ಮೈಸೂರು: ಜುಬಿಲಿಯಂಟ್ ಕಾರ್ಖಾನೆ ಪುನರಾರಂಭಕ್ಕೆ ಹೋಮ, ಪೂಜೆ
ಮೈಸೂರು, ಜೂನ್ 2: ನೌಕರನೊಬ್ಬನಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣ ಪತ್ತೆಯಾದ ನಂತರ ಉತ್ಪಾದನೆ ಸ್ಥಗಿತಗೊಳಿಸಿದ್ದ ನಂಜನಗೂಡು ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲಿಯಂಟ್ ಲೈಫ್ ಸೈನ್ಸಸ್ ಔಷಧಿ ಕಾರ್ಖಾನೆ ಪುನಃ ತೆರೆಯಲು ತಯಾರಿ ನಡೆದಿದ್ದು, ಅದಕ್ಕಾಗಿ ಇಂದು ಶಾಂತಿ ಹೋಮ, ಪೂಜೆ ನಡೆಸಲಾಯಿತು.
ರಾಜ್ಯ ಸರ್ಕಾರದ ಆದೇಶದಂತೆ ಕಾರ್ಖಾನೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಕೊರೊನಾ ವೈರಸ್ ಸೋಂಕಿನ ವಿರುದ್ಧ ಬಳಸಲಾಗುವ ರೆಮಿಡ್ ಸೆವಿರ್ ಔಷಧ ಅವಶ್ಯವಾಗಿದ್ದು, ಅದನ್ನು ತಯಾರಿಸಲು ರಾಜ್ಯ ಸರ್ಕಾರ ಕಾರ್ಖಾನೆ ಕೆಲಸ ಆರಂಭಿಸಲು ಒಪ್ಪಿಗೆ ನೀಡಿದೆ.
ಅಮೇರಿಕಾ ಮೂಲದ ಕಂಪನಿಯೊಂದಿಗೆ ಜ್ಯುಬಿಲಿಯಂಟ್ ಕಾರ್ಖಾನೆ ಒಪ್ಪಂದ ಮಾಡಿಕೊಂಡಿದ್ದು, ಅದರ ಪ್ರಕಾರ ಈ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಗೆ ಔಷಧ ಉತ್ಪಾದನೆ ನಡೆಯಲಿದೆ. ಈ ಕಾರಣಕ್ಕಾಗಿಯೇ ಜ್ಯುಬಿಲಿಯಂಟ್ ಜೆನರಿಕ್ ಕಾರ್ಖಾನೆಯನ್ನು ಪುನರಾರಂಭಿಸಲಾಗುತ್ತಿದೆ.

ತಯಾರಿಕಾ ಘಟಕದಲ್ಲಿ ಓರ್ವ ವ್ಯಕ್ತಿಯಿಂದ ಹಲವು ವ್ಯಕ್ತಿಗಳಿಗೆ ಕೊರೊನಾ ವೈರಸ್ ಸೋಂಕು ಹರಡಿದ ಕಾರಣ, ಕೊರೊನಾ ಹಾಟ್ ಸ್ಪಾಟ್ ಆಗಿತ್ತು. ಅದಕ್ಕಾಗಿ ಕಾರ್ಖಾನೆಗೆ ಬೀಗ ಹಾಕಿ ವೈರಸ್ ಮೂಲ ಪತ್ತೆಗೆ ಸರ್ಕಾರ ತನಿಖೆ ನಡೆಸಿತಾದರೂ ಕೊನೆಗೂ ಅದರ ಮೂಲ ಮಾತ್ರ ಕಂಡು ಹಿಡಿಯಲು ಸಾಧ್ಯವಾಗಿಲ್ಲ ಎಂದು ವರದಿ ಸಲ್ಲಿಸಿ ಪ್ರಕರಣ ಮುಕ್ತಾಯಗೊಳಿಸಲಾಯಿತು.
ಈಗ ದೇಶ-ವಿದೇಶಗಳಲ್ಲಿ ಕೋವಿಡ್-19 ಚಿಕಿತ್ಸೆಗೆ ಬಳಸುವ ಔಷಧವೂ ಸೇರಿದಂತೆ ಹಲವು ಮಹತ್ವದ ಔಷಧಗಳಿಗೆ ವ್ಯಾಪಕ ಬೇಡಿಕೆ ಇರುವುದರಿಂದ ತಕ್ಷಣವೇ ಘಟಕ ಆರಂಭಿಸಲು ಅನುಮತಿ ನೀಡುವಂತೆ ಕಂಪನಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿತ್ತು.

ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ರಾಜ್ಯದಲ್ಲಿ ಎಲ್ಲ ಔದ್ಯೋಗಿಕ ಚಟುವಟಿಕೆಗಳು ಪ್ರಾರಂಭವಾಗಿದ್ದು, ಅಂತೆಯೇ ಕೋವಿಡ್-19 ನಿಂದಾಗಿ ಮುಚ್ಚಲಾಗಿದ್ದ ಜ್ಯುಬಿಲಿಯಂಟ್ ಕಾರ್ಖಾನೆಯನ್ನು ಸಹ ತೆರೆಯಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದ್ದರು.












Click it and Unblock the Notifications