ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುವೆ: ಸಿದ್ದರಾಮಯ್ಯ
Recommended Video

ಮೈಸೂರು, ಮಾರ್ಚ್ 29: ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂಬ ಊಹಾಪೋಹಗಳಿಗೆ ಸಿದ್ದರಾಮಯ್ಯ ಅವರೇ ತೆರೆ ಎಳೆದಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮೈಸೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು 'ಶತ ಪ್ರತಿಶತ ನಾನು ಚಾಮುಂಡೇಶ್ವರಿ ಕ್ಷೇತ್ರದಿಂದಲೇ ಸ್ಪರ್ಧಿಸುತ್ತೇನೆ ಮತ್ತು ಗೆದ್ದು ಬರುತ್ತೇನೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಚಾಮುಂಡೇಶ್ವರಿ ಕ್ಷೇತ್ರದಿಂದ ನಾನು 7 ಬಾರಿ ಸ್ಪರ್ಧೆ ಮಾಡಿದ್ದೇನೆ, 5 ಬಾರಿ ಗೆದ್ದಿದ್ದೇನೆ, 2 ಬಾರಿ ಸೋತಿದ್ದೇನೆ, ಇಲ್ಲಿನ ಮತದಾರರ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ, ಅವರು ಈ ಬಾರಿಯೂ ನನಗೆ ಆಶೀರ್ವಾದ ಮಾಡಲಿದ್ದಾರೆ ಎಂದರು.

ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವ ಅವರಿಗೆ ನಿನ್ನೆಯಷ್ಟೆ ಕುಮಾರಸ್ವಾಮಿ ಅವರು 'ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಗೆಲ್ಲಲಿ ನೋಡೋಣ' ಎಂದು ಸವಾಲು ಹಾಕಿದ್ದರು, ಅಷ್ಟೆ ಅಲ್ಲದೆ ಸೋಲುವ ಭಯದಲ್ಲಿ ಸಿದ್ದರಾಮಯ್ಯ ಅವರು ಕ್ಷೇತ್ರ ಬಿಟ್ಟು ಹೋಗಲು ಯೋಜಿಸಿದ್ದಾರೆ ಎಂದು ವ್ಯಂಗ್ಯ ಮಾಡಿದ್ದರು.
ಕಳೆದ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಆರಿಸಿ ಬಂದಿದ್ದ ಸಿದ್ದರಾಮಯ್ಯ ಅವರು ಈ ಬಾರಿ ವರುಣಾ ಕ್ಷೇತ್ರಕ್ಕೆ ತಮ್ಮ ಪುತ್ರ ಯತೀಮದ್ರ ಅವರಿಗೆ ಟಿಕೆಟ್ ಕೊಡಿಸುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಅವರು ಚಾಮುಂಡೇಶ್ವರಿಗೆ ಮರಳುತ್ತಿದ್ದಾರೆ. ಚಾಮುಂಡೇಶ್ವರಿ ಕ್ಷೇತ್ರದಿಂದ ಜೆಡಿಎಸ್ನ ಜಿ.ಟಿ.ದೇವೇಗೌಡ ಅವರು ಎದುರಾಳಿ ಆಗಿದ್ದು, ಸಿದ್ದರಾಮಯ್ಯ ಅವರಿಗೆ ತುರುಸಿನ ಪೈಪೋಟಿ ನೀಡುವ ಸಾಧ್ಯತೆ ಇದೆ.
ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಲು ಇಚ್ಚಿಸಿರುವುದನ್ನು ಗಮನಿಸಿದರೆ ಯತೀಂದ್ರ ಅವರಿಗೆ ಟಿಕೆಟ್ ಖಾಯಂ ಆಗಿರುವ ಸಾಧ್ಯತೆ ಇದ್ದು, ಯತೀಮದ್ರ ಅವರು ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.
ಸಿಎಂ ಅವರು ವರುಣಾ ದಿಂದ ಸ್ಪರ್ಧಿಸುತ್ತಾರೊ ಅಥವಾ ಚಾಮುಂಡೇಶ್ವರಿ ಇಂದಲೊ ಅಥವಾ ಎನ್.ಆರ್.ನಗರದಿಂದ ಚುನಾವಣೆಗಿಳಿಯುತ್ತಾರೊ ಎಂಬ ಅನುಮಾನಗಳು ಹರಿದಾಡುತ್ತಿದ್ದು ಈಗ ಅದಕ್ಕೆ ಸಿದ್ದರಾಮಯ್ಯ ಅವರಿಂದಲೇ ಸ್ಪಷ್ಟ ಉತ್ತರ ದೊರೆತಿದೆ.











Click it and Unblock the Notifications