ವಿಷ ಪ್ರಸಾದ ಆರೋಪಿಗಳು ರಾತ್ರೋರಾತ್ರಿ ಮೈಸೂರು ಜೈಲಿಗೆ ಶಿಫ್ಟ್
ಮೈಸೂರು, ಡಿಸೆಂಬರ್ 22 : ಸುಳ್ವಾಡಿ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನ ವಿಷ ಪ್ರಸಾದ ದುರಂತ ಪ್ರಕರಣದಲ್ಲಿ ಬಂಧಿತರಾಗಿರುವ ನಾಲ್ವರು ಆರೋಪಿಗಳನ್ನು ಶುಕ್ರವಾರ ರಾತ್ರಿ ಮೈಸೂರಿನ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಪೊಲೀಸರು ಹಾಜರುಪಡಿಸಿದರು.
ಕಳೆದ ಬುಧವಾರ ಬಂಧಿಸಲ್ಪಟ್ಟ ಶ್ರೀ ಇಮ್ಮಡಿ ಮಹದೇವಸ್ವಾಮೀಜಿ, ಅಂಬಿಕಾ, ಈಕೆಯ ಗಂಡ ಮಾದೇಶ್ ಹಾಗೂ ದೊಡ್ಡಯ್ಯ ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆಗಾಗಿ 4 ದಿನಗಳವರೆಗೆ ತಮ್ಮ ಕಸ್ಟಡಿಗೆ ಪಡೆದಿದ್ದರು.
ಎರಡು ದಿನಗಳಲ್ಲಿ ಆರೋಪಿಗಳನ್ನು ಸ್ಥಳಕ್ಕೆ ಮಹಜರು ನಡೆಸಿದ್ದಲ್ಲದೆ, ತೀವ್ರ ವಿಚಾರಣೆಗೆ ಒಳಪಡಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಗಳನ್ನು ಸಂಗ್ರಹಸಿರುವ ಪೊಲೀಸರು, ಶುಕ್ರವಾರ ರಾತ್ರಿ 11.30ಕ್ಕೆ ಕೊಳ್ಳೇಗಾಲ ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರಾದ ಟಿ.ಶ್ರೀಕಾಂತ್ ಅವರ ಮುಂದೆ ಹಾಜರುಪಡಿಸಿದರು.

ಕಸ್ಟಡಿ ಅವಧಿಯನ್ನು ವಿಸ್ತರಿಸುವಂತೆ ಪೊಲೀಸರು ಕೋರದ ಕಾರಣ ಆರೋಪಿಗಳನ್ನು 2019ರ ಜ.3ರವರೆಗೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ಆದೇಶಿಸಿದರು. ನಂತರ ಚಾಮರಾಜನಗರ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗೀತಾ ಪಸನ್ನ, ಡಿವೈಎಸ್ಪಿ ಪುಟ್ಟಮಾದಯ್ಯ ಹಾಗೂ ಸಿಬ್ಬಂದಿ ನಾಲ್ವರೂ ಆರೋಪಿಗಳನ್ನು ಮೈಸೂರಿನ ಕೇಂದ್ರ ಕಾರಾಗೃಹಕ್ಕೆ ಕರೆದೊಯ್ದರು.
ಇತ್ತ ಸಿಎಫ್ಟಿಆರ್ಐ ವರದಿಯೂ ಬಂತು, ಎಫ್ಎಸ್ಎಲ್ ವರದಿಯಿಂದ ಪ್ರಸಾದಕ್ಕೆ ಬಳಸಿರುವುದು ಕ್ರಿಮಿ ನಾಶಕ ಎಂದು ಈಗಾಗಲೇ ಗೊತ್ತಾಗಿದ್ದು, ಇದೀಗ ಅಂದರೆ ಮೈಸೂರು ಸಿಎಫ್ಟಿಆರ್ಐನಿಂದಲೂ ವರದಿ ಬಂದಿದೆ. ಪ್ರಸಾದ 'ಸೇವಿಸಲು ಯೋಗ್ಯವಾಗಿರಲಿಲ್ಲ' ಎಂದು ಸಿಎಫ್ಟಿಆರ್ಐನಿಂದ ವರದಿ ಬಂದಿದೆ ಎಂದು ಡಿಎಚ್ಒ ಡಾ.ಪ್ರಸಾದ್ ತಿಳಿಸಿದ್ದಾರೆ.
ವಿಷದುರಂತದ ನಂತರ ಭಕ್ತರು ಸೇವಿಸಿದ್ದ ರೈಸ್ಬಾತ್ನ(ಪ್ರಸಾದ) ಮಾದರಿ ಮತ್ತು ಇದಕ್ಕೆ ಬಳಸಿದ್ದ ನೀರನ್ನು ಸಿಎಫ್ಟಿ ಆರ್ಐಗೆ ಕಳುಹಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.












Click it and Unblock the Notifications