ಎಚ್.ಡಿ.ಕೋಟೆಯಲ್ಲಿ ಕಣ್ಮನ ಸೆಳೆದ ಎತ್ತಿನಗಾಡಿ ಓಟ
ಮೈಸೂರು, ಅಕ್ಟೋಬರ್ 21: ದೀಪಾವಳಿ ಹಬ್ಬದ ಅಂಗವಾಗಿ ಎಚ್.ಡಿ.ಕೋಟೆ ವ್ಯಾಪ್ತಿಯಲ್ಲಿ ನಡೆದ ಎತ್ತಿನಗಾಡಿ ಓಟ ಗಮನಸೆಳೆಯಿತು.
ಹೆಚ್ಚಿನ ಎತ್ತಿನಗಾಡಿಗಳು ಕಂಡು ಬರಲಿಲ್ಲವಾದರೂ ಒಂದಷ್ಟು ಎತ್ತಿನಗಾಡಿಗಳು ಭಾಗವಹಿಸುವ ಮೂಲಕ ಸಂಪ್ರದಾಯಕ್ಕೆ ಒತ್ತು ನೀಡಿದ್ದು ಕಂಡು ಬಂತು. ಇತ್ತೀಚೆಗೆ ಎತ್ತುಗಳನ್ನು ಸಾಕಿ ಸಲಹುವುದು ಕಷ್ಟಕರವಾಗಿದ್ದರಿಂದ ಮತ್ತು ಹೆಚ್ಚಿನವರ ಬಳಿ ವಾಹನಗಳು ಇರುವುದರಿಂದ ಗಾಡಿಗಳು ಕಣ್ಮರೆಯಾಗುತ್ತಿವೆ. ಹಳ್ಳಿಗಳಲ್ಲಿ ಕೆಲವೇ ಕೆಲವು ಗಾಡಿಗಳಷ್ಟೆ ಉಳಿದುಕೊಂಡಿದ್ದು ಅವುಗಳು ಎತ್ತಿನಗಾಡಿ ಓಟದಲ್ಲಿ ಪಾಲ್ಗೊಂಡವು.

ತಾಲೂಕಿನ ಹೆಗ್ಗನೂರು, ಎಚ್.ಮಟಕೆರೆ ಮುಂತಾದ ಗ್ರಾಮಗಳಿಂದ ಎತ್ತಿನಗಾಡಿಯೊಂದಿಗೆ ಮಾಲೀಕರು ಬಂದಿದ್ದರು. ಮರದಚಕ್ರದ ಗಾಡಿಗಳಿಗಷ್ಟೆ ಸ್ಪರ್ಧೆಯಲ್ಲಿ ಆದ್ಯತೆ ನೀಡಲಾಗಿತ್ತು. ಉಳಿದಂತೆ ಟಯರ್ ಗಾಡಿಗಳು ಭಾಗವಹಿಸಿದ್ದರೂ ಬಹುಮಾನಕ್ಕೆ ಪರಿಗಣಿಸಿರಲಿಲ್ಲ.
ಹಬ್ಬದ ಸಂದರ್ಭ ಗಾಡಿಎತ್ತುಗಳ ಓಟ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಇದೊಂದು ಮನೋರಂಜನೆಯ ಸ್ಪರ್ಧೆಯಾಗಿತ್ತು. ಬದಲಾದ ಕಾಲಘಟ್ಟದಲ್ಲಿ ಎಲ್ಲವೂ ಬದಲಾಗಿದೆ. ಮೊದಲಿನಂತೆ ಆಸಕ್ತಿಯೂ ಜನರಲ್ಲಿ ಇಲ್ಲದಾಗಿದೆ. ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳದಿದ್ದರೂ ಸ್ಥಳದಲ್ಲಿ ನೆರೆದವರು ಎತ್ತಿನಗಾಡಿ ಓಟ ನೋಡಿ ಸಂಭ್ರಮಿಸಿದರು.

ಕಳೆದ ಕೆಲವು ವರ್ಷಗಳಿಂದ ಬರ ಕಾಣಿಸಿಕೊಂಡು ಜನ ಬೆಳೆ ಬೆಳೆಯಲಾರದೆ ಸಂಕಷ್ಟಕ್ಕೀಡಾಗಿದ್ದರು. ಜತೆಗೆ ಮುಂಗಾರಿನಲ್ಲಿ ಸರಿಯಾಗಿ ಮಳೆ ಬಾರದೆ ಯಾವುದೇ ಬೆಳೆಯಲು ಸಾಧ್ಯವಾಗಿರಲಿಲ್ಲ. ಈಗ ಮಳೆ ಬಂದರೂ ಪ್ರಯೋಜನವಾಗಿಲ್ಲ. ಮಳೆ ಬೆಳೆಯಾಗಿ ಎಲ್ಲವೂ ಸಮೃದ್ಧಿಯಾಗಿದ್ದರೆ ಹಬ್ಬಗಳನ್ನು ಸಂಭ್ರಮಿಸಲು ಸಾಧ್ಯವಾಗುತ್ತದೆ.
ಇಂತಹ ಕಷ್ಟದ ನಡುವೆಯೂ ಗ್ರಾಮೀಣ ಜನ ಹಳೆಯ ಸಂಪ್ರದಾಯವನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ.












Click it and Unblock the Notifications