ರಾಜ್ಯದ ಮೊದಲ ಕನ್ನಡ ವಿಜ್ಞಾನ ಕಾಲೇಜಿನತ್ತ ಪೋಷಕರ ನಿರಾಸಕ್ತಿ
ಮೈಸೂರು, ಜೂನ್ 15: ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂದು ಒಂದು ಕಡೆ ಹೋರಾಟ ನಡೆಯುತ್ತಿದ್ದರೆ, ಮತ್ತೊಂದೆಡೆ ಕನ್ನಡ ಮಾಧ್ಯಮದ ಶಾಲಾ ಕಾಲೇಜುಗಳು ಯಾರೂ ಬಾರದ ಸ್ಥಿತಿಯಲ್ಲಿವೆ. ಇದರ ಬಿಸಿ ಮೈಸೂರಿನ ಪ್ರತಿಷ್ಠಿತ, ರಾಜ್ಯದ ಮೊಟ್ಟ ಮೊದಲ ಕನ್ನಡ ಪದವಿಪೂರ್ವ ವಿಜ್ಞಾನ ಕಾಲೇಜಿಗೂ ತಟ್ಟಿದೆ.
ಕನ್ನಡದಲ್ಲಿಯೇ ವಿಜ್ಞಾನ ವಿಷಯವನ್ನು ಬೋಧಿಸಲು ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕಾಲೇಜು ಮುಂದಾಯಿತು. ಆದರೆ ಈ ಸಿಬ್ಬಂದಿ ವರ್ಗದ ಪ್ರಯತ್ನಕ್ಕೆ ಪೋಷಕರೇ ತಣ್ಣೀರೆರಚಿದ್ದಾರೆ. ವಿದ್ಯಾರ್ಥಿಗಳೂ ಈ ಕಾಲೇಜಿಗೆ ಸೇರಲು ನಿರಾಸಕ್ತರಾಗಿದ್ದಾರೆ.
ಕನ್ನಡದ ವಿಕಾಸ, ಸಂಸ್ಕೃತಿಯನ್ನು ಬಿಂಬಿಸುವ ನಿಟ್ಟಿನಲ್ಲಿ ಆರಂಭವಾದ ನೃಪತುಂಗ ಸಂಸ್ಥೆ, ಹತ್ತನೇ ತರಗತಿಯ ಬಳಿಕ ಕನ್ನಡದಲ್ಲಿಯೇ ವಿಜ್ಞಾನವನ್ನು ಕಲಿಸುವ ಹೊಸ ಪ್ರಯತ್ನಕ್ಕೆ ಮುಂದಾಯಿತು.

ಕಾಲೇಜಿಗೆ ಸರ್ಕಾರ ಈಗಾಗಲೇ ಒಂದು ಕೋಟಿ ರೂಪಾಯಿ ಅನುದಾನ ನೀಡಿ ಸುಸಜ್ಜಿತ ವ್ಯವಸ್ಥೆ ರೂಪಿಸಿತ್ತು. ಅಲ್ಲದೆ ಮತ್ತೊಂದು ಕೋಟಿ ಅನುದಾನಕ್ಕೆ ಭರವಸೆಯನ್ನು ನೀಡಿತ್ತು. ಎಲ್ಲ ರೀತಿಯ ಅತ್ಯಾಧುನಿಕ ಸೌಲಭ್ಯಗಳನ್ನೂ ಕಾಲೇಜು ಹೊಂದಿತ್ತು. ಇಷ್ಟೆಲ್ಲದರ ನಡುವೆ ಕನ್ನಡದಲ್ಲಿ ಕಲಿಯುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಲು ಉಚಿತ ಶಿಕ್ಷಣ ಒದಗಿಸುವ ವ್ಯವಸ್ಥೆ ಮಾಡಲು ಸಂಸ್ಥೆ ಮುಂದಾಗಿದೆ. ಸರ್ಕಾರಕ್ಕೆ ಪಾವತಿಸಬೇಕಾಗಿರುವ 1500 ರೂಗಳನ್ನು ಮಾತ್ರ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾಗುತ್ತಿದೆ. ಉಳಿದೆಲ್ಲಾ ವೆಚ್ಚಗಳನ್ನು ದಾನಿಗಳೇ ಬರಿಸಲು ಮುಂದಾಗಿದ್ದರು. ಆದರೂ ವಿದ್ಯಾರ್ಥಿಗಳು ಮುಂದೆ ಬರುತ್ತಿಲ್ಲ ಎಂಬುದು ಬೇಸರದ ಸಂಗತಿ.

ಇತ್ತೀಚಿನ ದಿನದಲ್ಲಿ ಇಂಗ್ಲಿಷ್ ಪ್ರೀತಿ ಮತ್ತು ಭ್ರಮೆ ಪೋಷಕರಲ್ಲಿ ಕಂಡುಬರುತ್ತಿದೆ. ಉಚಿತವಾಗಿ ಕನ್ನಡದಲ್ಲಿ ಗುಣಮಟ್ಟದ ಶಿಕ್ಷಣ ನೀಡುತ್ತೇವೆಂದರೂ ದುಬಾರಿ ಆಂಗ್ಲ ಮಾಧ್ಯಮಕ್ಕೆ ಮಕ್ಕಳನ್ನು ಸೇರಿಸುತ್ತಾರೆ. ಫಲಿತಾಂಶಕ್ಕೆ ಮುನ್ನ ನಗರದ ಎಲ್ಲ ಪ್ರೌಢಶಾಲೆಗಳಿಗೆ ಹೋಗಿ ಈ ವರ್ಷದಿಂದ ಕನ್ನಡ ವಿಜ್ಞಾನ ಕಾಲೇಜು ಆರಂಭಿಸುವುದಾಗಿ ತಿಳಿಸಿದ್ದೆವು. ನೂರಾರು ಮಂದಿ ವಿದ್ಯಾರ್ಥಿಗಳು ಸೇರುವುದಾಗಿಯೂ ಭರವಸೆ ನೀಡಿದ್ದರು. ಆದರೆ ನಂತರ ಪೋಷಕರು ಅದಕ್ಕೆ ಪ್ರೋತ್ಸಾಹ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಸಂಸ್ಥೆ ಅಧ್ಯಕ್ಷ ಪ. ಮಲ್ಲೇಶ್.












Click it and Unblock the Notifications