ಕಾಂಗ್ರೆಸ್ ಸಚಿವರ ಹೆಸರು ಮರೆತಿದ್ದಕ್ಕೆ ಸಿಡಿಮಿಡಿಗೊಂಡ ಸಾರಾ ಮಹೇಶ್
ಮೈಸೂರು, ಅಕ್ಟೋಬರ್. 12: ದಸರಾ ಅಂಗವಾಗಿ ನಗರದ ಜೆ ಕೆ ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ದಸರಾ ಕಾರ್ಯಕ್ರಮದಲ್ಲಿ ಮೂವರು ಸಚಿವರು ಸಿಡಿಮಿಡಿಗೊಂಡು ಏಕಾಏಕಿ ಕಾರ್ಯಕ್ರಮದಿಂದ ನಿರ್ಗಮಿಸಿದ ಘಟನೆ ನಡೆದಿದೆ.
ಎಂದಿನಂತೆ ಕಾರ್ಯಕ್ರಮವನ್ನು ಉದ್ಘಾಟಿಸಿದ ಸಚಿವ ಜಿ ಟಿ ದೇವೇಗೌಡ , ಸಾರಾ ಮಹೇಶ್, ಕೃಷಿ ಸಚಿವ ಶಿವಶಂಕರ ರೆಡ್ಡಿ ಅವರು ಕಾರ್ಯಕ್ರಮದಿಂದ ನಿರ್ಗಮಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳು ಹಾಗೂ ನಿರೂಪಕರು ವೇದಿಕೆಯಲ್ಲಿ ಕೃಷಿ ಸಚಿವ ಶಿವಶಂಕರ್ ರೆಡ್ಡಿ ಹೆಸರು ಮರೆತಿದ್ದು, ಕಾಂಗ್ರೆಸ್ ಸಚಿವರ ಹೆಸರು ಮರೆತಿದ್ದಕ್ಕೆ ಸಾ ರಾ ಮಹೇಶ್ ಸಿಡಿಮಿಡಿಗೊಂಡು ವೇದಿಕೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇದಾದ ಬಳಿಕ ನೀವೇ ಕಾರ್ಯಕ್ರಮ ಮಾಡಿಕೊಳ್ಳಿ ಎಂದು ತರಾತುರಿಯಲ್ಲಿ ನಿರ್ಗಮಿಸಿದ್ದಾರೆ. ಮತ್ತೊಂದು ಕಾರ್ಯಕ್ರಮಕ್ಕೆ ಹೋಗಬೇಕು ಎಂದು ವೇದಿಕೆಯ ಮೇಲೆ ಕುಳಿತುಕೊಳ್ಳದೆ, ಒಂದು ಮಾತನಾಡದೇ ಸಚಿವರು ನಿಂತುಕೊಂಡೇ ಕಾರ್ಯಕ್ರಮ ಉದ್ಘಾಟಿಸಿ ಏಕಾಏಕಿ ಹೊರನಡೆದಿದ್ದಾರೆ.

ಸಚಿವರ ನಡೆಯಿಂದ ಅಧಿಕಾರಿಗಳು ಹಾಗೂ ಮಕ್ಕಳು ತಬ್ಬಿಬ್ಬಾಗಿದ್ದಾರೆ. ಕ್ಷಣಾರ್ಧದಲ್ಲಿ ಮಕ್ಕಳ ದಸರಾ ಮುಗಿದು ಹೋಗಿದೆ. ಇತ್ತ ಏನೂ ಅರಿಯದ ಮಕ್ಕಳ ಮುಂದೆ ಸಚಿವತ್ರಯರು ಯಾವುದೇ ಮಾತುಗಳನ್ನು ಆಡದೆ ಹೋಗಿರುವುದು ಸಾರ್ವಜನಿಕರಲ್ಲಿ ಬೇಸರ ಮೂಡಿಸಿದೆ.

ಇದು ಮಕ್ಕಳನ್ನು ಕರೆಸಿ ಮಕ್ಕಳಿಗೆ ಮಾಡಿರುವ ಅವಮಾನ ಎನ್ನುತ್ತಾರೆ ಸಾರ್ವಜನಿಕರು. ಬೆಳಗ್ಗೆಯಿಂದಲೇ ನಾವು ಕಾದು ಕುಳಿತಿದ್ದೇವೆ. ಈ ಸೌಭಾಗ್ಯಕ್ಕೆ ಏಕೆ ಕಾರ್ಯಕ್ರಮಕ್ಕೇ ಕರೆದುಕೊಂಡು ಬರಬೇಕಿತ್ತು ಎಂದು ಮಕ್ಕಳ ಪೋಷಕರು ಸಹ ಆರೋಪಿಸಿದ್ದಾರೆ.












Click it and Unblock the Notifications