Breaking; ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಹೋಗುವ ಮುನ್ನ ತಿಳಿಯಿರಿ
ಮೈಸೂರು, ಏಪ್ರಿಲ್ 20; ಮೈಸೂರಿನ ಪ್ರಸಿದ್ಧ ಪ್ರವಾಸಿ ಸ್ಥಳ ಚಾಮುಂಡಿ ಬೆಟ್ಟ. ಬೆಟ್ಟಕ್ಕೆ ಮುಂಜಾನೆಯಿಂದ ತಡರಾತ್ರಿ ತನಕ ಜನರು ಹೋಗುತ್ತಲೇ ಇರುತ್ತಾರೆ. ಆದರೆ ಇನ್ನು ಮುಂದೆ ಹೀಗೆ ಹೋಗುವುದಕ್ಕೆ ತಡೆ ಬೀಳಲಿದೆ.
ಮೈಸೂರು ಪೊಲೀಸರು ಚಾಮುಂಡಿ ಬೆಟ್ಟದಲ್ಲಿ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ. ಇದರ ಭಾಗವಾಗಿ ಚಾಮುಂಡಿ ಬೆಟ್ಟದಲ್ಲಿ ಗಸ್ತು ತಿರುಗಲು ವಿಶೇಷ ತಂಡವನ್ನು ರಚನೆ ಮಾಡಿದ್ದಾರೆ.
ಚಾಮುಂಡಿ ಬೆಟ್ಟದಲ್ಲಿ ಪುಂಡರ ಕಾಟ ಹೆಚ್ಚಾಗುತ್ತಿದೆ. ಸರಗಳ್ಳತನಕ ಪ್ರಕರಣಗಳು ನಡೆಯುತ್ತಿವೆ. ಈ ಹಿನ್ನಲೆಯಲ್ಲಿ ಗಸ್ತು ತಿರುಗಲು ವಿಶೇಷ ತಂಡವನ್ನು ರಚನೆ ಮಾಡಲಾಗಿದೆ. ಈ ತಂಡ 24*7 ಗಸ್ತು ತಿರುಗಲಿದೆ.

ಗಸ್ತಿಗಾಗಿಯೇ ಎರಡು ವಾಹನಗಳನ್ನು ನಿಯೋಜನೆ ಮಾಡಲಾಗಿದೆ. ಬೆಟ್ಟಕ್ಕೆ ಬರುವವರು ಮತ್ತು ಹೋಗುವವರ ಮೇಲೆ ಸಹ ಈ ಗಸ್ತಿನ ತಂಡ ಕಣ್ಣಿಡಲಿದೆ. ವಾಹನಗಳ ತಪಾಸಣೆಯನ್ನು ಸಹ ಮಾಡಲಿದೆ.
ಚಾಮುಂಡಿ ಬೆಟ್ಟಕ್ಕೆ ನಿತ್ಯ ಸಾವಿರಾರು ಜನರು ಆಗಮಿಸುತ್ತಾರೆ. ದೇವರ ದರ್ಶನಕ್ಕೆ ಆಗಮಿಸುವ ಜನರ ಜೊತೆಗೆ ಮುಂಜಾನೆ ವಾಯುವಿಹಾರಕ್ಕೆ ಸಹ ಜನರು ಬರುತ್ತಾರೆ. ನಗರವಾಸಿಗಳಿಗೆ ಚಾಮುಂಡಿಬೆಟ್ಟ ಆಕ್ಸಿಜನ್ ಕಣಜ ಇದ್ದಂತೆ. ಹೀಗಾಗಿ ಉತ್ತಮ ಗಾಳಿ, ಮಾನಸಿಕ ನೆಮ್ಮದಿ, ಶರೀರಕ್ಕೆ ವ್ಯಾಯಾಮ, ಕಣ್ಣಿಗೆ ಹಸಿರಿನ ತಂಪು ಪಡೆಯಲು ಜನರು ಆಗಮಿಸುತ್ತಾರೆ.
ಪ್ರತಿದಿನ ಸಾವಿರ ಮೆಟ್ಟಿಲೇರಿ ಚಾಮುಂಡಿತಾಯಿಯ ದರ್ಶನ ಮಾಡುವವರ ಸಂಖ್ಯೆಯೂ ಹೆಚ್ಚಿದೆ. ಹಲವಾರು ವರ್ಷಗಳಿಂದ ನಿತ್ಯವೂ ಸಹ ಬೆಟ್ಟವೇರುವವರಿದ್ದಾರೆ. ಯುವಕರು, ಯುವತಿಯರು, ಪುರುಷರು, ವೃದ್ಧರು, ಮಹಿಳೆಯರು ಹೀಗೆ ಎಲ್ಲರೂ ಬೆಟ್ಟಕ್ಕೆ ಬರುತ್ತಾರೆ.
ಆಷಾಢ ಮಾಸದಲ್ಲಿ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಹೆಚ್ಚಿನ ಭಕ್ತರು ಆಗಮಿಸುತ್ತಾರೆ. ಕಳೆದ ವರ್ಷ ದೇವಾಲಯಕ್ಕೆ ಸಂಪರ್ಕ ಕಲ್ಪಿಸುವ ಮೆಟ್ಟಿಲುಗಳ ಮೇಲೆ ಯುವಕರು ಪಾನಗೋಷ್ಠಿ ನಡೆಸಿ ಮೋಜು ಮಾಡಿದ್ದರು. ಮದ್ಯದ ಬಾಟಲಿಗಳನ್ನು ಮೆಟ್ಟಿಲುಗಳ ಮೇಲೆಯೇ ಒಡೆದು ಹಾಕಿದ್ದರು.












Click it and Unblock the Notifications