ಚಾಮುಂಡಿ ಬೆಟ್ಟದಲ್ಲಿ ಭೂಕುಸಿತ ಸ್ಥಳ ಪರಿಶೀಲಿಸಿದ ಅಧಿಕಾರಿಗಳು
ಮೈಸೂರು, ಅಕ್ಟೋಬರ್ 23: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿದ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ರಸ್ತೆ ಬಳಿ ಮಂಗಳವಾರ ಸಂಜೆ ಭೂ ಕುಸಿತವಾಗಿದ್ದು ಸ್ಥಳಕ್ಕೆ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಡಾಲ್ ಹೌಸಿ ವ್ಯೂವ್ ಪಾಯಿಂಟ್ ನಿಂದ ನಂದಿ ವಿಗ್ರಹದ ಬಳಿಗೆ ತೆರಳುವ ಮಾರ್ಗದಲ್ಲಿ ಸುಮಾರು 15 ಮೀಟರ್ ನಷ್ಟು ತಡೆಗೋಡೆ 7 ಮೀಟರ್ ನಷ್ಟು ಕುಸಿದಿದೆ. ಹೀಗಾಗಿ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಮುಂದಿನ I5 ದಿನಗಳಲ್ಲಿ ಉತ್ತಮ ಅಡಿಪಾಯದೊಂದಿಗೆ ಆರ್ ಸಿಸಿ ತಡೆಗೋಡೆ ನಿರ್ಮಿಸಲಾಗುವುದು, ತುರ್ತು ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಎಇಇ ರಾಜು, ಮರಳು ಮಿಶ್ರಿತ ಮಣ್ಣಿನಿಂದ ಕೂಡಿದ್ದಾಗಿದ್ದರಿಂದ ತಡೆಗೋಡೆ ಕುಸಿದಿದೆ. ಸ್ಥಳದಲ್ಲಿ ಓರ್ವ ಕೋಬ್ರಾ ಮತ್ತು ಇಬ್ಬರು ಸಂಚಾರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ರಸ್ತೆ ಕುಸಿದಿರುವುದರಿಂದ ನಂದಿಗೆ ಬರುವ ಎರಡು ಮಾರ್ಗವನ್ನು ಬಂದ್ ಮಾಡಲಾಗಿದೆ. ನಂದಿ ವಿಗ್ರಹಕ್ಕೆ ತೆರಳಲು ಅನ್ಯ ಮಾರ್ಗಗಳು ಇದ್ದು ಆ ಮಾರ್ಗಗಳ ಮೂಲಕ ತೆರಳಬಹುದು. ಪ್ರವಾಸಿಗರಿಗೆ ಇದರಿಂದ ಯಾವುದೇ ತೊಂದರೆಯಿಲ್ಲ ಎಂದು ಮಾಹಿತಿ ನೀಡಿದರು.

ಚಾಮುಂಡಿ ಬೆಟ್ಟದಿಂದ ನಂದಿಗೆ ಹೋಗುವ ಮಾರ್ಗದಲ್ಲಿ ಭೂಕುಸಿತವಾಗಿದ್ದು, ವಾಹನಗಳು ಸಂಚರಿಸಿದರೆ ಅಪಾಯದ ಸ್ಥಿತಿ ಉಂಟಾಗಲಿದೆ. ರಸ್ತೆ ಮಾರ್ಗ ಬಂದ್ ಮಾಡಿದರೆ ನಂದಿ ಬಳಿಯ ವ್ಯಾಪಾರಸ್ಥರಿಗೆ ಸಂಕಷ್ಟ ಎದುರಾಗಲಿದೆ. ರಸ್ತೆ ಬಂದ್ ಮಾಡಿದರೆ ನಂದಿ ಕಡೆಗೆ ಪ್ರವಾಸಿಗರು ಬರುವುದಿಲ್ಲ. ಹೀಗಾಗಿ 10-15 ದಿನಗಳಲ್ಲಿ ರಸ್ತೆ ದುರಸ್ತಿ ಮಾಡುವಂತೆ ನಂದಿ ಬಳಿಯ ವ್ಯಾಪಾರಸ್ಥರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಭೂಕುಸಿತವಾಗಿದ್ದ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾತನಾಡಿದ ಲೋಕೋಪಯೋಗಿ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಶ್ರೀನಿವಾಸ್, ಮುಂದಿನ 10-15 ದಿನಗಳಲ್ಲಿ ರಸ್ತೆ ಸುಸ್ಥಿರತೆಗೆ ತರಲು ಪ್ರಯತ್ನ ಮಾಡುತ್ತೇವೆ. ಅಲ್ಲಿಯವರೆಗೂ ಈ ಮಾರ್ಗ ಸ್ಥಗಿತಗೊಳಿಸುವುದೇ ಸೂಕ್ತ. ಮಳೆ ಮುಂದುವರಿದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ದೃಷ್ಟಿಯಿಂದ ವಾಹನಗಳ ಓಡಾಟ ಸ್ಥಗಿತ ಮಾಡುವುದು ಅನಿವಾರ್ಯವಾಗಿದೆ ಎಂದು ತಿಳಿಸಿದರು.












Click it and Unblock the Notifications