ನಂಜನಗೂಡು ಟಿಎಚ್ ಒ ಆತ್ಮಹತ್ಯೆ ಪ್ರಕರಣ; 3 ದಿನದಲ್ಲಿ ವರದಿ ಸಲ್ಲಿಕೆ
ಮೈಸೂರು, ಸೆಪ್ಟೆಂಬರ್ 5: ನಂಜನಗೂಡು ತಾಲ್ಲೂಕು ವೈದ್ಯಾಧಿಕಾರಿ ಡಾ.ಎಸ್.ಆರ್.ನಾಗೇಂದ್ರ ಅವರ ಸಾವಿನ ತನಿಖಾ ವರದಿ ಇನ್ನು ಮೂರು ದಿನಗಳಲ್ಲಿ ರಾಜ್ಯ ಸರ್ಕಾರದ ಕೈಸೇರಲಿದೆ ಎಂದು ಪ್ರಾದೇಶಿಕ ಆಯುಕ್ತ ಡಾ. ಜಿ.ಸಿ. ಪ್ರಕಾಶ್ ತಿಳಿಸಿದ್ದಾರೆ.
ಡಾ.ಎಸ್.ಆರ್.ನಾಗೇಂದ್ರ ಅವರು ಆ.20ರಂದು ಮೈಸೂರಿನ ಆಲನಹಳ್ಳಿ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಮೇಲೆ ಕೆಲಸದ ಒತ್ತಡ ಹೇರಿ ಕಿರುಕುಳ ನೀಡಿದ್ದರಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಗ್ಯ ಕಾರ್ಯಕರ್ತರು ಮತ್ತು ರಾಜ್ಯ ವೈದ್ಯಾಧಿಕಾರಿಗಳ ಸಂಘದವರು ತೀವ್ರ ಪ್ರತಿಭಟನೆ ನಡೆಸಿದ್ದರು.
ಡಾ. ನಾಗೇಂದ್ರ ಆತ್ಮಹತ್ಯೆಗೆ ಕಾರಣವೇನು? ಇಲ್ಲಿದೆ ಸಂಪೂರ್ಣ ವಿವರ!
ನಂತರ ಸರ್ಕಾರ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಶಾಂತ್ ಕುಮಾರ್ ಅವರನ್ನು ವರ್ಗಾವಣೆ ಮಾಡಿ ಆದೇಶ ನೀಡಿತ್ತು. ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿರುವ ಆಯುಕ್ತರು ಡಾ.ಎಸ್.ಆರ್.ನಾಗೇಂದ್ರ ಅವರು ಕೆಲಸ ಮಾಡಿದ ನಂಜನಗೂಡು ತಾಲ್ಲೂಕು ಆರೋಗ್ಯ ಕೇಂದ್ರ, ಕೂಡ್ಲಪುರ ಪ್ರಾಥಮಿಕ ಆರೋಗ್ಯದ ಸಿಬ್ಬಂದಿ, ಕುಟುಂಬಸ್ಥರು ಹಾಗೂ ವೈದ್ಯರನ್ನು ಸಂಪರ್ಕಿಸಿ ಮಾಹಿತಿ ಕಲೆ ಹಾಕಿದ್ದು, ವರದಿ ಸಿದ್ಧಪಡಿಸಿ ಮೂರು ದಿನದಲ್ಲಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಲಿದ್ದಾರೆ. ನಂತರ ಆತ್ಮಹತ್ಯೆ ಪ್ರಕರಣದ ನಿಖರ ಮಾಹಿತಿ ಜನರಿಗೆ ತಿಳಿಯಲಿದೆ.