ಈ ಬಾರಿ ಜಂಬೂ ಸವಾರಿ ವೀಕ್ಷಕರು ಟೋಪಿಯನ್ನು ಧರಿಸಲೇಬೇಕು!
ಮೈಸೂರು, ಅಕ್ಟೋಬರ್. 14: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯದಶಮಿ ಮೆರವಣಿಗೆ (ಜಂಬೂಸವಾರಿ) ವೀಕ್ಷಣೆಗೆ ಈ ಬಾರಿ ಪಾಸ್ ಹೊಂದಿದವರು ಮತ್ತು ಹಣ ಕೊಟ್ಟು ಟಿಕೆಟ್ ಖರೀದಿಸಿದವರಿಗೆ ಸ್ವಲ್ಪ ತ್ರಾಸಾಗುವುದು ಖಂಡಿತ.
ಅದಕ್ಕೆ ಕಾರಣವೂ ಇದೆ. ಅರಮನೆ ಆವರಣದಲ್ಲಿ ಕುಳಿತು ಜಂಬೂ ಸವಾರಿ ವೀಕ್ಷಣೆ ಮಾಡುವವರಿಗೆ ಈ ಬಾರಿ ಬಿಸಿಲಿನ ಕಾವು ತಟ್ಟಲಿದೆ. ಮಳೆ ಬಂದರಂತೂ ನೆನೆಯುವುದು ಅನಿವಾರ್ಯ.
ಏಕೆಂದರೆ ಪ್ರತಿವರ್ಷ ಶಾಮಿಯಾನ, ಪೆಂಡಾಲ್ ಹಾಕಿ ಜನ ಬಿಸಿಲಿನಿಂದ ಬಳಲುವುದನ್ನು ತಪ್ಪಿಸುತ್ತಿದ್ದ ಜಿಲ್ಲಾಡಳಿತ ಈ ಬಾರಿ ಶಾಮಿಯಾನ, ಪೆಂಡಾಲ್ ಹಾಕುವ ನಿರ್ಧಾರದಿಂದ ಹಿಂದೆ ಸರಿದಿದೆ. ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಗೆ ಮೇಲ್ಛಾವಣಿ ಹಾಕುವುದಕ್ಕೆ ವಿರೋಧ ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ ಎನ್ನಲಾಗಿದೆ.

ಅರಮನೆಯ ಸೌಂದರ್ಯಕ್ಕೆ ಧಕ್ಕೆಯಾಗುವ ಜತೆಗೆ ವ್ಯೂ ಪಾಯಿಂಟ್ ಸರಿಯಾಗಿ ಕಾಣಿಸುವುದಿಲ್ಲ ಎಂಬ ಉದ್ದೇಶದಿಂದ ಶಾಮಿಯಾನ ಬ್ಯಾನ್ ಮಾಡಲಾಗಿದೆಯಂತೆ. ಇದರಿಂದ ಆಸನದಲ್ಲಿ ಕುಳಿತು, ನೆಮ್ಮದಿಯಾಗಿ ದಸರಾ ವೀಕ್ಷಣೆ ಮಾಡುವವರಿಗೆ ಬಿಸಿಲಿನ ತಾಪ ತಟ್ಟಲಿದೆ. ಆದರೆ ಜಿಲ್ಲಾಡಳಿತ ಎಲ್ಲರಿಗೂ ಕ್ಯಾಪ್ (ಟೋಪಿ) ನೀಡಲಿದೆಯಂತೆ.
ಅಕ್ಟೋಬರ್ ಮಳೆಗಾಲವಾಗಿದ್ದು, 27ರಿಂದ 28 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬೇಕಿತ್ತು. ಆದರೆ ಇದೀಗ 32 ಡಿಗಿ ಸೆಲ್ಸಿಯಸ್ ತಾಪಮಾನ ಇದೆ. ಬಿಸಿಲಿನ ತಾಪಕ್ಕೆ ಪಾಸ್ ಹೊಂದಿರುವ ವಿವಿಐಪಿಗಳು, ಇನ್ನಿತರರು ಸುಸ್ತಾಗಲಿದ್ದಾರೆ. ಈ ಬಾರಿಯೂ 25 ಸಾವಿರ ಆಸನದ ವ್ಯವ್ಯಸ್ಥೆಯನ್ನು ಜಿಲ್ಲಾಡಳಿತ ಮಾಡಲಿದೆ.
ಟೋಪಿ ವಿತರಣೆ ಮಾಹಿತಿ ಕುರಿತಂತೆ ಅರಮನೆ ಆಡಳಿತ ಮಂಡಳಿ ಉಪನಿರ್ದೇಶಕ ಡಾ.ಟಿ.ಎಸ್.ಸುಬ್ರಮಣ್ಯ ಮಾಹಿತಿ ನೀಡಿದ್ದಾರೆ.












Click it and Unblock the Notifications