ಮೈಸೂರಿನಲ್ಲೂ ರಸ್ತೆಗಿಳಿದು ಪ್ರತಿಭಟಿಸಿದ ವೈದ್ಯ ಸಮೂಹ
ಮೈಸೂರು, ನವೆಂಬರ್ 3 : ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ 2017ಕ್ಕೆ (ಕೆಪಿಎಂಇ) ಮಾಡಿರುವ ತಿದ್ದುಪಡಿಯಲ್ಲಿನ ಕೆಲವು ಅಂಶಗಳನ್ನು ಕೈಬಿಡುವಂತೆ ಆಗ್ರಹಿಸಿ ರಾಜ್ಯಾದ್ಯಂತ ಖಾಸಗಿ ವೈದ್ಯರು ಧರಣಿ ಕೈಗೊಂಡಿದ್ದು, ಮೈಸೂರಿನಲ್ಲೂ ವೈದ್ಯರು ಮೌನ ಪ್ರತಿಭಟನೆ ನಡೆಸಿದರು.
In Pics : ವೈದ್ಯರ ಮುಷ್ಕರದಿಂದ ರೋಗಿಗಳ ನೀಗದ ಸಂಕಷ್ಟ
ಜೆ.ಕೆ ಮೈದಾನದಲ್ಲಿರುವ ಮೈಸೂರು ವೈದ್ಯಕೀಯ ಕಾಲೇಜಿನ ಅಮೃತ ಮಹೋತ್ಸವ ಸಭಾಂಗಣದಲ್ಲಿ ಮಸೂದೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಇದೇ ಸಂದರ್ಭ ಡಾ.ಯೋಗಣ್ಣ ಮಾತನಾಡಿ, ರಾಜ್ಯ ಸರ್ಕಾರ ಆರೋಗ್ಯ ಶಾಸ್ತ್ರದ ಮರಣ ಶಾಸನವನ್ನು ಹೊರಡಿಸಿದೆ. ಆದ್ದರಿಂದ ಮೈಸೂರಿನ 120 ಖಾಸಗೀ ಆಸ್ಪತ್ರೆಗಳು ಬೆಳಿಗ್ಗೆ 8 ರಿಂದ ನಾಳೆ ಬೆಳಿಗ್ಗೆ 8 ಗಂಟೆಯವರೆಗೆ ವೈದ್ಯಕೀಯ ಸೇವೆಗಳನ್ನು ಸ್ಥಗಿತಗೊಳಿಸಲಿವೆ.

ಕೆಪಿಎಂ ಇಎ ಕಾಯ್ದೆ ತಿದ್ದುಪಡಿಯ ಕರಾಳ ಕೃತ್ಯವನ್ನು ವಿರೋಧಿಸಿ ರಾಜ್ಯಾದ್ಯಂತ 50 ಸಾವಿರ ಖಾಸಗೀ ಆಸ್ಪತ್ರೆಗಳು ಬಂದ್ ನಡೆಸಿವೆ. ಆದ್ದರಿಂದ ಎಲ್ಲಾ ವೈದ್ಯರು ಸರ್ಕಾರದ ವಿರುದ್ಧ ಪ್ರತಿಭಟಿಸುತ್ತಿದ್ದೇವೆ ಎಂದರು. ಐನೂರಕ್ಕೂ ಹೆಚ್ಚು ವೈದ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಒನ್ ಇಂಡಿಯಾಕ್ಕೆ ಸ್ಪಷನೆ
ಇನ್ನು ಈ ಕುರಿತಾಗಿ ಒನ್ ಇಂಡಿಯಾದೊಂದಿಗೆ ಮಾತನಾಡಿದ ಮೈಸೂರು ಖಾಸಗಿ ಆಸ್ಪತ್ರೆ ಗಳ ಸಂಘದ ಅಧ್ಯಕ್ಷ ಡಾ. ಮಹೇಶ್ ಕುಮಾರ್ , ಶುಕ್ರವಾರ ಬೆಳಿಗ್ಗೆ 8ರಿಂದ ಶನಿವಾರ ಬೆಳಿಗ್ಗೆ 8ರವರೆಗೆ ಮೈಸೂರಿನಲ್ಲಿ ಜೆಎಸ್ ಎಸ್, ಅಪೋಲೊ, ನಾರಾಯಣ ಹೃದಯಾಲಯ ಸೇರಿದಂತೆ ನಗರ ವ್ಯಾಪ್ತಿಯ ಆಸ್ಪತ್ರೆಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗುತ್ತದೆ. ಯಾವುದೇ ರೋಗಿಗಳನ್ನು ಇಂದು ಖಾಸಗಿ ಆಸ್ಪತ್ರೆಗಳು ದಾಖಲು ಮಾಡಿಕೊಳ್ಳುವುದಿಲ್ಲ. ಆದರೆ, ಗಂಭೀರವಾದ ಆರೋಗ್ಯ ಸ್ಥಿತಿಯಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಬರುವ ರೋಗಿಗಳನ್ನು ಖಾಸಗಿ ಆಸ್ಪತೆಯ ಆಂಬ್ಯುಲೆನ್ಸ್ ಲ್ಲಿಯೇ ಸರ್ಕಾರಿ ಆಸ್ಪತ್ರೆಗಳಿಗೆ ಕಳುಹಿಸಿಕೊಡಲು ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಆಸ್ಪತ್ರೆಗಳಲ್ಲಿ ದಾಖಲಾಗಿರುವ ರೋಗಿಗಳಿಗೆ ಯಾವುದೇ ತೊಂದರೆ ನೀಡುವುದಿಲ್ಲ ಎಂದರು.

ರಾಜ್ಯ ಸರ್ಕಾರ
ಕೆಪಿಎಂಇ ಕಾಯ್ದೆಯನ್ನು ಕಡ್ಡಾಯವಾಗಿ ಜಾರಿಗೆ ತರಲು ಮುಂದಾದರೆ ಖಾಸಗಿ ಆಸ್ಪತ್ರೆಗಳ ವೈದ್ಯರು ಬೇರೆ ದಾರಿ ಕಂಡುಕೊಳ್ಳಲು ಸಿದ್ಧರಿದ್ದೇವೆ. ಜನರನ್ನು ನಾವು ಆಸ್ಪತ್ರೆಗಳಿಗೆ ಬನ್ನಿ ಎಂದು ಬಲವಂತ ಮಾಡಿಲ್ಲ. ಆದರೆ ನಮ್ಮಲ್ಲಿರುವ ವಿಶೇಷ ಸೌಲಭ್ಯ ಹಾಗೂ ಚಿಕಿತ್ಸೆಯನ್ನು ಮೆಚ್ಚಿಯೇ ಜನರು ಬರುತ್ತಾರೆ. ಖಾಸಗಿ ಆಸ್ಪತ್ರೆಗಳು ಕೊಡುವ ಚಿಕಿತ್ಸೆಯನ್ನು ಸರ್ಕಾರಿ ಆಸ್ಪತ್ರೆಗಳು ಕೊಡಬೇಕು. ಖಾಸಗಿ ಆಸ್ಪತ್ರೆಗಳ ಮೇಲೆ ಕಡಿವಾಣ ಹಾಕಲು ಮುಂದಾಗಬಾರದು ಎಂದು ಮನವಿ ಮಾಡಿದರು.












Click it and Unblock the Notifications