ನಿಷ್ಠೆಯಿಂದ ಕೆಲಸ ಮಾಡುವಂತೆ ಮಹಿಳಾ ಕಾರಾಗೃಹ ವೀಕ್ಷರಿಗೆ ಎಡಿಜಿಪಿ ಸಲಹೆ
ಮೈಸೂರು, ಜೂನ್ 2 : ಯಾವುದೇ ಒತ್ತಡಕ್ಕೂ ಮಣಿಯದೆ ನಿಮ್ಮ ಕೆಲಸವನ್ನು ನಿಷ್ಠೆಯಿಂದ ನಿರ್ವಹಿಸಿ ಎಂದು ಕಾರಾಗೃಹ ಮಹಿಳಾ ವೀಕ್ಷಕಿಯರಿಗೆ ಕರಾಗೃಹ ಇಲಾಖೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಎನ್.ಎಸ್. ಮೇಘರಿಕ್ ಸಲಹೆ ನೀಡಿದರು.
ಕಾರಾಗೃಹಗಳ ಇಲಾಖೆಯು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಕವಾಯತು ಮೈದಾನದಲ್ಲಿ ಆಯೋಜಿಸಿದ್ದ 45ನೇ ತಂಡದ ಮಹಿಳಾ ವೀಕ್ಷಕಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನವನ್ನು ಪರಿವೀಕ್ಷಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಪ್ರಶಿಕ್ಷಣಾರ್ಥಿ ಗಳಿಗೆ ತರಬೇತಿ ನೀಡಿದ ಪೊಲೀಸ್ ಅಧಿಕಾರಿಗಳಿಗೆ 50 ಸಾವಿರ ಬಹುಮಾನ ಘೋಷಿಸಿದರು.

ಕಾರಾಗೃಹದಲ್ಲಿ ಶಿಕ್ಷೆಗೆ ಗುರಿಯಾದ, ವಿಚಾರಣಾಧೀನ ಕೈದಿಗಳು ಸೇರಿದಂತೆ ಯಾರಿಗೂ ಐಷಾರಾಮಿ ಸೌಲಭ್ಯ ನೀಡುತ್ತಿಲ್ಲ. ಈ ಹಿಂದೆ ನಡೆದಿರುವ ವಿಚಾರಗಳ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ, ಜೈಲಿನಲ್ಲಿ ಎಲ್ಲರನ್ನೂ ಒಂದೇ ರೀತಿ ನೋಡಲಾಗುತ್ತಿದೆ ಎಂದರು.
ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಪೈಕಿ ಈಗಾಗಲೇ 1,070 ವಾರ್ಡರ್, 32 ಜೈಲರ್ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೆ ಆದೇಶ ಪತ್ರ ನೀಡಲಾಗುವುದು ಎಂದರು.

ಕಾರಾಗೃಹ ಇಲಾಖೆಯ 330 ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸರ್ಕಾರದಿಂದ ಮೊಬೈಲ್ ಕೊಡಿಸಲಾಗಿದೆ. ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟರೆ ಅಂತಹವರ ಕುಟುಂಬಕ್ಕೆ 30 ಲಕ್ಷ ರೂ. ಪರಿಹಾರ, ಪ್ರತಿ ವರ್ಷ ಆರೋಗ್ಯ ತಪಾಸಣೆ, ಪಡಿತರ ಸೌಲಭ್ಯ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಅವರು ಹೇಳಿದರು.












Click it and Unblock the Notifications