ಹಂಪಿಯಲ್ಲಿ ಆರಂಭವಾಗಲಿದೆ ನೂತನ ಮೃಗಾಲಯ
ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐತಿಹಾಸಿಕ ಸ್ಥಳ ಹಾಗೂ ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೆಯ ಪ್ರಮುಖ ಪ್ರವಾಸಿ ಕೇಂದ್ರ ಹಂಪಿ ಬಳಿ ನೂತನ ಮೃಗಾಲಯ ತಲೆ ಎತ್ತಿದ್ದು, ನ.3ರಂದು ಲೋಕಾರ್ಪಣೆಗೊಳ್ಳಲಿದೆ.
ಮೈಸೂರು, ಅಕ್ಟೋಬರ್ 24: ವಿಶ್ವ ಪಾರಂಪರಿಕ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಐತಿಹಾಸಿಕ ಸ್ಥಳ ಹಾಗೂ ದೇಶ ವಿದೇಶಗಳ ಪ್ರವಾಸಿಗರ ಆಕರ್ಷಣೆಯ ಪ್ರಮುಖ ಪ್ರವಾಸಿ ಕೇಂದ್ರ ಹಂಪಿ ಬಳಿ ನೂತನ ಮೃಗಾಲಯ ತಲೆ ಎತ್ತಿದ್ದು, ನ.3ರಂದು ಲೋಕಾರ್ಪಣೆಗೊಳ್ಳಲಿದೆ.
ಹಂಪಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ಆಕರ್ಷಣೆಯಾಗಲಿರುವ ಈ ಮೃಗಾಲಯ ಕೇಂದ್ರ ಪರಿಸರ ಇಲಾಖೆ ಹಾಗೂ ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾಸ್ಟರ್ ಪ್ಲಾನ್ ನಿಂದ ರೂಪುಗೊಂಡಿದ್ದು, ಹಂತ ಹಂತವಾಗಿ ಇದನ್ನು ಅಭಿವೃದ್ಧಿ ಪಡಿಸಲಾಗುವುದು ಎಂದು ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ಹಂಪಿ ಸಮೀಪ ಹೊಸಪೇಟೆ ಹೊರವಲಯದಲ್ಲಿ ಮೃಗಾಲಯವನ್ನು ಅತ್ಯಂತ ಆಕರ್ಷಕವಾಗಿ ರೂಪಿಸಲಾಗಿದೆ ಎಂದರು. ಬಳ್ಳಾರಿ ಮೃಗಾಲಯದಲ್ಲಿದ್ದ ಪ್ರಾಣಿಗಳನ್ನು ಇಲ್ಲಿಗೆ ಸ್ಥಳಾಂತರಿಸಲಾಗಿದೆ ಎಂದರು. ಬಳ್ಳಾರಿ ಮೃಗಾಲಯ ಕರಡಿ ಸಫಾರಿಯಾಗಿದ್ದು, ಇಲ್ಲಿದ್ದ ಕರಡಿಗಳನ್ನೆಲ್ಲಾ ಹೊಸ ಮೃಗಾಲಯಕ್ಕೆ ರವಾನಿಸಲಾಗಿದೆ. ಜತೆಗೆ ಮೈಸೂರು ಮತ್ತಿತರ ಮೃಗಾಲಯಗಳಿಂದ ಕಾಡೆಮ್ಮೆ, ಜಿಂಕೆ, ಕಡವೆ, ಕೆಲವು ಪಕ್ಷಿಗಳನ್ನು ನೀಡಲಾಗಿದೆ. ಸದ್ಯದಲ್ಲೇ 2 ಹುಲಿಗಳು ಇಲ್ಲಿಗೆ ಸೇರ್ಪಡೆಯಾಗಲಿವೆ ಎಂದು ಹೇಳಿದರು.
ಬಳ್ಳಾರಿಯಲ್ಲಿದ್ದ ಮೃಗಾಲಯಕ್ಕೆ ಅಟಲ್ ಬಿಹಾರಿ ವಾಜಪೇಯಿ ಮೃಗಾಲಯ ಎಂದು ಹೆಸರಿಡಲಾಗಿತ್ತು. ಈಗ ಹೊಸ ಮೃಗಾಲಯಕ್ಕೆ ಇಂದಿರಾ ಪ್ರಿಯದರ್ಶಿನಿ ಮೃಗಾಲಯ ಎಂದು ಹೆಸರಿಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಹೇಳಿದ ಅವರು, ಬಳ್ಳಾರಿ ಮೃಗಾಲಯವನ್ನು ಪಕ್ಷಿಧಾಮವಾಗಿ ಉಳಿಸಿಕೊಳ್ಳುವ ಆಲೋಚನೆ ಇದೆ ಎಂದರು. ಹಂಪಿ ಉತ್ಸವ ನಡೆಯಲಿದ್ದು, ಇದಕ್ಕೆ ಮುನ್ನವೇ ಮೃಗಾಲಯವನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಇಲ್ಲಿಗೆ ಸಮೀಪದಲ್ಲೇ ಹಂಪಿ ಕನ್ನಡ ವಿಶ್ವವಿದ್ಯಾನಿಲಯ, ಆರೇಂಜ್ ಕೌಂಟಿ ರೆಸಾರ್ಟ್ ಇದ್ದು, ಮೃಗಾಲಯ ಮತ್ತೊಂದು ಆಕರ್ಷಣೆಯಾಗಲಿದೆ ಎಂದು ಮಲ್ಲಿಗೆ ವೀರೇಶ್ ಹೇಳಿದರು.
ನ.3ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೃಗಾಲಯವನ್ನು ಉದ್ಘಾಟಿಸಲಿದ್ದು, ಅರಣ್ಯ ಸಚಿವ ರಮಾನಾಥ್ ರೈ, ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಸಂಸದರು, ಶಾಸಕರು ಕಾರ್ಯಕಮದಲ್ಲಿ ಪಾಲ್ಗೊಳ್ಳುವರು ಎಂದರು.
ಮೈಸೂರು ಮೃಗಾಲಯದ ಸಮಸ್ಯೆಗಳಿಗೆ ಶೀಘ್ರ ಪರಿಹಾರ:
ಇನ್ನು ನಗರದ ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಸರ್ಕಾರಿ ಶಾಲಾ ಮಕ್ಕಳನ್ನು ಕರೆದುಕೊಂಡು ಬಂದು ಅವರಿಗೆ ಮೃಗಾಲಯ ವೀಕ್ಷಣೆ ಮಾಡಿಸಿ ಮತ್ತೆ ಅವರನ್ನು ಕಳಿಸಿಕೊಡುವ ಬಗ್ಗೆ ಚಿಂತನೆ ಇದ್ದು, ಸದ್ಯದಲ್ಲೇ ಸಂಭವಿಸಲಿರುವಿಕೆದಲ್ಲೇ ನಡೆಯಲಿರುವ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಲ್ಲಿಗೆ ವೀರೇಶ್ ಹೇಳಿದರು.
ಈಗಾಗಲೇ ಬೆಂಗಳೂರಿನ ಬನ್ನೇರುಘಟ್ಟ ಉದ್ಯಾನವನಕ್ಕೆ ಸಮೀಪದ ಸರ್ಕಾರಿ ಶಾಲಾ ಮಕ್ಕಳನ್ನು ಮೃಗಾಲಯ ಪ್ರಾಧಿಕಾರದ ಬಸ್ನಲ್ಲೇ ಕರೆತಂದು ಅವರನ್ನು ಬನ್ನೇರು ಘಟ್ಟ ಸಫಾರಿ ತೋರಿಸಿ ನಂತರ ವಾಪಸು ಕಳುಹಿಸಿಕೊಡಲಾಗುತ್ತಿದೆ. ಮೈಸೂರಿನಲ್ಲಿ ಮೃಗಾಲಯದ ವಾಹನ ಇಲ್ಲದಿರುವ ಕಾರಣ ಸಮಸ್ಯೆಯಾಗಿದೆ. ಹೀಗಾಗಿ ಮಕ್ಕಳನ್ನು ಕರೆತರುವುದಕ್ಕೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು












Click it and Unblock the Notifications