ಸಮಾಜಸೇವೆ ಮಾಡುತ್ತಿರುವ ಪೊಲೀಸ್ ಪೇದೆ ಬಸಪ್ಪ ಕಾರ್ಯ ಶ್ಲಾಘನೀಯ
ಮೈಸೂರು, ಜನವರಿ 30: ವೃತ್ತಿಯಲ್ಲಿ ಪೊಲೀಸ್ ಪೇದೆಯಾಗಿದ್ದರೆ, ಪ್ರವೃತ್ತಿಯಲ್ಲಿ ಧಾರ್ಮಿಕ, ಸಾಮಾಜಿಕ, ಕೃಷಿ ಕಾರ್ಯಗಳನ್ನು ಮಾಡುತ್ತಾ ತನ್ನದೇ ಆದ ರೀತಿಯಲ್ಲಿ ಸಮಾಜ ಸೇವೆ ಮಾಡುತ್ತಿರುವ ಬಿ.ಕೆ.ಬಸಪ್ಪ ಇವತ್ತು ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಮೂಲತಃ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಬೈಚನಹಳ್ಳಿ ಗ್ರಾಮದ ರೈತ ಕುಟುಂಬದ ದಿವಂಗತ ಕರೀಗೌಡರ ಪುತ್ರರಾಗಿದ್ದು, ಸದ್ಯ ಹುಣಸೂರು ತಾಲೂಕಿನ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ರೈಲಿನಡಿ ಸಿಲುಕುತ್ತಿದ್ದ ಪ್ರಯಾಣಿಕನನ್ನು ರಕ್ಷಿಸಿದ ಪೊಲೀಸ್ ಪೇದೆ
ಇವರು ಇಲಾಖೆಯಲ್ಲಿ ಸುಮಾರು15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದ್ದು, ತನ್ನ ವೃತ್ತಿಗೆ ಯಾವುದೇ ರೀತಿಯಲ್ಲಿಯೂ ಚ್ಯುತಿ ಬಾರದಂತೆ ಕೆಲಸ ಮಾಡುತ್ತಾ ಉಳಿದ ಸಮಯಗಳಲ್ಲಿ ಧಾರ್ಮಿಕ ಮತ್ತು ಕೃಷಿಕಾರ್ಯವನ್ನು ಮಾಡುತ್ತಾ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜಸೇವೆ ಮಾಡಬೇಕೆನ್ನುವುದು ಬಿ.ಕೆ.ಬಸಪ್ಪ ಅವರ ರಕ್ತದಲ್ಲಿಯೇ ಬಂದಿದೆ.
ಹೀಗಾಗಿ ಠಾಣೆಗೆ ಸಮಸ್ಯೆಗಳನ್ನು ಹೊತ್ತು ಬರುವ ಸಾರ್ವಜನಿಕರಿಗೆ ಸಾಂತ್ವಾನ ಹೇಳಿ, ಮೇಲಾಧಿಕಾರಿಗಳ ಗಮನಕ್ಕೆ ತಂದು ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವ ಪ್ರಯತ್ನವನ್ನು ಮಾಡಿದ್ದಾರೆ. ಶನಿದೇವರ ಭಕ್ತರಾಗಿರುವ ಇವರು ಶನಿದೇವರ ದೇವಾಲಯ ನಿರ್ಮಿಸಿ ದೇವರಿಗೆ ದಿನನಿತ್ಯ ಪೂಜಾ ಕಾರ್ಯ ನಡೆಯುವಂತೆ ಮಾಡಿದ್ದಾರೆ. ಇನ್ನು ಶನಿ ದೇವಾಲಯ ನಿರ್ಮಿಸಿದ ಕಥೆಯೂ ಕೂಡ ರೋಚಕವೇ.
ಬಾಯಿ ಮಾತಿಗೆ ಹೇಳಿದ್ದರಂತೆ
ಸುಮಾರು 12 ವರ್ಷಗಳ ಹಿಂದೆ ಹುಣಸೂರು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬಸಪ್ಪ ಕಾರ್ಯನಿರ್ವಹಿಸುತ್ತಿದ್ದ ವೇಳೆಯಲ್ಲಿ ಒಬ್ಬ ಗಡ್ಡಧಾರಿ ಶನೇಶ್ವರ ಭಕ್ತನೊಬ್ಬ ತಳ್ಳುವ ಗಾಡಿಯಲ್ಲಿ ಶನಿದೇವರ ಮೂರ್ತಿಯನ್ನಿರಿಸಿಕೊಂಡು ದಿನನಿತ್ಯ ಠಾಣೆ ಮುಂದೆ ಬಂದು ದೇವರ ಗುಡಿ ಕಟ್ಟಬೇಕು. ಹಣ ಕೊಡಿ ಸ್ವಾಮಿ ಎಂದು ಪೀಡುಸುತ್ತಿದ್ದನಂತೆ. ಈ ವೇಳೆ ಆ ವ್ಯಕ್ತಿಗೆ ಮುಂದಿನ ದಿನಗಳಲ್ಲಿ ನಾನೇ ದೇವಸ್ಥಾನ ಕಟ್ಟಿಸಿಕೊಡುತ್ತೇನೆ ಎಂದು ಬಾಯಿ ಮಾತಿಗೆ ಹೇಳಿದ್ದರಂತೆ.
ಭತ್ತದ ಕಣಜದಲ್ಲಿರಿಸಿ ಪೂಜಿಸಿದರು
ಅದರಂತೆ ಒಂದು ಚಿಕ್ಕ ಶನಿದೇವರ ಗುಡಿಯನ್ನು ಹುಣಸೂರು ಹೊರಹೊಲಯದ ಕೆ.ಆರ್.ನಗರ ಮುಖ್ಯ ರಸ್ತೆ ಕಲ್ಕುಣಿಕೆ ರಂಗನಾಥ ಬಡಾವಣೆಯ ಪಕ್ಕದಲ್ಲೇ ನಿರ್ಮಿಸಿದ್ದರು. ಆದರೆ ಮುಂದೆ ಸುಪ್ರೀಂ ಕೋರ್ಟ್ ಆದೇಶದಂತೆ ಆ ದೇವಸ್ಥಾನವನ್ನು ತೆರವುಗೊಳಿಸಲಾಯಿತು. ಆದರೆ ದೇವರಿಗೊಂದು ದೇವಾಲಯ ಕಟ್ಟಲೇಬೇಕೆಂದು ಹಠಕ್ಕೆ ಬಿದ್ದ ಅವರು ಗುಡಿಯನ್ನು ಕೆಡವಿದ ವೇಳೆ ಶನೈಶ್ಚರಸ್ವಾಮಿ ಮೂರ್ತಿಯನ್ನು ಭಿನ್ನವಾಗದಂತೆ ಭತ್ತದ ಕಣಜದಲ್ಲಿರಿಸಿ ಭಕ್ತಿಯಿಂದ ಪೂಜಿಸುತ್ತಾ ಬಂದರು.
ಪರಿಚಿತರಿಂದಲೇ ಅಪಹರಣವಾಗಿದ್ದ ಮಗುವನ್ನು ರಕ್ಷಿಸಿದ ಪೊಲೀಸರು
ಪ್ರತಿ ಶನಿವಾರ ಅನ್ನದಾನ
ಈ ನಡುವೆ ಎಲ್ಲರ ಸಹಕಾರದಿಂದ ಹಿಂದೆ ಕೆಡವಲಾದ ಹಳೆಯ ದೇಗುಲದ ಪಕ್ಕದಲ್ಲೇ ಖಾಲಿ ನಿವೇಶನ ಖರೀದಿಸಿ ಭಕ್ತರ ಸಹಕಾರದಿಂದ ಒಂದು ಸುಂದರವಾದ ಬೃಹತ್ ಶನೈಶ್ಚರ ದೇವಸ್ಥಾನವನ್ನು ನಿರ್ಮಿಸಲು ಮುಂದಾದರು. ಇದಕ್ಕೆ ಉತ್ತಮ ಸ್ಪಂದನೆ ದೊರೆತಿದ್ದರಿಂದ ದೇಗುಲ ನಿರ್ಮಾಣದ ಕಾರ್ಯ ಬಹುಬೇಗವೇ ಪೂರ್ಣಗೊಂಡಿತ್ತು. ಇದೀಗ ಆ ದೇಗುಲಕ್ಕೆ ನಾಲ್ಕು ವರ್ಷಗಳಾಗಿದ್ದು, ಇತ್ತೀಚೆಗೆ 18 ಜನರ ಸಮಿತಿಯೊಂದನ್ನು ರಚಿಸಿ, ಪ್ರತಿ ಶನಿವಾರ ಅನ್ನದಾನ ಮಾಡಲಾಗುತ್ತಿದೆ.
ಬಸಪ್ಪ ಕಾರ್ಯ ಶ್ಲಾಘನೀಯ
ಇಷ್ಟಕ್ಕೆ ಸುಮ್ಮನಾಗದ ಬಸಪ್ಪ ಅವರು ನಗರಕ್ಕೆ ಹೊಂದಿಕೊಂಡಂತಿರುವ ಹಾಲಗೆರೆ ಗ್ರಾಮದ ಸಮೀಪವಿರುವ ಎರಡು ಎಕರೆ ಭೂಮಿಯಲ್ಲಿ ಬಾಳೆ, ಟೋಮ್ಯಾಟೋ, ಹಸಿಮೆಣಸಿನಕಾಯಿ, ಹೂಕೋಸು, ನವಿಲುಕೋಸು, ದಿನನಿತ್ಯ ಬಳಕೆಯ ಸೊಪ್ಪುಗಳನ್ನು ಹೆಚ್ಚು ರಸಗೊಬ್ಬರ ಬಳಸದೆ, ಸಾವಯವ ಗೊಬ್ಬರದಿಂದ ಬೆಳೆದು ತಮ್ಮ ದೇವಾಲಯದ ಅನ್ನದಾನಕ್ಕೆ ಬಳಸುತ್ತಿದ್ದಾರೆ ಜತೆಗೆ ಅಕ್ಕಪಕ್ಕದ ಪರಿಚಿತರಿಗೆ. ಉಚಿತವಾಗಿ ನೀಡುತ್ತಿದ್ದಾರೆ. ಇವರ ಕಾರ್ಯಕ್ಕೆ ಪತ್ನಿ ಕಲಾವತಿ ಕೂಡ ಸಾಥ್ ನೀಡುತ್ತಿದ್ದಾರೆ. ಒಟ್ಟಾರೆ ತಮ್ಮ ಬಿಡುವಿಲ್ಲದ ಕೆಲಸದ ನಡುವೆಯೂ ದೊರೆಯುವ ಸಮಯವನ್ನು ಒಳ್ಳೆಯ ಕೆಲಸಗಳಿಗೆ ಉಪಯೋಗಿಸಿಕೊಂಡು ಸಮಾಜಸೇವೆ ಮಾಡುತ್ತಿರುವ ಬಸಪ್ಪ ಅವರ ಕಾರ್ಯ ಶ್ಲಾಘನೀಯ.