ಮೈಸೂರಿನಲ್ಲಿ ಹೊಸ ವರ್ಷಾಚರಣೆ: ಚಾಮುಂಡಿ ಬೆಟ್ಟದಲ್ಲಿ ನೆರೆದ ಭಕ್ತರ ದಂಡು, ಕಂಗೊಳಿಸಿದ ಅರಮನೆ
ಮೈಸೂರು, ಜನವರಿ, 01: ಮೈಸೂರಿಗರು 2023ರ ಹೊಸ ವರ್ಷವನ್ನು ಭಾನುವಾರ (ಜನವರಿ 01) ಸಂಭ್ರಮದಿಂದ ಸ್ವಾಗತಿಸಿದರು. ಅರಮನೆ ಆವರಣದಲ್ಲಿ ನೂತನ ವರ್ಷದ ಪ್ರಯುಕ್ತ ರಾತ್ರಿ 11 ಗಂಟೆಯಿಂದ 12 ಗಂಟೆಯವರೆಗೆ ಪೊಲೀಸ್ ಬ್ಯಾಂಡ್ ಕಾರ್ಯಕ್ರಮವನ್ನು ನಡೆಸಲಾಯಿತು. ರಾತ್ರಿ 12 ಗಂಟೆ ಕಳೆಯುತ್ತಿದ್ದಂತೆ ಸಾರ್ವಜನಿಕರು ಪಟಾಕಿಯನ್ನು ಸಿಡಿಸಿ ನೂತನ ವರ್ಷವನ್ನು ಸ್ವಾಗತಿಸಿದರು. ನಂತರ ಅರಮನೆ ಆವರಣದಲ್ಲಿ ಬಾಣ ಬಿರುಸುಗಳ ಪ್ರದರ್ಶನ ಮನಮೋಹಕವಾಗಿತ್ತು.
ನಗರದ ಚಾಮುಂಡೇಶ್ವರಿ ದೇವಾಲಯ, ನಂಜನಗೂಡಿನ ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನ ಸೇರಿದಂತೆ ಪ್ರಮುಖ ದೇವಸ್ಥಾನಗಳು ಹಾಗೂ ಬಡಾವಣೆಗಳಲ್ಲಿರುವ ದೇಗುಲಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯ ಹಿನ್ನೆಲೆಯಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ, ಪೂಜೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರದ ಬಹುತೇಕ ಪ್ರವಾಸಿ ತಾಣಗಳು ಪ್ರವಾಸಿಗರಿಂದ ತುಂಬಿ ತುಳುಕುತ್ತಿದ್ದವು. ಅಲ್ಲದೇ ಪ್ರವಾಸಿಗರು ಮೃಗಾಲಯ, ಚಾಮುಂಡಿ ಬೆಟ್ಟ, ಅರಮನೆಗೆ ತೆರಳಿ ಕಾಲ ಕಳೆಯುವ ಮೂಲಕ ಸಂಭ್ರಮಾಚರಣೆ ಮಾಡಿದರು.
ಚಾಮುಂಡಿ ಬೆಟ್ಟದಲ್ಲಿ ₹48 ಕೋಟಿ ಅಭಿವೃದ್ಧಿ ಯೋಜನೆ: ಕೇಂದ್ರ ಸರ್ಕಾರದ ಪ್ರಸ್ತಾವಕ್ಕೆ ವಿರೋಧವೇಕೆ?
ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿದ ಜನ
ಹಾಗೆಯೇ ಜನರು ಹೋಟೆಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್ಗಳಲ್ಲಿ ನೆಚ್ಚಿನ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಶಿಳ್ಳೆ, ಚಪ್ಪಾಳೆ ತಟ್ಟಿ ನಲಿದರು. ಕೆಲವೆಡೆ ಸಂಗೀತ ಬ್ಯಾಂಡ್ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಗೊಂಡಿದ್ದವು. ಎಲ್ಲಾ ರಸ್ತೆಗಳಲ್ಲಿ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಂಚರಿಸುತ್ತಾ, ಹೊಸ ವರ್ಷದ ಶುಭಾಶಯ ಕೋರುತ್ತಾ ಸಂಭ್ರಮಿಸಿದರು. ಹೊಸ ವರ್ಷ ಆಚರಣೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ನೇತೃತ್ವದಲ್ಲಿ ಪೊಲೀಸರು ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ತಿರುಪತಿ ಮಾದರಿಯ ಲಡ್ಡು ವಿತರಣೆ
ಹೊಸ ವರ್ಷಾಚರಣೆ ಹಿನ್ನೆಲೆ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಭಕ್ತಾಧಿಗಳಿಗೆ 2 ಲಕ್ಷ ಲಡ್ಡು ವಿತರಿಸಲಾಯಿತು. ಭಕ್ತಾಧಿಗಳಿಗೆ ವಿತರಣೆ ಮಾಡಲೆಂದೇ ತಿರುಪತಿ ಮಾದರಿಯ 2 ಲಕ್ಷ ಲಡ್ಡುಗಳನ್ನು ತಯಾರಿಸಲಾಗಿತ್ತು. ಮುಂಜಾನೆ 4ರಿಂದ ರಾತ್ರಿ 12ರವರೆಗೆ ಭಕ್ತರು ಲಡ್ಡು ಸ್ವೀಕರಿಸಿದರು. ಹೊಸ ವರ್ಷದ ಸಂಭ್ರಮಾಚರಣೆ ಮಾಡಲು ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಿಂದ ಪ್ರವಾಸಿಗರು ಆಗಮಿಸಿದ್ದರು. ಪ್ರವಾಸಿಗರು ಬಸ್, ಕಾರು, ಟಿಟಿ ವಾಹನಗಳ ಮೂಲಕ ಆಗಮಿಸಿದ್ದರಿಂದ ಅರಮನೆ ಸುತ್ತಮುತ್ತ, ಮೃಗಾಲಯ ರಸ್ತೆ, ಚಾಮುಂಡಿ ಬೆಟ್ಟ, ಸಂತ ಫಿಲೋಮಿನಾ ಚರ್ಚ್ ಸೇರಿದಂತೆ ಹಲವು ಪ್ರವಾಸಿ ತಾಣಗಳಲ್ಲಿ ಸಂಚಾರವನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.