ದಸರಾದಲ್ಲಿ ಪ್ಲಾಸ್ಟಿಕ್ ಬ್ಯಾಗ್ ಬಳಸಿದ್ರೆ ದಂಡ ಹಾಕ್ತಾರೆ!
ಮೈಸೂರು, ಸೆಪ್ಟೆಂಬರ್. 18 : ದಸರಾ ಮಹೋತ್ಸವದಲ್ಲಿ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಕೆ ಮಾಡಿದರೆ ದಂಡ ವಿಧಿಸುವ ಯೋಜನೆಯನ್ನು ಈ ಬಾರಿ ಜಾರಿಗೆ ತರಲಾಗಿದೆ. ಸಾಂಸ್ಕೃತಿಕ ನಗರಿ ಎಂಬ ಗರಿಯುಳ್ಳ ಮೈಸೂರು ಸ್ವಚ್ಛ ನಗರಿ ಎಂಬ ಪಟ್ಟಿಯಲ್ಲಿ ಸೇರಿರುವುದರಿಂದ ಮೈಸೂರು ಮಹಾನಗರ ಪಾಲಿಕೆ ಕೂಡ ಭರ್ಜರಿ ತಯಾರಿ ನಡೆಸಿದೆ.
ದಸರಾಕ್ಕೆ ಬೇರೆ ಬೇರೆ ಪ್ರದೇಶಗಳಿಂದ ಪ್ರವಾಸಿಗರು ಬರುವುದರಿಂದ ಪ್ಲಾಸ್ಟಿಕ್ ಬಳಕೆ ಮಾಡುತ್ತಾರೆ. ಮೊದಲು ಅವರಿಗೆ ಅರಿವು ಮೂಡಿಸಿ ಆಅನಂತರ ಪ್ಲಾಸ್ಟಿಕ್ ಚೀಲ ವಶಪಡಿಸಿಕೊಂಡು ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ತಿಳಿಸಿದ್ದಾರೆ.
ಪೌರ ಕಾರ್ಮಿಕರು ಸಜ್ಜು
ನಗರದ ಸೌಂದರ್ಯವನ್ನು ಕಾಪಾಡಲು ಮಹಾನಗರ ಪಾಲಿಕೆ ಪೌರ ಕಾರ್ಮಿಕರ 5 ತಂಡಗಳನ್ನು ರಚಿಸಲು ಸಿದ್ಧತೆ ನಡೆಸಿದೆ. ಜಂಬೂ ಸವಾರಿ ಸಾಗುವ ಮಾರ್ಗ, ನಗರದ ಪ್ರಮುಖ ವೃತ್ತಗಳು, ಪ್ರಮುಖ ಸ್ಥಳಗಳು ಹಾಗೂ ಪ್ರವಾಸಿ ತಾಣಗಳ ಆಸುಪಾಸಿನಲ್ಲಿ ಶುಚಿತ್ವ ಕಾಪಾಡಲು ನುರಿತ ಪೌರ ಕಾರ್ಮಿಕರ ವಿಶೇಷ ತಂಡಗಳನ್ನು ರೂಪಿಸಲಾಗುತ್ತಿದೆ.

ನವರಾತ್ರಿ ವೇಳೆ ಮೈಸೂರಿಗೆ ಲಕ್ಷಾಂತರ ಮಂದಿ ಪ್ರವಾಸಿಗರು ಭೇಟಿ ನೀಡುತ್ತಾರೆ. ಆ ವೇಳೆ ಸಹಜವಾಗಿ ರಾಶಿ ರಾಶಿ ಕಸ ಸಂಗ್ರಹವಾಗುತ್ತದೆ. ಅದನ್ನು ತಕ್ಷಣದಲ್ಲಿಯೇ ವಿಲೇವಾರಿ ಮಾಡಿ ನಗರದ ಸೌಂದರ್ಯ ಕಾಪಾಡಲು 5 ತಂಡಗಳನ್ನು ರಚಿಸಲಾಗುತ್ತಿದೆ.
ನಗರ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರೊಂದಿಗೆ ಹೆಚ್ಚುವರಿಯಾಗಿ 280 ಮಂದಿ ಸ್ವಚ್ಛತಾ ಪೌರಕಾರ್ಮಿಕರನ್ನು ನೇಮಿಸಿಕೊಳ್ಳಲು ಟೆಂಡರ್ ಕರೆಯಲಾಗಿದೆ. ಒಂದೊಂದು ತಂಡದಲ್ಲಿ 70 ಮಂದಿ ಸ್ವಚ್ಛತಾ ಪೌರಕಾರ್ಮಿಕರು ಇರಲಿದ್ದಾರೆ.
ಈ ತಂಡಗಳು ದಸರಾ ಕಾರ್ಯಕ್ರಮಗಳು ನಡೆಯುವ ಸ್ಥಳಗಳಲ್ಲಿ ದಿನವೊಂದಕ್ಕೆ ಮೂರು ಬಾರಿ ಸ್ವಚ್ಛತೆ ಮಾಡಲಿವೆ. ಅಲ್ಲದೇ, ಪ್ರಮುಖ ರಸ್ತೆಗಳಲ್ಲಿ ಶುಚಿತ್ವ ಕಾರ್ಯ ನಡೆಯಲಿದೆ. ಪ್ರತಿ ತಂಡಕ್ಕೂ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ.
ನಗರಪಾಲಿಕೆ ಆಯುಕ್ತ ಕೆ.ಎಚ್.ಜಗದೀಶ್, ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್, ಆರೋಗ್ಯಾಧಿಕಾರಿಗಳಾದ ಡಾ.ರಾಮಚಂದ್ರ, ಡಾ.ಡಿ.ಜಿ.ನಾಗಾರಜು, ಪರಿಸರ ಇಂಜಿನಿಯರ್, ಕಾರ್ಯಪಾಲಕ ಇಂಜಿನಿಯರ್ ಗಳು ತಂಡದಲ್ಲಿದ್ದಾರೆ.












Click it and Unblock the Notifications