ಸಂಚಾರ ನಿಯಮ ಉಲ್ಲಂಘನೆಗೆ 10 ಪಟ್ಟು ಹೆಚ್ಚು ದಂಡ; ಮೈಸೂರಿನಲ್ಲಿ ಜಾರಿ
ಮೈಸೂರು, ಜುಲೈ 16: ಸಂಚಾರ ನಿಯಮ ಪಾಲಿಸದೆ ಉಡಾಫೆ ಮಾಡುವ ವಾಹನ ಸವಾರರ ಜೇಬಿಗೆ ಇನ್ನು ಮುಂದೆ ಸರಿಯಾಗಿಯೇ ಕತ್ತರಿ ಬೀಳಲಿದೆ. ಕಾರಣ ಇಷ್ಟೆ: ಸಂಚಾರ ನಿಯಮ ಉಲ್ಲಂಘಿಸಿದರೆ ಈ ಹಿಂದೆ ಕಟ್ಟುತ್ತಿದ್ದ ದಂಡಕ್ಕಿಂತ ಹತ್ತು ಪಟ್ಟು ಹೆಚ್ಚು ಮೊತ್ತ ದಂಡವಾಗಿ ತೆರಬೇಕಾಗುತ್ತದೆ.
ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿರುವ ಪೊಲೀಸ್ ಇಲಾಖೆ, ಮೈಸೂರಿನಲ್ಲಿ ಪರಿಷ್ಕೃತ ದರವನ್ನು ಇಂದಿನಿಂದಲೇ (ಜುಲೈ 16, ಮಂಗಳವಾರ) ಜಾರಿಗೊಳಿಸಿದೆ. ಈ ನಿಯಮದಿಂದ ಹಳೆಯ ದಂಡದ ದರಕ್ಕಿಂತ ಹತ್ತು ಪಟ್ಟು ಹೆಚ್ಚಿನ ಹಣವನ್ನು ಕಟ್ಟಬೇಕಾಗುತ್ತದೆ.
ವಾಹನ ಚಾಲನೆ ವೇಳೆ ಮೊಬೈಲ್ ನಲ್ಲಿ ಮಾತನಾಡಿದರೆ, ನೋ ಪಾರ್ಕಿಂಗ್ ನಲ್ಲಿ ವಾಹನ ನಿಲುಗಡೆ ಮಾಡಿದರೆ ಹೀಗೆ ಇನ್ನಿತರ ಸಂಚಾರ ನಿಯಮಗಳ ಉಲ್ಲಂಘನೆ ಪ್ರಕರಣಗಳಿಗೆ ಭಾರೀ ದಂಡವನ್ನು ಕಟ್ಟುನಿಟ್ಟಾಗಿ ತೆರಬೇಕಾಗುತ್ತದೆ.

ಪರಿಷ್ಕೃತ ದರದಲ್ಲೇ ಮಂಗಳೂರಿನಲ್ಲಿ ಈಗಾಗಲೇ ದಂಡ ವಸೂಲು ಮಾಡಲಾಗುತ್ತಿದೆ. ಬೆಂಗಳೂರು ಮತ್ತು ರಾಜ್ಯದ ಉಳಿದ ನಗರಗಳಲ್ಲಿ ಕೂಡ ಈ ನಿಯಮವನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಅದರಂತೆ ಇಂದಿನಿಂದ ಮೈಸೂರಿನಲ್ಲಿಯೂ ಕೆಲ ಪ್ರಕರಣಗಳಿಗೆ ಸಂಬಂಧಿಸಿದಂತೆ ಪರಿಷ್ಕೃತ ದಂಡವನ್ನು ವಸೂಲು ಮಾಡಲು ಪೊಲೀಸ್ ಇಲಾಖೆ ಮುಂದಾಗಿದೆ.
ಮುಂದಿನ ದಿನದಲ್ಲಿ ಸಂಚಾರ ನಿಯಮಕ್ಕೆ ಸಂಬಂಧಿಸಿದಂತೆ ಎಲ್ಲಾ ಪ್ರಕರಣಗಳಲ್ಲೂ ಪರಿಷ್ಕೃತ ದರದಲ್ಲೇ ದಂಡ ವಿಧಿಸಲಾಗುತ್ತದೆ ಎಂದು ಇಲಾಖೆಯಿಂದ ತಿಳಿಸಲಾಗಿದೆ.
ವೇಗ ಮಿತಿ ಉಲ್ಲಂಘನೆ ಮಾಡಿದಲ್ಲಿ ಇದುವರೆಗೂ 300 ರುಪಾಯಿ ದಂಡ ತೆರಬೇಕಿತ್ತು. ಆದರೆ ಈಗ 500 ರಿಂದ 1 ಸಾವಿರ ರುಪಾಯಿ ದಂಡ ಪಾವತಿಸಬೇಕಿದೆ. ವಾಹನವನ್ನು ಅಪಾಯಕಾರಿ ರೀತಿ ಚಾಲನೆ ಮಾಡಿದರೆ, ಚಾಲನೆ ವೇಳೆ ಮೊಬೈಲ್ ಬಳಸಿದರೆ, ವಾಹನದ ಎರಡೂ ಪಾರ್ಶ್ವಗಳಲ್ಲಿ ಸರಕುಗಳನ್ನು ಹೊರಚಾಚಿಕೊಂಡು ಸಾಗಣೆ ಮಾಡಿದರೆ 100 ರುಪಾಯಿ, ಎರಡನೇ ಬಾರಿಯೂ ಇದೇ ತಪ್ಪು ಮಾಡಿದರೆ 300 ರುಪಾಯಿ ದಂಡ ವಿಧಿಸಲಾಗುತ್ತಿತ್ತು.
ಕ್ರಮವಾಗಿ ಇದನ್ನು 1 ಸಾವಿರ ಹಾಗೂ 2 ಸಾವಿರಕ್ಕೆ ಹೆಚ್ಚಿಸಲಾಗಿದೆ. ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದರೆ 500 ರುಪಾಯಿ ಇದ್ದ ದಂಡವು 1 ಸಾವಿರಕ್ಕೆ ಹೆಚ್ಚಳಗೊಂಡಿದೆ.
"ಸರ್ಕಾರದ ಆದೇಶವನ್ನು ಪಾಲನೆ ಮಾಡಲೇಬೇಕಿರುವುದರಿಂದ ದುಬಾರಿ ದಂಡ ವಿಧಿಸುವುದು ಅನಿವಾರ್ಯವಾಗಿದೆ. ಹೀಗಾಗಿ, ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲನೆ ಮಾಡುವುದರ ಮೂಲಕ ದುಬಾರಿ ದಂಡದಿಂದ ಪಾರಾಗಬಹುದು" ಎಂದು ನಗರ ಪೊಲೀಸ್ ಕಮಿಷನರ್ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.












Click it and Unblock the Notifications