ಮೋದಿ ರಾಬಿನ್ ಹುಡ್ನಂತೆ ಆಡುತ್ತಿದ್ದಾರೆ : ವಿಶ್ವನಾಥ್ ಟೀಕೆ
"ರಾಜ್ಯ ಕಾಂಗ್ರೆಸ್ನಲ್ಲಿ ನಾನು (ಎಚ್ ವಿಶ್ವನಾಥ್) ಮತ್ತು ಪೂಜಾರಿ ಅಶೋಕವನದ ಸೀತೆ ಇದ್ದಹಾಗೆ. ಸೀತೆ ರಾಮನನ್ನು ಬಿಟ್ಟು ಇನ್ಯಾರನ್ನೂ ನೆನೆಯಲಿಲ್ಲ. ಹಾಗೇ ನಾವು ಕೂಡ ಕಾಂಗ್ರೆಸ್ ಬಿಟ್ಟು ಬೇರೆ ನೆನೆಯುವುದಿಲ್ಲ."
ಮೈಸೂರು, ಡಿಸೆಂಬರ್ 30 : "ಪ್ರಧಾನಿ ನರೇಂದ್ರ ಮೋದಿ ಸ್ವಿಸ್ ಬ್ಯಾಂಕ್ ಜೊತೆ ಏನೋ ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಅದೇನು ಎನ್ನುವುದನ್ನು ಬಹಿರಂಗಪಡಿಸಬೇಕು" ಎಂದು ಮಾಜಿ ಸಂಸದ ಎಚ್. ವಿಶ್ವನಾಥ್ ಆಗ್ರಹಿಸಿದ್ದಾರೆ.
ಮೈಸೂರಿನ ಜಲದರ್ಶಿನಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ವಿಶ್ವನಾಥ್, ಮೊದಲು ನೋಟ್ ನಿಷೇಧವನ್ನು ನಾವೂ ಬೆಂಬಲಿದ್ದೆವು. ಆದರೆ, ಮುಂದಿನ ದಿನಗಳಲ್ಲಿ ಅದನ್ನೇ ಒಂದು ಕ್ರಾಂತಿ ಅನ್ನೋ ರೀತಿಯಲ್ಲಿ ಬಿಂಬಿಸಲಾಯಿತು. ಇದನ್ನು ವಿರೋಧಿಸಿ ಜನವರಿ 6ರಂದು ಕಾಂಗ್ರೆಸ್ ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದೆ ಎಂದು ತಿಳಿಸಿದರು.
ಮೋದಿ ನೋಟ್ ಬ್ಯಾನ್ ಮಾಡುವ ಮೂಲಕ ದೊಡ್ಡ ಅಪಚಾರವೆಸಗಿದ್ದಾರೆ. ಸ್ವಿಸ್ ಬ್ಯಾಂಕಿನಿಂದ ಹಣ ತಂದು ಎಲ್ಲರ ಅಕೌಂಟ್ ಗೆ 15 ಲಕ್ಷ ಹಾಕುವುದಾಗಿ ತಿಳಿಸಿದ್ದರು. 60 ಲಕ್ಷ ಅಕೌಂಟ್ ಚೆಕ್ ಮಾಡೋದಕ್ಕೇ ಸುಮಾರು 2 ವರ್ಷ ಬೇಕಾಗಬಹುದು ಎಂದು ಅವರು ಟೀಕಿಸಿದರು. [ರಾಹುಲ್ ಕೇಳಿದ 5 ಪ್ರಶ್ನೆಗಳಿಗೆ ಮೋದಿ ಉತ್ತರಿಸುವರೆ?]

ಕಾರ್ಡ್ ಸ್ವೈಪ್ ಮಾಡಿದರೆ 2 ಪರ್ಸೆಂಟ್ ಹಣ ಕಟ್ ಆಗಲಿದೆ. ಇದು 2018ರ ಚುನಾವಣೆಗೆ ಹಣ ಸಂಗ್ರಹಕ್ಕಾಗಿ ಮಾಡಿಕೊಂಡಿರೋ ದಾರಿಯಾಗಿದೆ. ಪೇಟಿಎಂ ಮಾಡಿರೋ ವ್ಯಕ್ತಿ ಮೋದಿಯವರಿಗೆ ಆಪ್ತ. ಚುನಾವಣಾ ಸಮಯದಲ್ಲಿ ಅವರಿಗೆ ಸಹಾಯ ಮಾಡಿದ್ದಾನೆ. ಅದಕ್ಕಾಗಿ ಈಗ ಮೋದಿ ಅವನಿಗೆ ಸಹಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಬಫೂನ್ ಮಾಡಲು ಮುಂದಾದ ನರೇಂದ್ರ ಮೋದಿ ತಾವೇ ಸ್ವತಃ ರಾಬಿನ್ ಹುಡ್ ತರ ಆಡುತ್ತಿದ್ದಾರೆ ಎಂದು 2014ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಪ್ರತಾಪ್ ಸಿಂಹ ವಿರುದ್ಧ ಸೋತ ವಿಶ್ವನಾಥ್ ವ್ಯಂಗ್ಯವಾಡಿದರು.
ಡಿಸೆಂಬರ್ 31ರಂದು ಮತ್ತೇನೋ ಘೋಷಣೆ ಮಾಡುತ್ತಾರಂತೆ, ಅದೇನು ಅಂತ ಕೇಳೋದಿಕ್ಕೆ ನಾನೂ ಕುತೂಹಲನಾಗಿದ್ದೇನೆ. ಮೋದಿ ತನ್ನ ಮಾತಿನ ಮೂಲಕವೇ ಜನರನ್ನು ಗೊಂಬೆ ತರಹ ಕುಣಿಸುತ್ತಿದ್ದಾರೆ. ನೋಟ್ ಬ್ಯಾನ್ ಮಾನವ ಹಕ್ಕುಗಳ ಮೇಲಾದ ದಮನ ನೀತಿ. ಇದನ್ನು ದೇಶ-ವಿದೇಶಗಳ ತಂತ್ರಜ್ಞರೇ ಒಪ್ಪಿಕೊಂಡಿಲ್ಲ ಎಂದರು. [ಡಿ.31ರ ರಾತ್ರಿ ದೇಶ ಉದ್ದೇಶಿಸಿ ಮೋದಿ ಏನು ಮಾತಾಡ್ತಾರೆ?]
ಕಾಂಗ್ರೆಸ್ ಸಹ ನೋಟು ಬ್ಯಾನ್ ವಿರುದ್ದ ಹೋರಾಟ ಮಾಡುವುದರಲ್ಲಿ ವಿಫಲವಾಗಿದೆ ಎಂದ ಅವರು ಸ್ವವಿಮರ್ಶೆ ಮಾಡಿಕೊಂಡರು.
ಮಂಗಳೂರಿನಲ್ಲಿ ಪೂಜಾರಿ ಹೇಳಿಕೆ ಕುರಿತಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ವಿಶ್ವನಾಥ್, ರಾಜ್ಯ ಕಾಂಗ್ರೆಸ್ನಲ್ಲಿ ನಾನು ಮತ್ತು ಪೂಜಾರಿ ಅಶೋಕವನದ ಸೀತೆ ಇದ್ದಹಾಗೆ. ಸೀತೆ ರಾಮನನ್ನು ಬಿಟ್ಟು ಇನ್ಯಾರನ್ನೂ ನೆನೆಯಲಿಲ್ಲ. ಹಾಗೇ ನಾವು ಕೂಡ ಕಾಂಗ್ರೆಸ್ ಬಿಟ್ಟು ಬೇರೆ ನೆನೆಯುವುದಿಲ್ಲ. ಇದನ್ನು ಮುಖ್ಯಮಂತ್ರಿಗಳಾದಿಯಾಗಿ ಎಲ್ಲರು ಅರ್ಥ ಮಾಡಿಕೊಳ್ಳಬೇಕು. ಹಿರಿಯರ ಮಾತಿಗೆ ಪಕ್ಷದಲ್ಲಿ ಮನ್ನಣೆ ಸಿಗಬೇಕು ಎಂದು ಹಾಸ್ಯಪ್ರಜ್ಞೆ ಮೆರೆದರು. [ಮೋದಿಯನ್ನು ನಾಯಿಗೆ ಹೋಲಿಸಿದ ರಾಜ್ಯದ ಮಾಜಿ ಕಾಂಗ್ರೆಸ್ ಸಂಸದ]












Click it and Unblock the Notifications