ಮೈಸೂರಲ್ಲಿ ಬಾಡಿಗೆ ಮನೆ ಪಡೆಯುವವರ ಗಮನಕ್ಕೆ
ಮೈಸೂರು, ನ.27: ಇನ್ನು ಮುಂದೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆಯಲು ಪೊಲೀಸರಿಗೆ ಮಾಹಿತಿ ನೀಡಬೇಕು. ಜೊತೆಗೆ ಈಗ ಯಾರೆಲ್ಲಾ ಬಾಡಿಗೆದಾರರು ವಾಸವಿದ್ದಾರೆ ಅವರ ಮಾಹಿತಿಯನ್ನು ಮಾಲೀಕರು ನೀಡಬೇಕೆಂಬ ಆದೇಶವನ್ನು ಪೊಲೀಸ್ ಆಯುಕ್ತರು ಹೊರಡಿಸಿದ್ದಾರೆ.
ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟದ ರೂವಾರಿ, ಶಂಕಿತ ಉಗ್ರ ವಾಸವಿದ್ದ ಎಂಬ ಮಾಹಿತಿ ಬೆನ್ನಲ್ಲೇ ಮೈಸೂರು ನಗರ ಪೊಲೀಸ್ ಹೈಅಲರ್ಟ್ ಆಗಿದ್ದಾರೆ. ಇನ್ಮುಂದೆ ಮನೆ, ಪೇಯಿಂಗ್ ಗೆಸ್ಟ್ ಹೌಸ್ (ಪಿಜಿ)ಗಳಲ್ಲಿ ಮನೆ ಮತ್ತು ಕೋಣೆ ಬಾಡಿಗೆ ಪಡೆಯುವ ಬಾಡಿಗೆದಾರರ ವಿವರ ಕಲೆಹಾಕಿ ಪೊಲೀಸರಿಗೆ ನೀಡಬೇಕಿದೆ.
ಮನೆ ಮಾಲೀಕರು ಮನೆ, ರೂಂ ಬಾಡಿಗೆ ನೀಡುವ ಮುನ್ನ ಬಾಡಿಗೆದಾರರ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಪೊಲೀಸರಿಗೆ ನೀಡಬೇಕು. ಈ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ ಆರಂಭವಾಗಿದೆ.

"ಇನ್ನೊಂದು ತಿಂಗಳಲ್ಲಿ ಮನೆ ಮಾಲೀಕರು, ಬಾಡಿಗೆದಾರರ ವಿವರವನ್ನು ಪೊಲೀಸರಿಗೆ ನೀಡಬೇಕು. ಸುರಕ್ಷಾ ಹೆಸರಿನಲ್ಲಿ ಎರಡು ಮಾದರಿಯ ಅರ್ಜಿಗಳನ್ನು ನಗರ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ್ದು, ಅರ್ಜಿಯಲ್ಲಿ ಇರುವ ವಿವರಗಳೊಂದಿಗೆ ಅಗತ್ಯ ದಾಖಲಾತಿ ನೀಡಬೇಕಿದೆ. ಉದಾಸೀನ ಮಾಡಿದರೆ, ಅದಕ್ಕೆ ಮಾಲೀಕರು ಮತ್ತು ಪಿಜಿ ನಡೆಸುವವರೇ ಹೊಣೆಯಾಗುತ್ತಾರೆ" ಎಂದು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ತಿಳಿಸಿದ್ದಾರೆ.
"ಹೋಟೆಲ್, ಲಾಡ್ಜ್, ಹೋಂ ಸ್ಟೇಗಳಲ್ಲೂ ಸೂಕ್ತ ದಾಖಲೆ ಹೊಂದಿರದ ವ್ಯಕ್ತಿಗಳಿಗೆ ರೂಮ್ ನೀಡುವುದು, ಉಳಿದುಕೊಳ್ಳಲು ಅವಕಾಶ ನೀಡುವಂತಿಲ್ಲ. ನಗರ ಪ್ರವೇಶಿಸುವ 9 ಪಾಯಿಂಟ್ಗಳಲ್ಲಿ ಇನ್ ಅಂಡ್ ಔಟ್ ಆಗುವವರ ಬಗ್ಗೆ ನಮ್ಮ ಸಿಬ್ಬಂದಿ ಪರಿಶೀಲಿಸಿ, ವಿಳಾಸ ನಮೂದಿಸಿಕೊಳ್ಳಲಿದ್ದಾರೆ. ನಗರದೊಳಗೆ 23 ಪಾಯಿಂಟ್ ಮಾಡಿದ್ದು ಅನುಮಾನಾಸ್ಪದವಾಗಿ ಕಂಡು ಬಂದವರನ್ನು ಪರಿಶೀಲನೆ ನಡೆಸಲಿದ್ದಾರೆ. ಪಾಲಿಕೆಯಿಂದ ರಾತ್ರಿ 11ರ ನಂತರವೂ ತೆರೆದಿರಬಹುದಾದ ಅಂಗಡಿ ಬಿಟ್ಟು ಉಳಿದ ಎಲ್ಲ ಅಂಗಡಿಗಳನ್ನು ರಾತ್ರಿ 11ರ ಹೊತ್ತಿಗೆ ಮುಚ್ಚಬೇಕು" ಎಂದು ಸೂಚನೆ ನೀಡಿದ್ದಾರೆ.

ಇದೊಂದು ವಿವೇಕ ಶೂನ್ಯ ಆದೇಶ; ಸರ್ಕಾರಿ ಅಧಿಕಾರಿಗಳು ಕೆಲಸ ಮಾಡುವಾಗ ಕೊಂಚ ಸಾಮಾನ್ಯ ಜ್ಞಾನ ಎಂಬುದನ್ನು ಉಪಯೋಗಿಸಬೇಕು. ಮೈಸೂರಿನಲ್ಲಿ ಬಾಡಿಗೆ ಮನೆ ಪಡೆಯಲು ಪೊಲೀಸ್ ಕ್ಲಿಯರೆನ್ಸ್ ಪಡೆಯಬೇಕು ಎಂಬ ಹೊಸ ನಿಯಮ ಪೂರ್ವಾಪರ ಆಲೋಚನೆ ಕೈಗೊಂಡ ನಿರ್ಧಾರವಾಗಿದೆ. ಆದರೆ ಪೊಲೀಸ್ ಅನುಮತಿ ಪಡೆದು ಬಾಡಿಗೆಗೆ ನೀಡಬೇಕು ಎಂಬ ವಿವೇಕ ಶೂನ್ಯ ಆದೇಶ ನೀಡಿರುವುದು ಮತ್ತಷ್ಟು ವಸೂಲಿಗೆ ದಾರಿಯಾಗಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಶೇಷರಾಘವಚಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.












Click it and Unblock the Notifications