ಮೈಸೂರು; ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲ ಪತ್ತೆ
ಮೈಸೂರು, ಏಪ್ರಿಲ್ 19; ಕರ್ನಾಟಕದಲ್ಲಿ ಕೋವಿಡ್ 2ನೇ ಅಲೆಯಿಂದಾಗಿ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿಯೇ ನಕಲಿ ರೆಮ್ಡೆಸಿವಿರ್ ಔಷಧ ಮಾರಾಟ ಜಾಲವನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
ನಕಲಿ ಔಷಧಿ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಧಂತೆ ಮೈಸೂರಿನ ಸಿಸಿಬಿ ಪೊಲೀಸರು ನಗರದ ಜೆಎಸ್ಎಸ್ ಆಸ್ಪತ್ರೆ ಸ್ಟಾಫ್ ನರ್ಸ್ ಗಿರೀಶ್ ಬಂಧಿಸಿದ್ದಾರೆ. ಈತನೊಂದಿಗೆ ಸಹಕರಿಸಿದ್ದ ಶಿವಪ್ಪ, ಮಂಗಳ, ಮಂಜುನಾಥ್ ಮತ್ತು ಪ್ರಶಾಂತ್ ಎಂಬುವರನ್ನು ಸಹ ವಶಕ್ಕೆ ಪಡೆಯಲಾಗಿದೆ.
ಬಂಧಿತ ಆರೋಪಿಗಳಿಂದ 2.82 ಲಕ್ಷ ರೂ. ನಗದು ಹಾಗೂ 800ಕ್ಕೂ ಹೆಚ್ಚು ರೆಮ್ಡೆಸಿವಿರ್ ನಕಲಿ ಔಷಧಿ ಬಾಟಲ್ಗಳನ್ನು ವಶಪಡಿಸಿಕೊಂಡಿದ್ದಾರೆ. ಗಿರೀಶ್, ಸೆಪ್ಟ್ರಿಯಾಕ್ಸೊನ ಎಂಬ ಆ್ಯಂಟಿಬಯೋಟಿಕ್ ಔಷಧ ಹಾಗೂ ನಾರ್ಮಲ್ ಸಲೈನ್ ಬಳಕೆ ಮಾಡಿ ನಕಲಿ ಔಷಧಿ ತಯಾರಿಸುತ್ತಿದ್ದ.

ಕೇವಲ 100 ರೂ.ಗಳಿಗೆ ನಕಲಿ ರೆಮ್ಡೆಸಿವಿರ್ ಔಷಧಿ ತಯಾರಿಸಿ, ಅದನ್ನು 4 ಸಾವಿರ ರೂ.ಗೆ ಮಾರಾಟ ಮಾಡುತ್ತಿದ್ದ. ಅಲ್ಲದೇ ತಾನು ತಯಾರಿಸಿದ ಈ ನಕಲಿ ಔಷಧಿಯನ್ನು ಕೆಲವು ಮೆಡಿಕಲ್ ರೆಪ್ರಸೆಂಟ್ಗಳ ಮೂಲಕ ಸಾರ್ವಜನಿಕರು ಹಾಗೂ ಆಸ್ಪತ್ರೆಗೂ ಸರಬರಾಜು ಮಾಡಿಸುತ್ತಿದ್ದ ಎಂಬ ಆರೋಪವೂ ಇದೆ.
"ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ರೆಮ್ಡೆಸಿವಿರ್ ಔಷಧಿಯು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವ ಬಗ್ಗೆ ತನಿಖೆ ನಡೆಸುವಾಗ ಈ ನಕಲಿ ಜಾಲ ಪತ್ತೆಯಾಗಿದೆ" ಎಂದು ನಗರ ಪೊಲೀಸ್ ಆಯುಕ್ತ ಡಾ. ಚಂದ್ರಗುಪ್ತ ಮಾಹಿತಿ ನೀಡಿದ್ದಾರೆ.
ಆರೋಪಿ ಗಿರೀಶ್ ಕಳೆದ 11 ವರ್ಷದಿಂದ ಜೆಎಸ್ಎಸ್ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದ. ಖಾಲಿಯಾಗಿದ್ದ ರೆಮ್ಡಿಸಿವಿರ್ ಔಷಧದ ಬಾಟಲಿಗೆ ಬೇರೆ ಔಷಧಿ ತುಂಬಿ ಅದನ್ನೇ ರೆಮ್ಡಿಸಿವಿರ್ ಔಷಧಿ ಎಂದು ಮಾರಾಟ ಮಾಡುತ್ತಿದ್ದ.
ನಕಲಿ ಔಷಧಿಯನ್ನು ಮೆಡಿಕಲ್ ರೆಪ್ಗಳಾಗಿದ್ದ ಪ್ರಶಾಂತ್ ಮತ್ತು ಮಂಜುನಾಥ್ ಎಂಬುವವರ ಜೊತೆ ಸೇರಿ ಮಾರಾಟ ಮಾಡುತ್ತಿದ್ದ ಎನ್ನುವುದು ತನಿಖೆಯಿಂದ ಗೊತ್ತಾಗಿದೆ.












Click it and Unblock the Notifications