ಶಬರಿಮಲೆಗೆ ಮಹಿಳೆಯರ ಪ್ರವೇಶ: ಏನಂದ್ರು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ?
ಮೈಸೂರು, ಜನವರಿ 03: ಕೇರಳದ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರು ಪ್ರವೇಶಿಸಿದ ವಿಚಾರದಲ್ಲಿ ನಡೆಯುತ್ತಿರುವ ಪರ-ವಿರೋಧ ಚರ್ಚೆಗಳು ಒಳ್ಳೆಯ ರೀತಿಯಲ್ಲಿ ಆಗುತ್ತಿಲ್ಲ ಎಂದು ರಾಜ್ಯ ಮಹಿಳಾ ಆಯೋಗ ಅಧ್ಯಕ್ಷೆ ನಾಗ ಲಕ್ಷ್ಮಿಬಾಯಿ ಆತಂಕ ವ್ಯಕ್ತಪಡಿಸಿದರು.
ಶಬರಿಮಲೆಗೆ ಮಹಿಳೆಯರಿಬ್ಬರ ಪ್ರವೇಶ ಕುರಿತು ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಮಹಿಳಾ ಸಮಾನತೆ ಹೆಸರಿನಲ್ಲಿ ಒಂದು ಧರ್ಮದ ಆಚರಣೆ ಮೇಲೆ ಧಕ್ಕೆ ತರುವಂತಹ ಕೆಲಸಗಳಾಗುತ್ತಿವೆ. ಭಕ್ತಿ ಹೆಸರಿನಲ್ಲಿ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಚರ್ಚೆಯಾಗುವುದು ಬೇಸರ ಸಂಗತಿ.
ಭಾರತ ವಿವಿಧ ಸಂಪ್ರದಾಯ, ಆಚರಣೆಗಳ ದೇಶ. ಈ ಆಚರಣೆ ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿದೆ. ಧಾರ್ಮಿಕ ಕಟ್ಟುಪಾಡುಗಳನ್ನು ಈಗ ಮುರಿಯುವುದು ತಪ್ಪು. ಮಹಿಳಾ ಸ್ವಾತಂತ್ರ್ಯದ ಹೆಸರಿನಲ್ಲಿ ಒಂದು ಧಾರ್ಮಿಕ ಆಚರಣೆ ಮೇಲೆ ಆಕ್ರಮಣವಾದರೆ, ಅದು ಬೇರೆ ಧರ್ಮದ ಮೇಲೂ ವಿಸ್ತರಣೆಯಾಗುತ್ತದೆ.

ಇಸ್ಲಾಂ ಧರ್ಮದಲ್ಲಿ ಮಹಿಳೆಯರಿಗೆ ಇಂದಿಗೂ ಮಸೀದಿಗಳಿಗೆ ಪ್ರವೇಶವಿಲ್ಲ. ಅದು ಅವರ ಧಾರ್ಮಿಕ ಕಟ್ಟು ಪಾಡು. ಹಾಗೆಂದು ಆ ಧರ್ಮದ ಭಾವನೆಗೆ ಧಕ್ಕೆ ತರುವುದು ಯಾವ ಧರ್ಮ?. ಧರ್ಮದ ವಿಷಯ ಬಲು ಸೂಕ್ಷ್ಮ. ಪದೇ ಪದೆ ಧಾರ್ಮಿಕ ಪ್ರಚೋದನೆ ಸರಿಯಲ್ಲ.
ಪ್ರಜಾಪ್ರಭುತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯ ಎಷ್ಟು ಮುಖ್ಯವೋ, ಅಷ್ಟೇ ಸ್ವಾತಂತ್ರ್ಯ ಧಾರ್ಮಿಕ ಕ್ಷೇತ್ರದಲ್ಲೂ ಇರಬೇಕು. ಅದು ಎಷ್ಟು ಪ್ರಮಾಣದಲ್ಲಿರಬೇಕು ಎಂಬುದನ್ನು ತಜ್ಞರು ನಿರ್ಧರಿಸಬೇಕು. ಮಹಿಳೆಯರಿಗೆ ಸ್ವಾತಂತ್ರ್ಯ ಎನ್ನುವುದನ್ನು ಈ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿ ನೋಡಬಾರದು.
ದಟ್ಟ ದಾರಿದ್ರ್ಯ ಸ್ಥಳದಲ್ಲಿ ವಾಸಿಸುವ ಮಹಿಳೆಗೂ ಸ್ವಾತಂತ್ರ್ಯ ಸಿಗುವ ಹಕ್ಕುಗಳ ಬಗ್ಗೆ ಇದೇ ಧಾಟಿಯಲ್ಲಿ ಮಾತನಾಡಬೇಕು ನಾಗ ಲಕ್ಷ್ಮಿಬಾಯಿ ತಿಳಿಸಿದರು.












Click it and Unblock the Notifications