ನಿಧಿಗಾಗಿ ಬಾಲಕನ ಬಲಿ ನೀಡಲು ಮುಂದಾದವರ ವಿಚಾರಣೆ ರಹಸ್ಯ ಸ್ಥಳದಲ್ಲಿ
ಮೈಸೂರು, ನವೆಂಬರ್ 11 : ನಿಧಿ ಆಸೆಗಾಗಿ ಜಮೀನಿನಲ್ಲಿ 11 ವರ್ಷದ ಬಾಲಕನನ್ನು ಬಲಿ ಕೊಡಲು ಮುಂದಾದ ಘಟನೆ ಮೈಸೂರು ಜಿಲ್ಲೆ ವ್ಯಾಪ್ತಿಯಲ್ಲಿ ನಡೆದಿದೆ. ಜಿಲ್ಲೆಯ ನಂಜನಗೂಡು ತಾಲೂಕಿನ ನೇರಳೆ ಮತ್ತು ಹೆಮ್ಮರಗಾಲದ ಮುಖ್ಯ ರಸ್ತೆಯಲ್ಲಿರುವ ಶಿವಪ್ಪ ಎಂಬುವರ ಜಮೀನಿನಲ್ಲಿ ಘಟನೆ ನಡೆದಿದ್ದು, ಮಾಲೀಕನ ಪುತ್ರ ಸುಧೀಂದ್ರ ನಿಧಿಯಾಸೆಗೆ ಇಂತಹ ಕೃತ್ಯಕ್ಕೆ ಮುಂದಾಗಿದ್ದ.
ತನ್ನ ಜಮೀನಿನಲ್ಲಿ ನಿಧಿ ಇದೆ ಎಂದು ಗುಂಡಿ ತೋಡಿ, ಬಾಲಕನನ್ನು ಮುಚ್ಚುತ್ತಿದ್ದಾಗ ಪಕ್ಕದ ಜಮೀನಿನವರು ಪೊಲೀಸರಿಗೆ ದೂರವಾಣಿ ಮಾಡಿ, ವಿಷಯ ಮುಟ್ಟಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಮೂವರು ಸ್ಥಳೀಯರು ಹಾಗೂ ನಿಧಿ ಪೂಜೆ ಮಾಡಲು ಬಂದಿದ್ದ ಕೇರಳದ ಆರು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಗುಂಪಿನಲ್ಲಿ ಪ್ರಸಿದ್ಧ ಜ್ಯೋತಿಷಿಯೂ ಸೇರಿದ್ದಾನೆ.

ಜಮೀನಿನಲ್ಲಿ ನಿಧಿ ಇದೆ ಎಂದು ಗುಂಡಿ ತೋಡಿ, ಬಾಲಕನನ್ನು ಮುಚ್ಚಲು ಆರೋಪಿಗಳು ಸಿದ್ಧರಾಗಿದ್ದರು. ದಾಳಿ ವೇಳೆ ಬಲಿ ನೀಡುವ ಮುನ್ನ ನಡೆಸುವ ಪೂಜೆಗೆ ಬಳಸುವ ಹಲವಾರು ವಸ್ತುಗಳು ಸ್ಥಳದಲ್ಲಿ ಪತ್ತೆಯಾಗಿದ್ದು, ಬಲಿ ನೀಡಲು ಕರೆತಂದಿದ್ದ ಕೇರಳ ಮೂಲದ ಬಾಲಕನನ್ನು ರಕ್ಷಣೆ ಮಾಡಲಾಗಿದೆ.

ಈ ವಿಚಾರವಾಗಿ ಕೇರಳ ಮೂಲದ ಯುವಕರು ಹಾಗೂ ಸ್ಥಳೀಯರನ್ನು ಬಂಧಿಸಿರುವ ನಂಜನಗೂಡು ಪೊಲೀಸರು, ಗುಪ್ತ ಸ್ಥಳದಲ್ಲಿ ವಿಚಾರಣೆ ಮುಂದುವರೆಸಿದ್ದಾರೆ.











Click it and Unblock the Notifications