ತಗ್ಗಿದ ಕಪಿಲೆಯ ಅಬ್ಬರ: ಸಹಜ ಸ್ಥಿತಿಯತ್ತ ಹಳೆ ಮೈಸೂರು ಭಾಗ
ಮೈಸೂರು, ಆಗಸ್ಟ್ 13: ಈ ಹಿಂದೆಂದೂ ಕಂಡಿರದ ಭೀಕರ ಪ್ರವಾಹಕ್ಕೆ ರಾಜ್ಯ ತುತ್ತಾಗಿದೆ. ಇದೀಗ ಪ್ರವಾಹ ಪರಿಸ್ಥಿತಿ ಸ್ವಲ್ಪ ಮಟ್ಟಿಗೆ ಕ್ಷೀಣವಾಗಿದೆ. ಕಾವೇರಿ, ಕಪಿಲ ಪ್ರವಾಹ ಕಡಿಮೆಯಾದರೂ ಕಾವೇರಿಯಲ್ಲಿ ಅಬ್ಬರ ತಕ್ಕಮಟ್ಟಿಗಿದೆ.
ವೈನಾಡು ಹಾಗೂ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆಯಾಗಿದ್ದು ಕಬಿನಿಗೆ ಒಳಹರಿವಿನಲ್ಲಿ ಇಳಿಮುಖವಾಗಿದೆ. ನಂಜನಗೂಡು ಪ್ರವಾಹ ಪರಿಸ್ಥಿತಿಯಿಂದ ಯಥಾಸ್ಥಿತಿಗೆ ಮರಳಿದ್ದು ಜನರು ನಿಟ್ಟುಸಿರುಬಿಟ್ಟಿದ್ದಾರೆ. ಕೆರಗೋಡು ಭಾಗದಲ್ಲಿ ಬಂದಾಗಿದ್ದ ಎಲ್ಲ ರಸ್ತೆಗಳಲ್ಲು ಸಂಚಾರ ಪುನರಾರಂಭಗೊಂಡಿದೆ.

ನಂಜನಗೂಡು - ಚಾಮರಾಜ ರಸ್ತೆಯಲ್ಲೂ ಸಂಚಾರ ಆರಂಭವಾಗಿದ್ದು ಚಾಮರಾಜನಗರದ ಪ್ರವಾಸಿ ಸ್ಥಳವಾದ ಗೋಪಿನಾಥಂ - ಹೊಗೆನಕಲ್ ರಸ್ತೆ ಜಲಾವೃತವಾಗಿದ್ದು ಸಂಚಾರ ಬಂದಾಗಿದೆ. ಇಲ್ಲಿನ ವೀಕ್ಷಣಾ ಗೋಪುರ ಕೂಡ ಹಾನಿಯಾಗಿದೆ. ಪಾಲೆಮಾಡು ಸೇತುವೆ ಜಖಂ ಆಗಿದೆ.
ಮೈಸೂರು ಜಿಲ್ಲೆಯಲ್ಲಿ ಕಬಿನಿ ನದಿ ಪ್ರವಾಹ ನಿಯಂತ್ರಣಕ್ಕೆ ಬಂದಿದ್ದರೂ ಕಾವೇರಿ ನದಿ ಮಟ್ಟ ಅಪಾಯದ ಅಂಚು ತಲುಪಿದೆ. ನಿಸರ್ಗಧಾಮ ಜಲಾವೃತಗೊಂಡಿದೆ. ರಂಗನತಿಟ್ಟು ನಡುಗಡ್ಡೆಗಳು ನೀರಿನಿಂದ ಆವೃತವಾಗಿದ್ದ ಪಕ್ಷಿಗಳು ಮರವೇರಿ ಕುಳಿತಿದೆ. ತಿ.ನರಸೀಪುರ ಅರ್ಧ ಭಾಗ ಜಲಾವೃತವಾಗಿದ್ದು ಈಗ ಸ್ವಲ್ಪ ಇಳಿಮುಖವಾಗಿದೆ.
ನಂಜನಗೂಡಿನಲ್ಲಿ ಪ್ರವಾಹ ತಗ್ಗಿದ್ದು ಪರಿಹಾರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಸಾವಿರಾರು ಸಂತ್ರಸ್ತರು ಈಗ ಮರಳಿ ಮನೆಗಳತ್ತ ತೆರಳುತ್ತಿದ್ದಾರೆ. ಇನ್ನು ಮನೆಗಳು ಸಂಪೂರ್ಣ ಮುಳುಗಡೆಯಾಗಿರುವ ಕುಟುಂಬಗಳು ಮಾತ್ರ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿವೆ. ಹತ್ತು ಪರಿಹಾರ ಕೇಂದ್ರಗಳಲ್ಲಿ 2 ಸಾವಿರ ಮಂದಿ ಸಂತ್ರಸ್ತರು ಆಶ್ರಯ ಪಡೆದಿದ್ದರು.

ನಂಜನಗೂಡು ಪ್ರವಾಹಕ್ಕೂ ಸರಿಸುಮಾರು ಐನೂರಕ್ಕೂ ಮನೆಗಳು ಮುಳುಗಡೆಯಾಗಿದ್ದವು. ಐವತ್ತಕ್ಕೂ ಹೆಚ್ಚು ಮನೆಗಳು ಕುಸಿದಿದ್ದವು. ಈಗ ಪ್ರವಾಹದಲ್ಲಿ ಸಿಲುಕಿರುವ ಮನೆಗಳ ಸ್ಥಿತಿ ನೋಡಲು ಸಂತ್ರಸ್ತರು ಮರಳಿ ಮನೆಗಳತ್ತ ಧಾವಿಸುತ್ತಿದ್ದಾರೆ.












Click it and Unblock the Notifications