ದಸರಾ ವೇಳೆ ಕೈಚಳಕ ತೋರಿದ್ದ ಐವರು ಐನಾತಿ ಕಳ್ಳರ ಬಂಧನ
ಮೈಸೂರು, ಅಕ್ಟೋಬರ್ 14: ವಿಶ್ವ ವಿಖ್ಯಾತ ಮೈಸೂರು ದಸರಾದಲ್ಲಿ ಜನತೆ ಮೈ ಮರೆತಿರುವ ಹೊತ್ತಲ್ಲೇ ಮನೆ ದರೋಡೆ ಮಾಡಲು ಪ್ರಯತ್ನಿಸಿದ್ದ ಐವರು ಐನಾತಿ ಕಳ್ಳರನ್ನು ಮಂಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಶಾರೂಕ್ ಅಮ್ಜದ್, ಸಿದ್ದಿಕ್ ಪಾಷ ಅಬ್ಬುಲಿ, ಟಿ.ಕೆ.ಇಮ್ರಾನ್, ಎಜಾಜ್ ಕುರೈಸಿ, ಫೈರೋಜ್ ಪಾಷ ಎಂದು ಗುರುತಿಸಲಾಗಿದೆ. ಇವರು ವಂದೇ ಮಾತರಂ ನಗರ ವಿನಾಯಕ ಸುಬ್ರಮಣ್ಯೇಶ್ವರ ದೇವಸ್ಥಾನದ ಮುಂದೆ ಕಾರು ನಿಲ್ಲಿಸಿಕೊಂಡು ಕಳವಿಗೆ ಯತ್ನಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಕಾರ್ಯ ಪ್ರವೃತ್ತರಾದ ಪೊಲೀಸರು ಮಧ್ಯರಾತ್ರಿ ಕಾರನ್ನು ಸುತ್ತುವರಿದು ಅವರನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ನಡೆಸಿದಾಗ ಅವರು ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸಿರಲಿಲ್ಲ.
ನಂತರ ಠಾಣೆಗೆ ಕರೆದುಕೊಂಡು ಬಂದು ಈ ಬಗ್ಗೆ ಕೂಲಂಕಷವಾಗಿ ವಿಚಾರಣೆ ಮಾಡಿದಾಗ, ತಮ್ಮನ್ನು ರಾಮನಗರ ನಿವಾಸಿ ಇರ್ಫಾನ್ ಎಂಬಾತ ಮೈಸೂರಿನಲ್ಲಿ ಜಂಬೂಸವಾರಿ ವೇಳೆ ಸಾರ್ವಜನಿಕರ ನೂಕು ನುಗ್ಗಲಿನಲ್ಲಿ ಮೊಬೈಲ್, ಪಿಕ್ ಪಾಕೆಟ್, ಕಳ್ಳತನ ಮಾಡಲು ಕರೆದುಕೊಂಡು ಬಂದಿದ್ದಾಗಿ ತಿಳಿಸಿದ್ದಾರೆ. ದಸರಾ ಸಂದರ್ಭ ಸಿಟಿ ಬಸ್ ನಿಲ್ದಾಣದಲ್ಲಿ 7 ಮೊಬೈಲ್ ಗಳನ್ನು ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ.

"ಮೊಬೈಲ್ಗಳನ್ನು ಇಟ್ಟು, ವಾಪಸ್ ಬಂದು ಸೇರುತ್ತೇನೆ. ನಾವೆಲ್ಲರೂ ಮೈಸೂರಿನ ಯಾವುದಾದರೂ ಮನೆಯಲ್ಲಿ ದರೋಡೆ ಮಾಡಿಕೊಂಡು ಹೋಗೋಣವೆಂದು ತಿಳಿಸಿ ಇರ್ಫಾನ್ ಅದೇ ದಿನ ಬೆಂಗಳೂರಿಗೆ ಹೋಗಿದ್ದ. ನಾವು ಅವನ ಬರುವಿಕೆಗಾಗಿ ಕಾಯುತ್ತಿದ್ದೆವು" ಎಂದು ಆರೋಪಿಗಳು ವಿಚಾರಣೆ ವೇಳೆ ತಿಳಿಸಿದ್ದಾರೆ.
ಪೊಲೀಸರು ಕಾರನ್ನು ಪರಿಶೀಲಿಸಿದಾಗ ಕಾರಿನ ಡ್ಯಾಶ್ ಬೋರ್ಡ್ ನಲ್ಲಿ 2 ಪ್ಯಾಕೆಟ್ ಖಾರದ ಪುಡಿ, 3 ಮೊಬೈಲ್, 3 ವಿಕೆಟ್, 2 ಲಾಂಗ್ಗಳು ದೊರೆತಿದ್ದು ಅವುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳ್ಳರ ನಾಯಕ ಇರ್ಫಾನ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಮಂಡಿ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.












Click it and Unblock the Notifications