಂತೆ ವ್ಯವಸ್ಥಾಪಕರಿಗೆ ಕಳುಹಿಸಲಾಗಿದೆ ಎಂದು ಡಿಸಿಪಿ ಡಾ. ಎ. ಎನ್. ಪ್ರಕಾಶ್ ಗೌಡ ತಿಳಿಸಿದ್ದಾರೆ.

ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವವರ ಸುರಕ್ಷತೆಯ ದೃಷ್ಟಿಯಿಂದ ಈ ಮಾಹಿತಿ ನೀಡುವಂತೆ ಬ್ಯಾಂಕಿನವರನ್ನು ಕೋರಲಾಗಿದೆ. ಅಲ್ಲದೆ ಬ್ಯಾಂಕಿನೊಳಗೆ, ಹೊರಗೆ ಮತ್ತು ರಸ್ತೆಗೆ ಸಿಸಿಟಿವಿ ಅಳವಡಿಸಿ ಸುಸ್ಥಿತಿಯಲ್ಲಿಡುವಂತೆ ಸೂಚಿಸಲಾಗಿದೆ.
ಬ್ಯಾಂಕ್ ಸುತ್ತಮುತ್ತ ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಅಂತಹವರ ವಿರುದ್ಧ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ. ಬ್ಯಾಂಕಿನ ಭದ್ರತಾ ಸಿಬ್ಬಂದಿಗಳು ಕೂಡ ಜಾಗೃತೆ ಯಿಂದ ಇರುವಂತೆ ಎಲ್ಲಾ ಬ್ಯಾಂಕಿನ ಮುಖ್ಯಸ್ಥರಿಗೆ ಪತ್ರ ಬರೆಯಲಾಗಿದೆ.












Click it and Unblock the Notifications