ಮೈಸೂರು ಲಾಕ್ ಡೌನ್; ಬಡವರ ಸಹಾಯಕ್ಕೆ ಬಂದ ಪೊಲೀಸರು
ಮೈಸೂರು, ಮಾರ್ಚ್ 24: ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನಲೆ ಮೈಸೂರು ಜಿಲ್ಲೆ ಸಂಪೂರ್ಣ ಬಂದ್ ಆಗಿದೆ. ಆದರೆ ಬೀದಿಯಲ್ಲಿ ಬದುಕುತ್ತಿರುವವರ ಕಥೆ ಏನು? ಆಸ್ಪತ್ರೆಯಲ್ಲಿದ್ದವರು ಏನು ಮಾಡಬೇಕು? ಹೀಗೆ ಯೋಚಿಸಿದ ಪಿರಿಯಾಪಟ್ಟಣ ಪೊಲೀಸರು ಹಾಗೂ ಸಾರ್ವಜನಿಕರು, ಅನಾರೋಗ್ಯದ ಸಮಸ್ಯೆಯಿಂದ ಆಸ್ಪತ್ರೆಗೆ ಬಂದವರಿಗೆ, ನಿರ್ಗತಿಕರಿಗೆ ತುತ್ತು ಅನ್ನ ನೀಡಿ ಮಾನವೀಯತೆ ಮೆರೆದಿದ್ದಾರೆ.
ಕರ್ನಾಟಕ ಸಂಪೂರ್ಣ ಲಾಕ್ ಡೌನ್ ಆಗಿದ್ದು, ಪಿರಿಯಾಪಟ್ಟಣದಲ್ಲಿ 114 ಸೆಕ್ಷನ್ ಜಾರಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಪಿರಿಯಾಪಟ್ಟಣ ನಿವಾಸಿ ಎಚ್.ಡಿ.ಮೋಹನ್ ಕುಮಾರ್ ರವರ ಸಹಕಾರದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಬಿ.ಆರ್.ಪ್ರದೀಪ್, ಎಸ್ ಗಣೇಶ್, ಸುಭಾಷ್, ಶ್ರೀಧರ್,ಮಹೇಶ್, ಪಿ.ಡಿ.ರಾಮ್
ಮತ್ತಿತರರು ಬಡವರಿಗೆ, ನಿರ್ಗತಿಕರಿಗೆ, ವೃದ್ಧರಿಗೆ ಉಚಿತವಾಗಿ ಆಹಾರ ಪೂರೈಸಿದ್ದಾರೆ.
ಅದಲ್ಲದೇ ವಾಹನ ಸಿಕ್ಕದೆ ಪರದಾಟ ನಡೆಸುತ್ತಿದ್ದವರನ್ನು ಮನೆಗಳಿಗೆ ತೆರಳುವಂತೆ ಸೂಚಿಸಿ, ಮತ್ತೊಂದು ಕಡೆ ಆಟೋ ಮೂಲಕ ಮನೆಗೆ ತಲುಪುವಂತೆ ಮಾಡಿದ್ದಾರೆ. ಇವರ ಕಾರ್ಯಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕೊರೊನಾ ಹಿನ್ನಲೆ ಕರ್ನಾಟಕ ಲಾಕ್ ಡೌನ್ ಆಗಿದೆ. ಸರ್ಕಾರದ ಆದೇಶದಿಂದ ಎಲ್ಲಾ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ವೃದ್ಧರಿಗೆ, ಬಡವರಿಗೆ, ನಿರ್ಗತಿಕರಿಗೆ ಆಹಾರ ಸಿಗುತ್ತಿಲ್ಲ. ಅಂಥ ಸುಮಾರು 150 ರಿಂದ 200 ಮಂದಿಗೆ ಉಚಿತವಾಗಿ ಆಹಾರ ಪೂರೈಸಿದ್ದೇವೆ. ಮಾ 31ರವರೆಗೆ ಆಹಾರ, ನೀರಿನ ವ್ಯವಸ್ಥೆ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.












Click it and Unblock the Notifications