ಭಾರತದ ಏಕೈಕ ಸಂಸ್ಕೃತ ಪತ್ರಿಕೆಗೆ ಹುಡುಕಿಕೊಂಡು ಬಂತು ಪದ್ಮಶ್ರೀ ಗೌರವ
ಮೈಸೂರು, ಜನವರಿ 26: ಭಾರತದ ಏಕೈಕ ಸಂಸ್ಕೃತ ದಿನ ಪತ್ರಿಕೆ ಪ್ರಸರಣವಾಗುವುದು ನಮ್ಮ ಕರ್ನಾಟಕದ ಮೈಸೂರಿನಲ್ಲಿ. "ಸುಧರ್ಮ' ಎಂಬ ಸಂಸ್ಕೃತ ಪತ್ರಿಕೆಗೆ ಕೇಂದ್ರ ಸರ್ಕಾರದ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
"ಸುಧರ್ಮ' ಪತ್ರಿಕೆಯ ಸಂಪಾದಕ ದಂಪತಿ ಕೆ.ವಿ.ಸಂಪತ್ ಕುಮಾರ್ ಹಾಗೂ ಅವರ ಪತ್ನಿ ಕೆ.ಎಸ್.ಜಯಲಕ್ಷ್ಮಿ ಅವರು, ಪದ್ಮಶ್ರೀ ಪ್ರಶಸ್ತಿ ಬಂದಿರುವುದಕ್ಕೆ ಅತೀವ ಸಂತಸಗೊಂಡಿದ್ದಾರೆ.
""ಪದ್ಮಶ್ರೀ ಪ್ರಶಸ್ತಿಗೆ ಯಾವುದೇ ಅರ್ಜಿ ಹಾಕದೆ ಅದೇ ಹುಡುಕಿಕೊಂಡು ಬಂದಿರುವುದು ತುಂಬಾ ಖುಷಿಯಾಗುತ್ತಿದೆ, ನಮ್ಮ ಹೆಸರನ್ನು ಪರೋಕ್ಷವಾಗಿ ಸೂಚಿಸಿರುವವರಿಗೆ ಕೋಟಿ ಕೋಟಿ ವಂದನೆ ಎಂದು ಹೇಳಿದರು.''

""ದೆಹಲಿಯಿಂದ ಕರೆ ಬಂದಾಗ ಆರಂಭದಲ್ಲಿ ನಂಬಲೂ ಸಾಧ್ಯವಾಗಲಿಲ್ಲ. ಆ ಬಳಿಕ ವಿಚಾರಿಸಿದಾಗ ಪ್ರಶಸ್ತಿ ಲಭಿಸಿರುವುದು ಖಚಿತವಾಯಿತು.
ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸುಮಾರು ಮೂರೂವರೆ ಸಾವಿರ ಪತ್ರಿಕೆಗಳು ಪ್ರಸಾರ ಆಗುತ್ತಿವೆ. ಅದರಲ್ಲಿ ಎಲೆಮರೆ ಕಾಯಿಯಂತಿದ್ದ ನಮ್ಮ ಪತ್ರಿಕೆ ಗುರುತಿಸಿದ ಕೇಂದ್ರ ಸರ್ಕಾರಕ್ಕೆ ಧನ್ಯವಾದಗಳು'' ಎಂದರು.
ಸಂಸ್ಕೃತ ಭಾಷೆಯನ್ನು ಪ್ರಚಾರಪಡಿಸುವ ನಿಟ್ಟಿನಲ್ಲಿ 50 ವರ್ಷಗಳಿಂದ ಪತ್ರಿಕೆ ಪ್ರಸಾರವಾಗುತ್ತಿದೆ. ಸಂಪತ್ ಕುಮಾರ್ ತಂದೆ, ಸಂಸ್ಕೃತ ಪಂಡಿತರಾದ ವರದರಾಜ್ ಅಯ್ಯಂಗಾರ್ ಅವರು "ಸುಧರ್ಮ' ಎಂಬ ಸಂಸ್ಕೃತ ಪತ್ರಿಕೆಯನ್ನು 1970 ರಲ್ಲಿ ಪ್ರಾರಂಭಿಸಿದ್ದರು. ಇಂದಿಗೂ ಭಾರತದ ಏಕೈಕ ಸಂಸ್ಕೃತ ಪತ್ರಿಕೆ ಎಂಬ ಹಿರಿಮೆಗೆ ಪಾತ್ರವಾಗಿದೆ.












Click it and Unblock the Notifications