ಮೈಸೂರಿನಲ್ಲಿ ವರದಕ್ಷಿಣೆ ಸಾವು: ಆರೋಪಿ ಪೊಲೀಸ್ ಕಾನ್ಸ್ ಟೆಬಲ್ ಪರಾರಿ
ಮೈಸೂರು, ಜೂನ್ 1: ರಕ್ಷಣೆ ನೀಡುವುದು ಮತ್ತು ಕಾನೂನನ್ನು ಪಾಲಿಸಬೇಕಾದ ಪೊಲೀಸ್ ಕಾನ್ಸ್ ಟೆಬಲ್ ಒಬ್ಬಾತ ಕಾನೂನು ಉಲ್ಲಂಘನೆ ಮಾಡಿದ ಪ್ರಕರಣವೊಂದು ವರದಿಯಾಗಿದೆ. ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿ, ಕೊಲೆ ಮಾಡಿರುವ ಆರೋಪ ಇದೀಗ ಕೆ.ಆರ್ ನಗರದ ಡಿಎಆರ್ ಪೊಲೀಸ್ ಕಾನ್ಸ್ ಟೆಬಲ್ ಮೇಲೆ ಬಂದಿದೆ.
Recommended Video
ಪಿರಿಯಾಪಟ್ಟಣ ತಾಲ್ಲೂಕಿನ ತಮ್ಮಡಹಳ್ಳಿ ಗ್ರಾಮದ ಭಾರತಿ ಹಾಗೂ ಕೆ.ಆರ್ ನಗರ ತಾಲ್ಲೂಕಿನ ಹೆಬ್ಬಾಳು ಗ್ರಾಮದ ಶ್ರೀಧರ್ ಜೋಡಿಯ ಮದುವೆ 6 ವರ್ಷಗಳ ಹಿಂದೆ ನೆರವೇರಿತ್ತು. ಮದುವೆಯಾದ 4 ವರ್ಷ ಚೆನ್ನಾಗಿದ್ದ ಕಾನ್ಸ್ ಟೆಬಲ್ ಶ್ರೀಧರ್ ಹಾಗೂ ಆತನ ಪೋಷಕರು ನಂತರ ತಮ್ಮ ಮಗಳು ಭಾರತಿಗೆ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು ಎಂದು ಭಾರತಿಯ ಪೋಷಕರು ಆರೋಪಿಸಿದ್ದಾರೆ.

ಆತ್ಮಹತ್ಯೆ ಅಲ್ಲ ಇದೊಂದು ಕೊಲೆ ಎಂದು ಭಾರತಿ ಪೋಷಕರು
ನಿವೇಶನ ಕೊಡಿಸುವಂತೆ ಪತಿರಾಯ ಶ್ರೀಧರ್ (32) ಹಾಗೂ ತಂದೆ ಶಂಕರ್, ತಾಯಿ ನಿಂಗಾಜಮ್ಮ ಸಿಕ್ಕಾಪಟ್ಟೆ ಕಿರುಕುಳ ಕೊಟ್ಟಿದ್ದರು ಎನ್ನಲಾಗಿದೆ. ಗಂಡನ ಮನೆಯ ಕಿರುಕುಳಕ್ಕೆ ಬೇಸತ್ತ ಭಾರತಿ, ಸೀಮೆಣ್ಣೆ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ತಮ್ಮ ಮಗಳ ಸಾವು ಆತ್ಮಹತ್ಯೆ ಅಲ್ಲ ಇದೊಂದು ಕೊಲೆ ಎಂದು ಮೃತ ಭಾರತಿ ಪೋಷಕರು ದೂರು ನೀಡಿದ್ದಾರೆ.

ನಿವೇಶನ ಖರೀದಿಸಿ ಕೊಡಬೇಕೆಂದು ಪೀಡಿಸುತ್ತಿದ್ದ
ಮದುವೆ ಸಮಯದಲ್ಲಿ 200 ಗ್ರಾಂ ಚಿನ್ನ, 2 ಲಕ್ಷ ನಗದು ಹಾಗೂ ಒಂದು ಬೈಕ್ ವರದಕ್ಷಿಣೆಯಾಗಿ ನೀಡಲಾಗಿತ್ತು. ಪ್ರಾರಂಭದಲ್ಲಿ ಅನ್ಯೋನ್ಯ ದಾಂಪತ್ಯ ಜೀವನ ಸಾಗಿಸಿದ್ದ ದಂಪತಿಗೆ ಗಂಡು ಮಗುವಾಗಿತ್ತು.
ಎರಡು ವರ್ಷಗಳಿಂದ ಪತಿ ಶ್ರೀಧರ್ ನಡವಳಿಕೆಯಲ್ಲಿ ಬದಲಾವಣೆ ಆಗಿದೆ. ನಿನ್ನ ತವರು ಮನೆಯವರಿಗೆ ಹೇಳಿ ನನಗೆ ಮನೆ ನಿವೇಶನ ಖರೀದಿಸಿ ಕೊಡಬೇಕೆಂದು ಪೀಡಿಸುತ್ತಿದ್ದ.

ಗಂಡನ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಭಾರತಿ ಪತ್ತೆ
ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು. ಸೈಟ್ ಕೊಡದೇ ಹೋದರೆ ಬೇರೆ ಮದುವೆ ಆಗುವುದಾಗಿ ಬೆದರಿಕೆ ಹಾಕಿದ್ದ ಶ್ರೀಧರ್, ಪತ್ನಿಯನ್ನು ಸಂಪೂರ್ಣವಾಗಿ ಕಡೆಗಣಿಸಿದ್ದ. ಕಳೆದ ಮೇ 25 ರಂದು ಕೆ.ಆರ್ ನಗರದ ಗಂಡನ ಮನೆಯಲ್ಲಿ ಸುಟ್ಟ ಸ್ಥಿತಿಯಲ್ಲಿ ಭಾರತಿ ಪತ್ತೆಯಾಗಿದ್ದಳು.

ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಭಾರತಿ ಸಾವು
ತೀವ್ರ ಸುಟ್ಟ ಗಾಯಗಳಿಂದ ನರಳುತ್ತಿದ್ದ ಭಾರತಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಭಾರತಿ ಸಾವನ್ನಪ್ಪಿದ್ದಾರೆ. ಭಾರತಿ ಸಾವಿಗೆ ಪತಿ ಶ್ರಿಧರ್, ಮಾವ ಶಂಕರ್, ಅತ್ತೆ ನಿಂಗಾಜಮ್ಮ ಕಾರಣ ಎಂದು ಪೋಷಕರು ಆರೋಪ ಮಾಡಿದ್ದಾರೆ. ಘಟನೆ ಬಳಿಕ ಆರೋಪಿಗಳು ಪರಾರಿಯಾಗಿದ್ದಾರೆ. ಘಟನೆ ಸಂಬಂಧ ಕೆ.ಆರ್ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.












Click it and Unblock the Notifications