ಮೈಸೂರು ದಸರೆಗೆ ಹಾರಲಿವೆಯೇ ಲೋಹದ ಹಕ್ಕಿಗಳು?
ಮೈಸೂರು, ಆಗಸ್ಟ್ 22 : ವಿಶ್ವವಿಖ್ಯಾತ ದಸರಾ ಮಹೋತ್ಸವವನ್ನು ಮತ್ತಷ್ಟು ಆಕರ್ಷಕವಾಗಿಸುವ ಹಿನ್ನೆಲೆಯಲ್ಲಿ ಆಗಸದಲ್ಲಿ ಲೋಹದ ಹಕ್ಕಿಗಳ ಹಾರಾಟ ನಡೆಸಲು ಜಿಲ್ಲಾಡಳಿತ ಪ್ರಯತ್ನ ಮುಂದುವರಿಸಿದೆ.
ನಗರದ ಬನ್ನಿಮಂಟಪದಲ್ಲಿ ಪಂಜಿನ ಕವಾಯತು ಮೈದಾನದಲ್ಲಿ ವಾಯುಪಡೆಯಿಂದ ವೈಮಾನಿಕ ದರ್ಶನ ನಡೆಸುವ ಚಿಂತನೆಯಿದ್ದು, ಅದು ಸಾಕಾರಗೊಂಡಲ್ಲಿ ಆಕಾಶದಲ್ಲಿ ವಿವಿಧ ರೀತಿಯ ವಿನ್ಯಾಸ, ವೈವಿಧ್ಯಮಯ ಪದರ್ಶನ ಹಾಗೂ ಲೋಹದ ಹಕ್ಕಿಗಳ ಹಾರಾಟ ಜನತೆಯ ಮನರಂಜಿಸಲಿವೆ. ಹೌದು, ದಸರಾ ಮಹೋತ್ಸವದ ಆರಂಭಕ್ಕೆ ಸರಿ ಯಾಗಿ ಇನ್ನೂ ಒಂದು ತಿಂಗಳು ಇದೆ.

ಈ ಬಾರಿ ದಸರಾ ಮಹೋತ್ಸವದ ಅಂಗವಾಗಿ ನಗರದ ಬನ್ನಿಮಂಟಪ ಮೈದಾನದಲ್ಲಿ ವೈಮಾನಿಕ ಪ್ರದರ್ಶನವನ್ನು ನಡೆಸಲು ಭಾರತೀಯ ವಾಯುಪಡೆಯ ಏರ್ ಮಾರ್ಷಲ್ ಅವರಿಗೆ ಪತ್ರ ಬರೆಯುವುದಾಗಿ ಜಿಲ್ಲಾಧಿಕಾರಿ ಡಿ.ರಂದಿಪ್ ತಿಳಿಸಿದರು.
ಮೈಸೂರು ದಸರಾ ಅಂದರೆ ಅದು ಗತಕಾಲದ ವೈಭವವನ್ನು ಕಣ್ಮುಂದೆ ತರುವ ಸಡಗರ ಸಂಭ್ರಮದ ಹಬ್ಬ. ದಸರೆಯಲ್ಲಿ ನಡೆಯುವ ಕಾರ್ಯಕ್ರಮಗಳನ್ನು ನೋಡಲು ದೇಶ-ವಿದೇಶಗಳಿಂದ ಲಕ್ಷಾಂತರ ಜನರು ಆಗಮಿಸುತ್ತಾರೆ. ವಿವಿಧ ಕಾರ್ಯುಕ್ರಮಗಳನ್ನು ಕಣ್ತುಂಬಿಕೊಳ್ಳುತ್ತಾರೆ. ಅದರಲ್ಲೂ ನಮ್ಮ ಸೇನೆಯವರು ನಡೆಸಿಕೊಡುವ ವೈಮಾನಿಕ ಪ್ರದರ್ಶನ ಎಲ್ಲರನ್ನೂ ರೋಮಾಂಚನಗೊಳಿಸುತ್ತದೆ.
ಆದರೆ ಕಳೆದ 5 ವರ್ಷಗಳಿಂದ ಈ ವೈಮಾನಿಕ ಪ್ರದರ್ಶನ ನಿಂತು ಹೋಗಿತ್ತು. ಈ ಬಾರಿ ವೈಮಾನಿಕ ಪ್ರದರ್ಶನವನ್ನು ನಡೆಸಿಕೊಡಬೇಕೆಂದು ಸಿಎಂ ಸಿದ್ದರಾಮಯ್ಯ ಉತ್ಸುಕರಾಗಿದ್ದು, ಸಂಬಂಧಪಟ್ಟವ ರೊಂದಿಗೆ ಪತ್ರ ವ್ಯವಹಾರ ನಡೆಸುವಂತೆ ಉನ್ನತ ಮಟ್ಟದ ಸಭೆಯಲ್ಲೇ ತಿಳಿಸಿದ್ದರು ಎಂದು ಜಿಲ್ಲಾಧಿಕಾರಿ ಹೇಳಿದರು.
ವಾಯುಪಡೆಯ ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡಕ್ಕೆ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಅನುಮತಿ ಕೋರಲಾಗಿದೆ. ಸಾರಂಗ್ ಹೆಲಿಕಾಪ್ಟರ್ ಪ್ರದರ್ಶನ ತಂಡ ದಸರೆಯಲ್ಲಿ ಭಾಗವಹಿಸುವುದರಿಂದ ದಸರಾ ಮತ್ತಷ್ಟು ವರ್ಣಮಯವಾಗುತ್ತದೆ. ಅಷ್ಟೇ ಅಲ್ಲ ಜನರಿಗೆ ಭಾರತೀಯ ವಾಯುಪಡೆಯ ಯೋಧರ ಸಾಹಸ, ಪರಾಕಮವನ್ನು ಕಣ್ಣಾರೆ ನೋಡುವ ಅವಕಾಶವನ್ನು ಒದಗಿಸುವ ಪಯತ್ನ ಮಾಡುತ್ತಿದ್ದೇವೆ ಎಂದರು.












Click it and Unblock the Notifications