ಸ್ವಚ್ಛ ಸರ್ವೇಕ್ಷಣ್ ಅಭಿಯಾನ:ಮೈಸೂರಿಂದ 1 ಲಕ್ಷಕ್ಕೂ ಅಧಿಕ ಮಂದಿ ವೋಟ್
ಮೈಸೂರು, ಫೆಬ್ರವರಿ 1: ಈ ಸಾಲಿನ ಸ್ವಚ್ಛ ಸರ್ವೇಕ್ಷಣ್ ಕಾರ್ಯ ಗುರುವಾರ ಪೂರ್ಣಗೊಂಡಿದೆ. ಅರಮನೆ ನಗರಿಯ ಸುಮಾರು 1 ಲಕ್ಷ ನಾಗರಿಕರು ಸ್ವಚ್ಛ ಸರ್ವೇಕ್ಷಣ್ ನಲ್ಲಿ ತಮ್ಮ ಅಭಿಪ್ರಾಯವನ್ನು ದಾಖಲಿಸಿದ್ದಾರೆ.
ಈ ಸಾಲಿನ ಸ್ವಚ್ಛ ಸರ್ವೇಕ್ಷಣ್ ಜನವರಿ 4 ರಂದು ಆರಂಭಗೊಂಡು, ಸತತ 27 ದಿನಗಳ ಕಾಲ ನಡೆದು ಜನವರಿ 31ರ ಮಧ್ಯರಾತ್ರಿ 12ಕ್ಕೆ ಪೂರ್ಣಗೊಂಡಿದೆ. ದಿಲ್ಲಿಯಿಂದ ಮೂರು ತಂಡಗಳಲ್ಲಿ ಅಧಿಕಾರಿಗಳು ಅಭಿಯಾನಕ್ಕಾಗಿ ಮೈಸೂರಿಗೆ ಆಗಮಿಸಿದ್ದರು.
ಈ ಬಾರಿ ಸಿಗುವುದೇ ಮೈಸೂರಿಗೆ ಸ್ವಚ್ಛ ನಗರಿ ಪಟ್ಟ ?
ಈ ಸರ್ವೇಯಲ್ಲಿ ಜನವರಿ 30ರವರೆಗೆ 91 ಸಾವಿರ ಮಂದಿ ಕರೆ ಮಾಡಿ ಮತ್ತು ನೇರವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದ್ದರು. ಇದು ಅಭಿಯಾನ ಮುಕ್ತಾಯದ ವೇಳೆಗೆ ಒಂದು ಲಕ್ಷ ತಲುಪಿದೆ ಎಂದು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗರಾಜ್ ತಿಳಿಸಿದ್ದಾರೆ.
ಕಳೆದ ಸಾಲಿನಲ್ಲಿ ಸ್ವಚ್ಛ ಸರ್ವೇಕ್ಷಣೆಯಲ್ಲಿ ಐದನೇ ಸ್ಥಾನ ಪಡೆದ ಹಿನ್ನೆಲೆಯಲ್ಲಿ, ಈ ವರ್ಷ ಮೊದಲ ಸ್ಥಾನ ಪಡೆಯಬೇಕೆಂದು ನಗರ ಪಾಲಿಕೆ ಅಧಿಕಾರಿಗಳು ಮತ್ತು ಪೌರ ಕಾರ್ಮಿಕರು ಹೆಚ್ಚು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ, ಅಭಿಯಾನದಲ್ಲಿ ಪ್ರತಿಕ್ರಿಯೆ ನೀಡುವುದು ಮತ್ತು ಮತದಾನದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಬಗ್ಗೆ ಮಾಹಿತಿ ನೀಡಿದ್ದಾರೆ
ಅಧಿಕಾರಿಗಳ ತಂಡವು ನಗರದ ಉದ್ಯಾನವನ, ಸಾರ್ವಜನಿಕ ಶೌಚಾಲಯ, ಹೋಟೆಲ್, ಪ್ಲಾಂಟ್ ಮತ್ತು ಮನೆಮನೆಗೆ ಹೋಗಿ ಅಭಿಪ್ರಾಯ ಸಂಗ್ರಹಿಸಿದ್ದಾರೆ. ಎಕ್ಸೆಲ್ ಪ್ಲಾಂಟ್ ಗೆ ಭೇಟಿ ನೀಡಿ ಕಸ ನಿರ್ವಹಣೆಯನ್ನು ಖುದ್ದು ವೀಕ್ಷಣೆ ಮಾಡಿದ್ದು, ಅಧಿಕಾರಿಗಳು ನಾಗರಿಕರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ನಾಗರಾಜ್ ಹೇಳಿದರು.
ಮೈಸೂರು 'ಸ್ವಚ್ಛನಗರಿ' ಪಟ್ಟ ಪಡೆಯಲು ಎಲ್ಲರೂ ಸಹಕರಿಸಿ:ಯಶ್
ಸತತ ಒಂದು ತಿಂಗಳಿಂದ ನಗರ ಪಾಲಿಕೆ ಪೌರ ಕಾರ್ಮಿಕರು ಬೆಳಗ್ಗೆಯಿಂದ ಸಂಜೆಯವರೆಗೂ ಕರ್ತವ್ಯ ನಿರ್ವಹಿಸಿದ್ದಾರೆ. ಅನೇಕ ಸಂಘ - ಸಂಸ್ಥೆಗಳು ಸ್ವಯಂ ಪ್ರೇರಿತವಾಗಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿ ಪಾಲಿಕೆಯೊಂದಿಗೆ ಕೈ ಜೋಡಿಸಿದೆ. ಪಾಲಿಕೆಯ ಗುತ್ತಿಗೆದಾರರು ಉಚಿತ ಜೆಸಿಬಿ ಯಂತ್ರಗಳನ್ನು ಸಹ ನೀಡಿದ್ದರು. ಮೈಸೂರು ನಗರ ಪಾಲಿಕೆ ಸ್ವಚ್ಛತಾ ರಾಯಭಾರಿಗಳಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್, ಜಾವಗಲ್ ಶ್ರೀನಾಥ್ , ಯೋಗಪಟು ಖುಷಿ, ಇಶಾಂತ್ , ರೀಫಾ ತಸ್ಕಿನ್ ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ.