ಮೈಸೂರು ವಿವಿ 100ನೇ ಘಟಿಕೋತ್ಸವ; ವಿವಿ ಶ್ಲಾಘಿಸಿದ ಪ್ರಧಾನಿ ಮೋದಿ
ಮೈಸೂರು, ಅಕ್ಟೋಬರ್ 19: ಮೈಸೂರು ವಿಶ್ವವಿದ್ಯಾನಿಲಯದ 100ನೇ ಘಟಿಕೋತ್ಸವವು ಇಂದು ವಿವಿಯ ಕ್ರಾಫರ್ಡ್ ಭವನದಲ್ಲಿ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದರು.
ಕನ್ನಡದಲ್ಲಿ ಶುಭ ಕೋರಿದ ಪ್ರಧಾನಿ ನರೇಂದ್ರ ಮೋದಿ ಅವರು, "ಜಾಗತಿಕ ಸ್ಪರ್ಧಾ ಜಗತ್ತಿನಲ್ಲಿ ಯುವಜನತೆ ಸಶಕ್ತರಾಗಬೇಕು. ಈ ನಿಟ್ಟಿನಲ್ಲಿ ಹೊಸ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಈ ನೀತಿಯನ್ನು ಅಳವಡಿಸಲು ಮೈಸೂರು ವಿಶ್ವವಿದ್ಯಾಲಯ ಆಸಕ್ತಿ ತೋರಿಸಿರುವುದು ಸಂತಸದ ವಿಚಾರ. ಹೊಸ ಸಂಸ್ಥೆಗಳನ್ನು ಆರಂಭಿಸುವುದು ಮಾತ್ರ ಮುಖ್ಯ ಅಲ್ಲ, ಶಿಕ್ಷಣದ ಗುಣಮಟ್ಟ ಅಭಿವೃದ್ಧಿಗೂ ಕೆಲಸ ಮಾಡುತ್ತಿದ್ದೇವೆ" ಎಂದು ಹೇಳಿದರು.

ಭಾರತದಲ್ಲಿ 2014ರಲ್ಲಿ 16 ಐಐಟಿ ಶಿಕ್ಷಣ ಸಂಸ್ಥೆಗಳಿದ್ದವು, ಈಗ ಪ್ರತಿ ವರ್ಷ ಒಂದೊಂದು ನಿರ್ಮಾಣ ಮಾಡಲಾಗುತ್ತಿದೆ. ಹೊಸದಾಗಿ ಐಐಎಂ ಶಿಕ್ಷಣ ಸಂಸ್ಥೆಗಳ ನಿರ್ಮಾಣವಾಗಿದೆ ಎಂದರು. ನಿಮ್ಮ ಪ್ರತಿಭೆಯ ಮೂಲಕ ದೇಶಕ್ಕೆ ಕೊಡುಗೆ ನೀಡಿ. ನಿಮ್ಮ ಸಾಮರ್ಥ್ಯದ ಆಧಾರದ ಮೇಲೆ ಸಾಧನೆಗಳನ್ನು ಮಾಡಿ. ಪದವಿ ಪಡೆಯುವ ಜೊತೆಗೆ ದೇಶ ನಿರ್ಮಾಣದ ಹೊಣೆ ಕೂಡ ನಿಮ್ಮ ಮೇಲಿದೆ ಎಂದು ಕಿವಿ ಮಾತು ಹೇಳಿದರು.
ಇಂದು ನಿಮಗೆ ಬಹಳ ದೊಡ್ಡ ದಿನವಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಮೈಸೂರು ವಿಶ್ವವಿದ್ಯಾಲಯದ ಕೊಡುಗೆ ಅಪಾರವಾಗಿದೆ ಎಂದು ವಿವಿಯನ್ನು ಶ್ಲಾಘಿಸಿದರು. ಇದೇ ಸಂದರ್ಭ ಕವಿ ಕುವೆಂಪು ಅವರನ್ನೂ ಸ್ಮರಿಸಿದ ಅವರು, ಕುವೆಂಪು ಅವರು ಮಾನಸ ಗಂಗೋತ್ರಿ ಎಂದು ಹೆಸರಿಟ್ಟಿದ್ದಾರೆ, ದೇಶದ ಅತ್ಯುತ್ತಮ ಸಂಶೋಧನೆ ಕಡೆಗೆ ಸಂಸ್ಥೆ ಮತ್ತಷ್ಟು ಗಮನಹರಿಸಬೇಕಿದೆ, ಉನ್ನತ ಮಟ್ಟಕ್ಕೆ ವಿಶ್ವವಿದ್ಯಾಲಯವನ್ನು ಕೊಂಡೊಯ್ಯಬೇಕಿದೆ ಎಂದರು.
ಇದೇ ಸಂದರ್ಭ, ರಾಜ್ಯದಲ್ಲಿ ಮಳೆಯಿಂದ ಸಂಭವಿಸಿರುವ ಪ್ರವಾಹದ ಕುರಿತು ಮಾತನಾಡಿ, ಪ್ರವಾಹ ಪೀಡಿತ ಕುಟುಂಬಗಳಿಗೆ ಸಾಂತ್ವನ ತಿಳಿಸುತ್ತೇನೆ. ರಾಜ್ಯಕ್ಕೆ ಕೇಂದ್ರದಿಂದ ಸಾಧ್ಯವಾದಷ್ಟು ನೆರವು ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
ಆರಂಭದಿಂದಲೂ ದೇಶದ ಪ್ರಧಾನಿಗಳು ಮೈಸೂರು ವಿಶ್ವವಿದ್ಯಾನಿಲಯದ ಘಟಿಕೋತ್ಸವದಲ್ಲಿ ಭಾಷಣ ಮಾಡಿರಲಿಲ್ಲ. ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಭಾಷಣ ಮಾಡಿದ್ದಾರೆ. ಘಟಿಕೋತ್ಸವದಲ್ಲಿ 600 ಮಂದಿ ಪಿಎಚ್ಡಿ ಪಡೆಯುತ್ತಿರುವುದು ಕೂಡ ಇದೇ ಮೊದಲಾಗಿದೆ. ಇಂದು ಸಾಂಕೇತಿಕವಾಗಿ 30 ಮಂದಿಗೆ ಪಿಹೆಚ್ಡಿ ಪ್ರದಾನ ಮಾಡಲಾಗುವುದು.











Click it and Unblock the Notifications