ಮುಂದಿನ 3 ವರ್ಷಗಳಲ್ಲಿ ನಾಗನಹಳ್ಳಿ ಟರ್ಮಿನಲ್ ಪೂರ್ಣ: ಪ್ರತಾಪ್ ಸಿಂಹ
ಮೈಸೂರು, ನವೆಂಬರ್ 11: ಮುಂದಿನ ಮೂರು ವರ್ಷಗಳಲ್ಲಿ 493 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೈಸೂರು ನಿಲ್ದಾಣ ಹಾಗೂ ನಾಗನಹಳ್ಳಿ ಟರ್ಮಿನಲ್ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.
ಮೈಸೂರು ರೈಲು ನಿಲ್ದಾಣ ಸೇರಿದಂತೆ ಅಶೋಕಪುರಂ, ನಾಗನಹಳ್ಳಿ, ಬೆಳಗೊಳ, ಕಡಕೊಳ ನಿಲ್ದಾಣಗಳನ್ನು ಅಭಿವೃದ್ಧಿಗೊಳಿಸಲಾಗುವುದು. ಚಾಮರಾಜನಗರಕ್ಕೆ ರೈಲುಗಳನ್ನು ವಿಸ್ತರಿಸುವ ದೂರದೃಷ್ಟಿಯಲ್ಲಿ ಕಾಮಗಾರಿಗಳು ನಡೆಯುತ್ತಿವೆ ಎಂದು ಅವರು ತಿಳಿಸಿದ್ದಾರೆ.
2018ರಲ್ಲಿ ಮೈಸೂರು-ಬೆಂಗಳೂರು ದಶಪಥ ಹಾಗೂ ನಾಗನಹಳ್ಳಿ ರೈಲ್ವೆ ಸ್ಯಾಟಲೈಟ್ ಟರ್ಮಿನಲ್ ನಿರ್ಮಾಣದ ಭರವಸೆ ನೀಡಿದ್ದರು. ಆದರೆ ಕೋವಿಡ್ 19 ಕಾರಣದಿಂದ ಎಲ್ಲಾ ಕೆಲಸಗಳ ನನೆಗುದಿಗೆ ಬಿದ್ದಿದ್ದವು. ರೈಲು ಹಾಗೂ ವಿಮಾನ ನಿಲ್ದಾಣ ವಿಸ್ತರಣೆಗೆ ರಾಜ್ಯ ಸರಕಾರಕ್ಕೆ ಅನುಧಾನ ಕೋರಲಾಗಿದೆ. ಆದರೆ ಹಣಕಾಸಿನ ತೊಂದರೆಯಿಂದ ವಿಮಾನ ನಿಲ್ದಾಣಕ್ಕೆ 319 ಕೋಟಿ ರೂ ನೀಡಿದೆ ಎಂದು ಮಾಹಿತಿ ನೀಡಿದರು.

ನಗರದಲ್ಲಿ ಗತಿಶಕ್ತಿ ಕಚೇರಿ ಸ್ಥಾಪನೆಯಾಗಿದ್ದು, 17 ರೈಲ್ವೆ ಕಾಮಗಾರಿ ನಡೆಯುತ್ತಿವೆ. ಬೆಂಗಳೂರಿನ ಯಶವಂತಪುರ, ಬೈಯಪ್ಪನಹಳ್ಳಿ ಟರ್ಮಿನಲ್ ಮಾದರಿಯಲ್ಲಿ ಮೈಸೂರಿನ ಯಾದವಗಿರಿಯಲ್ಲೂ ಟರ್ಮಿನಲ್ ನಿರ್ಮಾಣ ಮಾಡಲಾಗುವುದು. ಬೆಳಗೊಳದಲ್ಲಿ 4 ಸ್ಟಾಬಲ್ ಲೇನ್ , 4 ಪಿಟ್ ಲೇನ್, ಅಶೋಕಪುರಂನಲ್ಲಿ ಮೂರು ಹೊಸ ಪ್ಲಾಟ್ಫಾರ್ಮ್, 2 ಸ್ಟೆಬ್ಲಿಂಗ್ ಲೇನ್ ಮಾಡಲಾಗುತ್ತಿದೆ. ಪಾದಚಾರಿ ಸೇತುವೆಯನ್ನು ನಿರ್ಮಿಸಲಾಗುವುದು ಎಂದು ಸಂಸದ ಪ್ರತಾಪ್ ಸಿಂಹ ಮಾಡಿದರು.
ಅಶೋಕಪುರಂ ರೈಲ್ವೇ ನಿಲ್ದಾಣಕ್ಕೆ 15.17 ಕೋಟಿ ರೂ ಅನುದಾನ
ಮೈಸೂರಿನ ಅಶೋಕಪುರಂ ರೈಲು ನಿಲ್ದಾಣದ ನವೀಕರಣಕ್ಕೆ ಎರಡು ಹಂತದಲ್ಲಿ ಅನುಧಾನ ಬಿಡುಗಡೆಯಾಗಲಿದೆ. ಮೊದಲ ಹಂತದಲ್ಲಿ 15.17 ಕೋಟಿ ರೂ., 2ನೇ ಹಂತದಲ್ಲಿ 13.39 ಕೋಟಿ ರೂ. ಬಿಡುಗಡೆಯಾಗಲಿದೆ. 2023ರ ಜೂನ್ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ. ಇಲ್ಲಿ 3 ಪ್ಲಾಟ್ಫಾರ್ಮ್ ನಿರ್ಮಾಣಗೊಳ್ಳಲಿದೆ. ಅದಕ್ಕಾಗಿ 5,310 ಚ.ಮೀ. ಸರ್ಕಾರಿ ಭೂಮಿ ಹಾಗೂ 344 ಚ.ಮೀ. ಖಾಸಗಿ ಭೂಮಿ ಅಗತ್ಯವಿದ್ದು, ಜಿಲ್ಲಾಧಿಕಾರಿಯೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿನೆ ನಡೆಸುವುದಾಗಿ ತಿಳಿಸಿದ್ದಾರೆ.












Click it and Unblock the Notifications