ಜಮ್ಮು- ಕಾಶ್ಮೀರದಲ್ಲಿ ಮೈಸೂರು ಯೋಧ ಕೋಮಾ ಸ್ಥಿತಿಯಲ್ಲಿ
ಮೈಸೂರು, ಮೇ 02 : ಜಮ್ಮು ಕಾಶ್ಮೀರದ ಕುಪ್ವಾರದಲ್ಲಿ ಇತ್ತೀಚೆಗೆ ಉಗ್ರರ ಗುಂಡೇಟಿನಿಂದ ಗಾಯಗೊಂಡು ಕೋಮಾಸ್ಥಿತಿಯಲ್ಲಿರುವ ಮೈಸೂರು ಮೂಲದ ಯೋಧ ರಮೇಶನ ಬಗ್ಗೆ ಯಾವುದೇ ಮಾಹಿತಿ ಸಿಗದ ಕಾರಣ ಕುಟುಂಬಸ್ಥರು ಆತಂಕಕ್ಕೊಳಗಾಗಿದ್ದಾರೆ.
ಮೈಸೂರು ತಾಲೂಕಿನ ಇಲವಾಲ ಹೋಬಳಿಯ ಭದ್ರೇಗೌಡನಕೊಪ್ಪಲಿ ಮೂಲದ ಯೋಧ ರಮೇಶ, ಜಮ್ಮು -ಕಾಶ್ಮೀರದ ಕುಪ್ವಾರದಲ್ಲಿ ಉಗ್ರರು ನಡೆಸಿದ ದಾಳಿಯಲ್ಲಿ ಹೆಚ್ಚಿನ ಪ್ರಮಾಣದ ಗಾಯಗಳಾಗಿದೆ ಎಂದು ಮಾಹಿತಿ ಬಂದಿದೆ. ಆದರೆ, ಯೋಧನ ಬಗ್ಗೆ ಯಾವುದೇ ಮಾಹಿತಿ ಸಿಗದೇ ಇರುವುದರಿಂದ ಅವರ ತಾಯಿ-ಪತ್ನಿ ಮತ್ತು ಮಕ್ಕಳು ಆತಂಕದಲ್ಲಿದ್ದಾರೆ.

ಈ ಬಗ್ಗೆ ಸರಿಯಾದ ಮಾಹಿತಿ ನೀಡಬೇಕು ಹಾಗೂ ನಮ್ಮನ್ನು ಜಮ್ಮುಕಾಶ್ಮೀರಕ್ಕೆ ಕರೆಸಿಕೊಳ್ಳಬೇಕೆಂದು ಕೇಂದ್ರ ಹಾಗೂ ಮೈಸೂರು ಜಿಲ್ಲಾಡಳಿತಕ್ಕೆ ಕುಟುಂಬಸ್ಥರು ಮನವಿ ಮಾಡಿಕೊಳ್ಳುತ್ತಿದ್ದಾರೆ.
ಯೋಧನ ಮನೆಗೆ ಸಂಸದ ಪ್ರತಾಪ್ ಸಿಂಹ ಭೇಟಿ :
ಜಮ್ಮು-ಕಾಶ್ಮೀರದ ಕುಪ್ವಾರಾದಲ್ಲಿ ಉಗ್ರರ ಗುಂಡೇಟಿನಿಂದ ಗಾಯಗೊಂಡಿರುವ ರಮೇಶ್ ಅವರ ಇಲವಾಲದಲ್ಲಿನ ನಿವಾಸಕ್ಕೆ ಮೈಸೂರು ಹಾಗೂ ಕೊಡಗು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿದರು.
ಯೋಧ ಬಿ.ರಮೇಶ್ ಅವರಿಗೆ ಶ್ರೀನಗರದ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಈಗಾಗಲೇ ಚಿಕಿತ್ಸೆಗೆ ಅವರು ಸ್ಪಂದಿಸಿದ್ದಾರೆ.
ಈ ಸಂಬಂಧವಾಗಿ ಸೋಮವಾರ ಯೋಧನ ಕುಟುಂಬಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.












Click it and Unblock the Notifications