ಸತತ 50 ದಿನ 4000 ಬೀದಿ ನಾಯಿಗಳಿಗೆ ಅನ್ನವಿಟ್ಟ ಮೈಸೂರು ಉಪನ್ಯಾಸಕಿ
ಮೈಸೂರು, ಜೂನ್ 1: ವಿಶಾಲವಾದ ಹೃದಯಕ್ಕಿಂತ ಗುಡಿಯು ಎಲ್ಲಿದೆ.. ಎನ್ನುವ ಹಾಗೆ ತಮ್ಮ ವಿಶಾಲ ಹೃದಯ ಮೂಲಕ ಇಂದು ಮೈಸೂರಿನ ಉಪನ್ಯಾಸಕಿಯೊಬ್ಬರು ಕೇಂದ್ರ ಸರ್ಕಾರದಿಂದ ಮೆಚ್ಚುಗೆ ಪಡೆದಿದ್ದಾರೆ.
ನಿವೇದಿತಾ ಹರಿಣಿ ಮೈಸೂರಿನ ಶಾರದ ವಿದ್ಯಾ ಮಂದಿರದಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿ ಸುಮ್ಮನೆ ಮನೆಯಲ್ಲಿ ಕೂರದೆ ಕೊರೊನಾ ವಾರಿಯರ್ ಆಗಿ ಕೆಲಸ ಮಾಡಿದ್ದಾರೆ. ಕಳೆದ 50 ದಿನಗಳಿಂದ ಬೀದಿ ನಾಯಿಗಳ ಪೋಷಣೆ ಮಾಡಿಕೊಂಡು ಬರುತ್ತಿದ್ದಾರೆ.
ನಾಯಿಗಳು ಅಂದರೆ ಮೊದಲೇ ನಿವೇದಿತಾ ಅವರಿಗೆ ಇಷ್ಟ ಇತ್ತಂತೆ. ಹೀಗಾಗಿ ಕೊರೊನಾ ವಾರಿಯರ್ಸ್ ಟೀಮ್ ಮಾಡಿದಾಗ ತಾವು ಬೀದಿ ನಾಯಿಗಳಿಗೆ ಪೋಷಣೆ ಮಾಡುವ ವಿಭಾಗ ಆಯ್ಕೆ ಮಾಡಿಕೊಂಡು ಕೆಲಸ ಮಾಡುತ್ತಿದ್ದಾರೆ. ದಿನನಿತ್ಯವೂ ಮೈಸೂರಿನ ಹಲವು ನಗರಗಳ ನಾಯಿಗಳಿಗೆ ಅನ್ನ, ಹಾಲು, ಪೆಡಿಗ್ರಿ ನೀಡುತ್ತಿದ್ದಾರೆ. ಅಂದಹಾಗೆ, ತಮ್ಮ ಈ ಕೆಲಸದ ಬಗ್ಗೆ ನಿವೇದಿತಾ ಹರಿಣಿ ಒನ್ ಇಂಡಿಯಾ ಕನ್ನಡದ ಜೊತೆಗೆ ಮಾತನಾಡಿದ್ದಾರೆ.

ನಾಯಿಗಳು ಯಾರಿಗೆ ಕೇಳಬೇಕು?
ಲಾಕ್ಡೌನ್ ಆದ ಸಮಯದಲ್ಲಿ ಅನೇಕರಿಗೆ ಊಟಕ್ಕೂ ಸಮಸ್ಯೆಯಾಗಿತ್ತು. ಆದರೆ, ಮನುಷ್ಯರಿಗೆ ಕಷ್ಟ ಬಂದರೆ, ಬೇರೆಯವರಿಗೆ ಕೇಳಬಹುದು. ಇಂತಹ ಸಮಯದಲ್ಲಿ ಬೀದಿ ನಾಯಿಗಳು ಏನು ಮಾಡಬೇಕು..? ಎನ್ನುವ ಆಲೋಚನೆ ನಿವೇದಿತಾರಿಗೆ ಬಂದಿದೆ. ಹೋಟೆಲ್, ಬೇಕರಿಗಳನ್ನೇ ನಂಬಿಕೊಂಡಿರುವ ಬೀದಿ ನಾಯಿಗಳು ಊಟಕ್ಕೆ ಪರದಾಡುವುದನ್ನು ನೋಡಿದ್ದಾರೆ. ಹೀಗಾಗಿ, ಅವುಗಳ ಪೋಷಣೆಗೆ ಮುಂದಾಗಿದ್ದಾರೆ.

50 ದಿನ, 4297 ನಾಯಿಗಳು
ಕಳೆದ 50 ದಿನಗಳಿಂದ ನಿವೇದಿತಾ ನಾಯಿಗಳಿಗೆ ಆಹಾರ ಒದಗಿಸುತ್ತಿದ್ದಾರೆ. ಈವರೆಗೆ ಬರೋಬ್ಬರಿ 4297 ನಾಯಿಗಳಿಗೆ ಊಟ ನೀಡಿದ್ದಾರೆ. ಅನ್ನ, ಹಾಲು, ಪೆಡಿಗ್ರಿಯನ್ನು ನಾಯಿಗಳಿಗೆ ಕೊಡುತ್ತಿದ್ದಾರೆ. ಸವಿತ ಎನ್ನುವವರು ನಿವೇದಿತಾರಿಗೆ ಸಹಾಯ ಮಾಡುತ್ತಿದ್ದಾರೆ. ಮೊದಲು ತಾವೇ ಅನ್ನ, ಹಾಲಿನ ವೆಚ್ಚ ನೋಡಿಕೊಳ್ಳುತ್ತಿದ್ದು, ಈಗ ಸ್ನೇಹಿತರು ಹಾಗೂ ಸಹದ್ಯೋಗಿಗಳು ಕೈ ಜೋಡಿಸಿದ್ದಾರೆ ಎನ್ನುತ್ತಾರೆ ನಿವೇದಿತಾ.

ಮೈಸೂರಿನ ನಗರಗಳ ಬೀದಿ ನಾಯಿಗಳು
ಪ್ರತಿ ದಿನ ಬೆಳಗ್ಗೆ ಆರುವರೆಗೆ ಮನೆಯಿಂದ ಹೊರಟರೆ, ಎಂಟುವರೆ ಮತ್ತೆ ವಾಪಸ್ ಮನೆಗೆ ಬರುತ್ತಾರಂತೆ. ವಿಶ್ವೇಶ್ವರ ನಗರದಲ್ಲಿ ತಾವು ವಾಸ ಮಾಡುತ್ತಿದ್ದು, ಇಂಡಸ್ಟ್ರಿಯಲ್ ಸಬರ್ಬ್, ಚಾಮುಂಡಿ ಪುರಂ, ಇಟ್ಟಿಗೆ ಗೂಡು, ಎಕ್ಸಿ ಬಿಷನ್ ಗ್ರೌಂಡ್ಸ್, ಸರ್ಕಸ್ ಗ್ರೌಂಡ್ಸ್, ಜೂ, ದುರ್ಗಾದೇವಿ ಶ್ರೀರಾಮ್ ಪುರ ನಗರಗಳ ನಾಯಿಗಳಿಗೆ ಆಹಾರ ನೀಡಿದ್ದಾರೆ. ಎಲ್ಲಿ ನಾಯಿಗಳು ಹೆಚ್ಚಿವೆ ಎಂದು ತಿಳಿಕೊಂಡು ಆ ನಗರಗಳಿಗೆ ಹೋಗುತ್ತಿದ್ದಾರೆ.

ಕೇಂದ್ರ ಸರ್ಕಾರ ಮೆಚ್ಚುಗೆ
ನಿವೇದಿತಾ ಹರಿಣಿ ಅವರ ಈ ಕೆಲಸಕ್ಕೆ ಕೇಂದ್ರ ಸರ್ಕಾರದ ನೀತಿ ಆಯೋಗದಿಂದ ಮೆಚ್ಚುಗೆ ವ್ಯಕ್ತವಾಗಿದೆ. NITI Aayog ಟ್ವಿಟ್ಟರ್ ಖಾತೆಯಲ್ಲಿ ನಿವೇದಿತಾ ಬಗ್ಗೆ ಬರೆಯಲಾಗಿದೆ. ಈ ಕೆಲಸ ಮಾಡಲು ತಮ್ಮ ಕುಟುಂಬದ ಸಹಕಾರ ಇದ್ದು, ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಲಾಕ್ಡೌನ್ ಮಾತ್ರವಲ್ಲದೆ ಮುಂದೆಯೂ ತಮ್ಮ ಈ ಮಹಾ ಕಾರ್ಯವನ್ನು ಮುಂದುರೆಸಿಕೊಂಡು ಹೋಗುವ ಮಹದಾಸೆ ನಿವೇದಿತಾ ಅವರದ್ದಾಗಿದೆ.












Click it and Unblock the Notifications