ಹಾವು ಹಿಡಿಯಲು ಶುರುವಾಗಿದೆ ವೈಜ್ಞಾನಿಕ ತರಬೇತಿ
ಮೈಸೂರು, ಜೂನ್ 26: ಇನ್ನೇನು ಮಳೆಗಾಲ ಶುರುವಾಗಿದೆ. ಒಳಚರಂಡಿ, ಖಾಲಿ ಸೈಟಿನ ಪೊದೆ, ಮ್ಯಾನ್ ಹೋಲ್ ಗಳಲ್ಲಿ ಹಾವು ಮೊಟ್ಟೆ ಹಾಕಿ ಮರಿ ಮಾಡುವ ಸಮಯ ಇದು. ಈ ಸಂದರ್ಭದಲ್ಲಿ ಎಲ್ಲೆಲ್ಲಿಯೋ ಹಾವುಗಳು ಕಾಣಿಸಿಕೊಳ್ಳುತ್ತವೆ, ಇದರಿಂದ ಜನರೂ ಭಯಭೀತರಾಗುತ್ತಾರೆ. ಹಾವು ಹಿಡಿಯಲು ಗೊತ್ತಿಲ್ಲದವರು ಅದನ್ನು ಹಿಡಿಯಲು ಹೋಗಿ ಕಚ್ಚಿಸಿಕೊಳ್ಳುತ್ತಾರೆ. ಕೆಲವರು ಮೋಜಿಗಾಗಿ ಹಾವು ಹಿಡಿಯಲು ಹೋಗಿ ಪ್ರಾಣಕ್ಕೆ ಸಂಚಕಾರ ತಂದುಕೊಳ್ಳುತ್ತಿದ್ದಾರೆ. ಇವೆಲ್ಲವನ್ನು ಮನಗಂಡ ಮೈಸೂರು ಮೃಗಾಲಯ ಇದೇ ಮೊದಲ ಬಾರಿಗೆ ಹಾವು ಹಿಡಿಯುವುದನ್ನು ಕಲಿಸಲು ತರಬೇತಿ ನೀಡಲು ಮುಂದಾಗಿದೆ.
14 ಮೊಟ್ಟೆ ನುಂಗಿ ತೆವಳಲಾಗದೆ ಕೂತಿದ್ದ ನಾಗನ ರಕ್ಷಣೆ
ಹಾವು ಕಾಣಿಸಿಕೊಂಡಾಕ್ಷಣ ಉರಗ ತಜ್ಞರಿಗೆ ಕರೆ ಮಾಡಿ ಹಾವನ್ನು ಹಿಡಿಯಲು ಮಾಹಿತಿ ನೀಡಲಾಗುತ್ತದೆ. ಆದರೆ ಹೀಗೆ ಬಂದವರಿಗೆಲ್ಲರಿಗೂ ಹಾವು ಹಿಡಿಯುವ ವೈಜ್ಞಾನಿಕ ನಿಯಮಗಳ ಬಗ್ಗೆ ಮಾಹಿತಿ ಇರುವುದಿಲ್ಲ. ಇದನ್ನು ಅರಿತ ಮೃಗಾಲಯ ಆಡಳಿತ ಮಂಡಳಿ ಹಾವು ಹಿಡಿಯುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು, ಹಾವುಗಳನ್ನು ವೈಜ್ಞಾನಿಕವಾಗಿ ಹೇಗೆ ಹಿಡಿಯಬೇಕು ಎಂಬ ವಿಚಾರವನ್ನು ತರಬೇತಿ ಮೂಲಕ ನೀಡಲು ಮುಂದಾಗಿದೆ. ಈ ತರಬೇತಿ ಮೃಗಾಲಯದಲ್ಲಿ ಇದೇ ಜುಲೈ 2ರಿಂದ ನಡೆಯಲಿದೆ.
ಮಂಗಳೂರಿನಲ್ಲಿ ಶಾಲಾ ಆವರಣದಲ್ಲೇ ವಿದ್ಯಾರ್ಥಿಗೆ ಹಾವು ಕಡಿತ
ಈ ಕುರಿತು ಮಾತನಾಡಿದ ಸ್ನೇಕ್ ಶ್ಯಾಮ್, ಮೈಸೂರು ಮೃಗಾಲಯ ಪ್ರಾಧಿಕಾರ ಹಾವುಗಳನ್ನು ಹಿಡಿಯುವವರಿಗೆ ತರಬೇತಿ ನೀಡಲು ಮುಂದಾಗಿರುವುದು ಒಳ್ಳೆಯ ಕೆಲಸ. ಹಾವುಗಳನ್ನು ವೈಜ್ಞಾನಿಕವಾಗಿ ಹಿಡಿಯುವ ಬಗ್ಗೆ ತರಬೇತಿ ನೀಡುವುದು ಅತ್ಯವಶ್ಯಕ. ಅಲ್ಲದೆ ಹಾವುಗಳಿಂದ ಕಚ್ಚಿಸಿಕೊಳ್ಳುವವರಿಗೆ ಪ್ರತ್ಯೇಕ ವಾರ್ಡ್ ಮೀಸಲಿಡುವ ಅಗತ್ಯವೂ ಇದೆ. ಹಾವುಗಳ ರಕ್ಷಣೆ ಕುರಿತೂ ತಜ್ಞರಿಂದ ತಿಳಿಸಿಕೊಡಬೇಕು ಎಂದರು.
ಹಿರಿಯ ಉರಗ ತಜ್ಞರು ಹಾಗೂ ಪ್ರಾಣಿಶಾಸ್ತ್ರಜ್ಞರು ತರಬೇತಿ ನೀಡಲಿದ್ದಾರೆ. ತರಬೇತಿಯಲ್ಲಿ, ಹಾವುಗಳ ಪ್ರಭೇದಗಳು, ಜೀವನಶೈಲಿ, ಸ್ವಭಾವ, ವಾಸಸ್ಥಾನ, ಮೊಟ್ಟೆ ಇಡುವ ವೇಳೆ, ಹಾವು ಹಿಡಿಯುವ ವಿಧಾನ ಹಾಗೂ ಈ ವೇಳೆ ವಹಿಸಬೇಕಾದ ಮುಂಜಾಗ್ರತಾ ಕ್ರಮ ಮುಂತಾದ ವಿಷಯಗಳ ಕುರಿತು ತಿಳಿಸಿಕೊಡಲಾಗುತ್ತದೆ. ತರಬೇತಿಯಲ್ಲಿ ಭಾಗವಹಿಸುವ ಎಲ್ಲರಿಗೂ ಪ್ರಮಾಣ ಪತ್ರ ನೀಡಲಾಗುತ್ತದೆ.