ಮೈಸೂರಿನಲ್ಲಿ ಯೋಗ ದಿನಕ್ಕೆ ತಾಲೀಮು; 60 ಲಕ್ಷ ಅನುದಾನ
ಮೈಸೂರು, ಜೂನ್ 17: ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಜೂ.21 ರಂದು ನಡೆಯಲಿರುವ ಹಿನ್ನೆಲೆಯಲ್ಲಿ, ಸಾಮೂಹಿಕ ಯೋಗ ತಾಲೀಮನ್ನು ಮೈಸೂರಿನ ರೇಸ್ ಕೋರ್ಸ್ ನಲ್ಲಿ ನಡೆಸಲಾಯಿತು. ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಮತ್ತು ಸಾಂಸ್ಕೃತಿಕ ನಗರಿಯ ವಿವಿಧ ಯೋಗ ಸಂಸ್ಥೆಗಳ ಸಹಯೋಗದೊಂದಿಗೆ ನಡೆದ ಪೂರ್ವಾಭ್ಯಾಸದಲ್ಲಿ ಐದು ಸಾವಿರಕ್ಕೂ ಅಧಿಕ ಯೋಗಪಟುಗಳು ಭಾಗವಹಿಸಿದ್ದರು.
ಜೂ.21ರಂದು ರೇಸ್ಕೋರ್ಸ್ ನಲ್ಲಿ ಸುಮಾರು ಒಂದು ಲಕ್ಷ ಜನರನ್ನು ಸೇರಿಸಿ ಯೋಗ ಪ್ರದರ್ಶನ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಯೋಗ ದಿನಾಚರಣೆ ಸಿದ್ಧತೆಯ ಹಾದಿಯಲ್ಲಿ ನಡೆದ ಕೊನೆಯ ತಾಲೀಮು ಇದು. ಕಳೆದ ವಾರ ಅರಮನೆ ಆವರಣದಲ್ಲಿ ಹಾಗೂ ಅದಕ್ಕೂ ಹಿಂದಿನ ವಾರ ಅಲ್ಬರ್ಟ್ ವಿಕ್ಟರ್ ರಸ್ತೆಯಲ್ಲಿ ಪೂರ್ವಾಭ್ಯಾಸ ಕೈಗೊಳ್ಳಲಾಗಿತ್ತು. ಯೋಗ ತರಬೇತಿ ಕೇಂದ್ರಗಳ ಸದಸ್ಯರು, ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಸದಸ್ಯರು, ವಿವಿಧ ಸರ್ಕಾರಿ ಇಲಾಖೆಗಳ ನೌಕರರು ಭಾಗವಹಿಸಿದ್ದರು. ಮಕ್ಕಳು, ಯುವಕ-ಯುವತಿಯರು, ಹಿರಿಯರು ಉತ್ಸಾಹದಿಂದ ವಿವಿಧ ಆಸನಗಳನ್ನು ಪ್ರದರ್ಶಿಸಿದರು.
ಮೈಸೂರಿನಲ್ಲಿ ಯೋಗ ದಿನಾಚರಣೆ: ಯೋಗಪಟುಗಳ ನಿರಾಸಕ್ತಿ
2017 ಮತ್ತು 2018ರಲ್ಲಿ ನಡೆದ ಯೋಗ ದಿನಾಚರಣೆ ಕಾರ್ಯಕ್ರಮಗಳಿಗೆ ರೇಸ್ಕೋರ್ಸ್ ನಲ್ಲಿ 50 ಸಾವಿರಕ್ಕೂ ಅಧಿಕ ಮಂದಿ ಸೇರಿದ್ದರು. ಈ ಬಾರಿ ಗಿನ್ನಿಸ್ ದಾಖಲೆಗೆ ಪ್ರಯತ್ನ ನಡೆಯುತ್ತಿಲ್ಲವಾದರೂ, ಒಂದು ಲಕ್ಷಕ್ಕೂ ಹೆಚ್ಚು ಮಂದಿಯನ್ನು ಸೇರಿಸುವ ಗುರಿಯನ್ನು ಸಂಘಟಕರು ಇಟ್ಟುಕೊಂಡಿದ್ದಾರೆ.
ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆ ಕಳೆದ ಸಲ ಹಣ ಬಿಡುಗಡೆ ಮಾಡಿತ್ತು. ಈ ಬಾರಿಯ ಯೋಗ ದಿನಾಚರಣೆ ಖರ್ಚು ಭರಿಸಲು 60 ಲಕ್ಷ ಬಿಡುಗಡೆ ಮಾಡಬೇಕು ಎಂದು ಶಾಸಕ ಎಸ್.ಎ.ರಾಮದಾಸ್ ಅವರು ಮನವಿ ಮಾಡಿದ್ದರು. ಆ ಮನವಿಯ ಮೇರೆಗೆ ಮುಖ್ಯಮಂತ್ರಿ ಅವರ ಸೂಚನೆಯಂತೆ 60 ಲಕ್ಷ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಜಿ.ಟಿ.ದೇವೇಗೌಡ ಅವರು ಮಾತನಾಡಿ, ಯೋಗವನ್ನು ಇಡೀ ದೇಶಕ್ಕೆ ಪರಿಚಯಿಸುವ ಕೆಲಸವನ್ನು ಮೈಸೂರಿನ ಜನರು ಮಾಡಿದ್ದಾರೆ. ಜೂನ್ 21 ರಂದು ನಡೆಯುವ ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಮುಖ್ಯ ಅತಿಥಿಯಾಗಿ ಯಾರು ಬರುವರು ಎಂಬುದು ತೀರ್ಮಾನವಾಗಿಲ್ಲ. ಕೇಂದ್ರ ಸಚಿವರಾದ ಸದಾನಂದ ಗೌಡ ಅಥವಾ ಸುರೇಶ್ ಅಂಗಡಿ ಅವರಲ್ಲಿ ಒಬ್ಬರನ್ನು ಆಹ್ವಾನಿಸುವ ಚಿಂತನೆ ಇದೆ ಎಂದು ತಿಳಿಸಿದರು.
'ಈ ಬಾರಿ ಮೈಸೂರಿನಲ್ಲಿ ಯೋಗ ವಿಶ್ವ ದಾಖಲೆಗೆ ಪ್ರಯತ್ನವಿಲ್ಲ'
ಈ ಬಾರಿ ಗಿನ್ನೆಸ್ ದಾಖಲೆ ಮಾಡಲು ಸಿದ್ಧರಾಗಿದ್ದೆವು. ಆದರೆ ತಯಾರಿ ನಡೆಸಲು ಕಾಲಾವಕಾಶ ಇಲ್ಲದ ಕಾರಣ ಮುಂದಿನ ವರ್ಷ ಪ್ರಯತ್ನಿಸೋಣ ಎಂದು ಸಂಸದ ಪ್ರತಾಪ ಸಿಂಹ ಅವರು ಹೇಳಿದರು. ಗಿನ್ನೆಸ್ ದಾಖಲೆಗೆ ಸರಿಸಾಟಿಯಾದ ಕಾರ್ಯಕ್ರಮ ಹಮ್ಮಿಕೊಳ್ಳುವುದು ನಮ್ಮ ಗುರಿ ಎಂದರು.
ಯೋಗ ದಿನಾಚರಣೆ ದಿನ ಮೈಸೂರಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಳ್ಳುವುದು ಖಚಿತವಾಗಿಲ್ಲ. ನಗರದ ಎಲ್ಲ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ ಎಂದು ಸಚಿವ ಜಿ.ಟಿ.ದೇವೇಗೌಡ ಅವರು ತಿಳಿಸಿದರು.