Mysuru: ಕುಕ್ಕರಹಳ್ಳಿ ಕೆರೆಯಲ್ಲಿ ಮೀನುಗಳ ಮಾರಣಹೋಮ
ಮೈಸೂರು: ಸೃಜನಶೀಲರಿಗೆ ಸ್ಫೂರ್ತಿಯ ಸೆಲೆ ಎಂದೇ ಹೆಸರಾದ ಮಾನಸಗಂಗೋತ್ರಿಯ ಕುಕ್ಕರಹಳ್ಳಿ ಕೆರೆಗೆ ಒಳಚರಂಡಿ ನೀರು ಹೆಚ್ಚಾಗಿ ಹರಿದ ಪರಿಣಾಮ ನೂರಾರು ಮೀನುಗಳು ಮೃತಪಟ್ಟಿವೆ.
ಕೆರೆಯ ಸುತ್ತ ವಾಯುವಿಹಾರಕ್ಕೆ ತೆರಳಿದವರಿಗೆ ಕೆರೆ ದಂಡೆಯಲ್ಲಿ ಮೀನುಗಳು ಸತ್ತು ಬಿದ್ದಿರುವುದು ಕಂಡು ಬಂದಿದೆ. ವಿಷದ ಹೊಂಡವಾಗುತ್ತಿರುವ ಕುಕ್ಕರಹಳ್ಳಿಕೆರೆ ಬಗ್ಗೆ ಅಧ್ಯಯನ ನಡೆಸಿ ಕೆರೆಯನ್ನು ಸಂರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.

ಭಾನುವಾರ ಕೆರೆ ಆವರಣಕ್ಕೆ ಬಂದ ವಾಯುವಿಹಾರಿಗಳು, ಕೆರೆ ನೀರಿನಲ್ಲಿ ತೇಲುತ್ತಿದ್ದ ಮೀನುಗಳನ್ನು ಗಮನಿಸಿ ಮೈಸೂರು ವಿವಿ ತೋಟಗಾರಿಕಾ ವಿಭಾಗದ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಸ್ಥಳಕ್ಕೆ ಧಾವಿಸಿದ ತೋಟಗಾರಿಕಾ ಅಧಿಕಾರಿಗಳು ಹಾಗೂ ಸಿಬ್ಬಂದಿ, ಮೀನುಗಾರರ ನೆರವಿನಿಂದ ಮೃತಪಟ್ಟ ಮೀನುಗಳನ್ನು ತೆರವುಗೊಳಿಸಿದ್ದಾರೆ.
''ಮೈಸೂರು ವಿಶ್ವವಿದ್ಯಾಲಯ ಸೆನೆಟ್ ಹಾಲ್ ಮುಂಭಾಗದ ಚರಂಡಿಯಿಂದಲೂ ವಿದ್ಯಾರ್ಥಿನಿಲಯದ ಒಳಚರಂಡಿ ನೀರು, ಪ್ಲಾಸ್ಟಿಕ್ ಪೇಪರ್ ಸೇರಿದಂತೆ ತ್ಯಾಜ್ಯಗಳು ಕೆರೆಗೆ ಸೇರುತ್ತಿರುವುದು ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ. ಇದು ಇದೇ ಮೊದಲೇನು ಅಲ್ಲ. ಪದೇ ಪದೇ ರೀತಿ ಆಗುತ್ತಿದೆ. ಕೂಡಲೇ 300 ಮೀಮೀ ಒಳಚರಂಡಿ ಪೈಪ್ ಅಳವಡಿಸಬೇಕು,'' ಎಂದು ಪರಿಸರಪ್ರೇಮಿಗಳು ಆಗ್ರಹಿಸಿದ್ದಾರೆ.
ಹೆಚ್ಚಾದ ತಾಪಮಾನ
ಕುಕ್ಕರಹಳ್ಳಿ ಕೆರೆಯ ಮೈಸೂರು-ಹುಣಸೂರು ರಸ್ತೆಯ ಭಾಗದಿಂದಲೂ ಕೊಳಚೆ ನೀರು ಕೆರೆಗೆ ಹರಿಯುತ್ತಿದೆ. ದಿನೇದಿನೇ ಈ ರೀತಿ ಕೊಳಚೆ ನೀರು ಸೇರುತ್ತಿರುವುದರಿಂದಲೇ ಕೆರೆಯ ನೀರಿನಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗಿದೆ. ಹಾಗಾಗಿ ಕೆರೆಗೆ ಶುದ್ಧ ನೀರು ಸೇರುವಂತೆ ಮಾಡಬೇಕು ಎಂದು ಪರಿಸರವಾದಿಗಳು ಒತ್ತಾಯಿಸಿದ್ದಾರೆ.
ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಿದೆ. ಹೀಗಾಗಿ ಕೆರೆಯ ವಾತಾವರಣದಲ್ಲಿ ನೀರು ಬಿಸಿಯಾಗುತ್ತಿದೆ. ಪ್ರತಿ ಬೇಸಿಗೆ ಕಾಲದಲ್ಲಿ ಬಿಸಿಲಿನ ಝಳದಿಂದ ಮೀನುಗಳು ಸಾಯುತ್ತವೆ. ಈಗಾಗಲೇ ತಜ್ಞರನ್ನು ಕರೆಸಿ ತಪಾಸಣೆ ಮಾಡಿಸಲಾಗಿದೆ. ಮೀನುಗಳ ಸಾವಿಗೆ ಕಾರಣಗಳೇನು? ಎಂಬುದನ್ನು ತಿಳಿದುಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮೈಸೂರು ವಿವಿ ತೀರ್ಮಾನಿಸಿದೆ.












Click it and Unblock the Notifications