ಮೈಸೂರು ಗಡಿಯ ಚೆಕ್ ಪೋಸ್ಟ್ ನಲ್ಲಿ ಪೊಲೀಸರ ಬಿಗಿ ತಪಾಸಣೆ
ಮೈಸೂರು, ಮಾರ್ಚ್ 24: ಮೈಸೂರು ಬೆಂಗಳೂರು ರಾಜ್ಯ ಹೆದ್ದಾರಿಯಲ್ಲಿರುವ ಸಿದ್ದಲಿಂಗಪುರ ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಪ್ರತಿಯೊಂದು ವಾಹನವನ್ನೂ ತಪಾಸಣೆ ನಡೆಸುತ್ತಿದ್ದು, ರಸ್ತೆಗಿಳಿದ ಕಾರಣವನ್ನು ಕೇಳುತ್ತಿದ್ದಾರೆ.
ಕೋವಿಡ್-19 ಸೋಂಕು ಶರವೇಗದಲ್ಲಿ ಹರಡುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಲಾಕ್ ಔಟ್ ಜಾರಿಯಲ್ಲಿದೆ. ಜನರಿಗೂ ಕಟ್ಟು ನಿಟ್ಟಿನ ಎಚ್ಚರಿಕೆಯನ್ನು ನೀಡಲಾಗಿದೆ. ಯಾರೂ ರಸ್ತೆಗಿಳಿಯದಂತೆ ಸೂಚಿಸಲಾಗಿದೆ. ಯಾರು ಯಾರು ಎಲ್ಲಿ ವಾಸವಿದ್ದೀರೋ ಅಲ್ಲಿಯೇ ಇರಿ, ಸಾಧ್ಯವಾದರೆ ಮನೆಯಿಂದಲೇ ಕೆಲಸ ಮಾಡಿ. ಮನೆಯಿಂದ ಹೊರಗೆ ಬರದೇ ಕೊರೊನಾ ವೈರಾಣು ಹರಡುವುದನ್ನು ತಪ್ಪಿಸಿ ಎಂದು ಸರ್ಕಾರ, ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ. ಪೊಲೀಸ್ ಕಮೀಷನರ್ ಅವರೂ ರಸ್ತೆಗಿಳಿದವರ ಮೇಲೆ ಮುಲಾಜಿಲ್ಲದೆ ಎಫ್ ಐಆರ್ ದಾಖಲಿಸಿ ಬಂಧಿಸುವುದಾಗಿಯೂ ಎಚ್ಚರಿಸಿದ್ದಾರೆ. ಹೀಗಿದ್ದರೂ ಜನತೆ ನಿರ್ಲಕ್ಷ್ಯ ತೋರಿದ್ದಾರೆ.

ತಮಗೇನೂ ಸಂಬಂಧವೇ ಇಲ್ಲವೇನೋ ಎಂಬ ಅಸಡ್ಡೆಯಿಂದ ವಾಹನ ಚಲಾಯಿಸುತ್ತಲೇ ಗುಂಪುಕಟ್ಟಿಕೊಂಡು ಹೋಗುತ್ತಲೇ ಇದ್ದು, ಇಂದು ಬೆಳಿಗ್ಗೆಯಿಂದಲೇ ಸಿದ್ದಲಿಂಗಪುರದ ಚೆಕ್ ಪೋಸ್ಟ್ ಬಳಿ ಪೊಲೀಸರು ನೂರಾರು ವಾಹನಗಳ ತಪಾಸಣೆ ನಡೆಸಿ ರಸ್ತೆಗಿಳಿದವರನ್ನು ತರಾಟೆಗೆ ತೆಗೆದುಕೊಂಡರು. ವಾಹನಗಳನ್ನು ವಾಪಸ್ ಕಳುಹಿಸುವ ಪ್ರಯತ್ನ ಮಾಡಿದರು.











Click it and Unblock the Notifications