ಕೇರಳದ ಮೆಡಿಕಲ್ ತ್ಯಾಜ್ಯ ನಂಜನಗೂಡಿಗೆ; ಸುಳಿವು ಹಿಡಿದ ಪೊಲೀಸರು
ಮೈಸೂರು, ಜನವರಿ 29: ಕೇರಳದ ಮೆಡಿಕಲ್ ತ್ಯಾಜ್ಯವನ್ನು ನಂಜನಗೂಡಿನ ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಸುರಿಯುತ್ತಿದ್ದ ಲಾರಿಗಳನ್ನು ವಶಪಡಿಸಿಕೊಂಡಿರುವ ನಂಜನಗೂಡು ಗ್ರಾಮಾಂತರ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಕೇರಳ ಮೂಲದ ಅಫ್ಜಲ್, ಸೈಯದ್ ಮಹಮದ್ ಬಂಧಿತ ಆರೋಪಿಗಳು. ಲಾರಿಯಲ್ಲಿದ್ದ ಐದಾರು ಮಂದಿ ಲಾರಿ ಬಿಟ್ಟು ಪರಾರಿಯಾಗಿದ್ದಾರೆ.
ಎಚ್ಚರಿಕೆ! ಎಲ್ಲೆಂದರಲ್ಲಿ ಕಸ ಹಾಕಿದರೆ ಬರಲಿದ್ದಾರೆ ಚಾರ್ಲಿಗಳು...
ಗಸ್ತಿನಲ್ಲಿದ್ದ ವೇಳೆ ಲಾರಿಗಳಿಂದ ಹೊಮ್ಮುತ್ತಿದ್ದ ಕೆಟ್ಟ ವಾಸನೆಯಿಂದ ಗುಮಾನಿಗೊಂಡ ಪೊಲೀಸರು, ಅವುಗಳನ್ನು ನಿಲ್ಲಿಸಿ ಪರಿಶೀಲಿಸಿದಾಗ ವಿಚಾರ ತಿಳಿದುಬಂದಿದೆ. ಕೇರಳದಿಂದ ಮೆಡಿಕಲ್ ತ್ಯಾಜ್ಯ ತಂದು ಸುರಿಯುತ್ತಿರುವ ಬಗ್ಗೆ ಅಫ್ಜಲ್ ಒಪ್ಪಿಕೊಂಡಿದ್ದಾನೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಎಸ್ ಪಿ ರಿಷ್ಯಂತ್, ಸುಮಾರು 2 ಟನ್ ನಷ್ಟು ಮೆಡಿಕಲ್ ತ್ಯಾಜ್ಯವನ್ನು ಸಾಗಿಸುತ್ತಿದ್ದ ಲಾರಿಯನ್ನು ಹಿಂಬಾಲಿಸಿ 2 ಲಾರಿಗಳು ಹಾಗೂ ಕೇರಳ ಮೂಲದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪರಾರಿಯಾದ ಶೋಹೆಬ್, ತನ್ವೀರ್, ಶ್ರೀಕಂಠ ಪತ್ತೆಗಾಗಿ ಪೊಲೀಸರಿಂದ ಶೋಧ ಕಾರ್ಯ ಮುಂದುವರೆದಿದೆ ಎಂದು ತಿಳಿಸಿದ್ದಾರೆ.