ಮೈಸೂರು: 11 ದಿನದ ಬಳಿಕ ಸ್ಯಾಂಟ್ರೋ ರವಿ ಬಂಧನ: ಎಡಿಜಿಪಿ ಅಲೋಕ್ ಕುಮಾರ್
ಮೈಸೂರು, ಜನವರಿ, 13: 11 ದಿನಗಳಿಂದ ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿಯನ್ನು ಗುಜರಾತ್ನಲ್ಲಿ ಬಂಧಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಮೈಸೂರಿನಲ್ಲಿ ತಿಳಿಸಿದರು.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುಜರಾತ್ನ ಅಹಮಬಾದ್ನಲ್ಲಿ ಸ್ಯಾಂಟ್ರೋ ರವಿಯನ್ನು ಬಂಧಿಸಲಾಗಿದೆ. ಇದಕ್ಕೆ ಗುಜರಾತ್ ಪೊಲೀಸರು ಸಹಕಾರ ನೀಡಿದರು. ಗುಜರಾತ್ನಲ್ಲಿ ನಿತ್ಯ ಒಂದೊಂದು ಜಾಗ ಬದಲಾಯಿಸುತ್ತಿದ್ದ. ಇದಕ್ಕಾಗಿ ನಿತ್ಯ ಸಿಮ್ಗಳನ್ನು ಚೇಂಜ್ ಮಾಡುತ್ತಿದ್ದ. ನಿನ್ನೆಯಷ್ಟೇ ಸ್ಯಾಂಟ್ರೋ ರವಿ ಆಪ್ತನನ್ನು ಮಂತ್ರಾಲಯದಲ್ಲಿ ಬಂಧಿಸಲಾಗಿತ್ತು ಎಂದರು.
ಪೊಲೀಸರು ಸಾಕಷ್ಟು ಶ್ರಮವಹಿಸಿದ್ದಾರೆ
ನಮ್ಮ ಪೊಲೀಸರು ಸಾಕಷ್ಟು ಶ್ರಮವಹಿಸಿ ಕೆಲಸ ಮಾಡಿದ್ದಾರೆ. ಬೇರೆ ಬೇರೆ ಜಿಲ್ಲೆಗಳಿಂದ ಎಸ್ಪಿಗಳು ತನಿಖೆಗಾಗಿ ಬಂದಿದ್ದು, ಈತನ ಮೇಲೆ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಇದು ಅವನ ಮೊದಲ ಪ್ರಕರಣ ಅಲ್ಲ. ಪೊಲೀಸ್ ಇಲಾಖೆಯ ಕೆಲವರ ಜೊತೆ ಸ್ಯಾಂಟ್ರೋ ರವಿ ಸಂಕರ್ಪ ಇದೆ. ಈ ಬಗ್ಗೆಯೂ ತನಿಖೆ ನಡೆಸಲಾಗುವುದು. ಸ್ಯಾಂಟ್ರೋ ರವಿ ಬಂಧಿಸಿ ರಾಜ್ಯದ ಪೊಲೀಸರ ಗೌರವ ಉಳಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೆ ಬಹುಮಾನ ನೀಡಲಾಗುವುದು. ಸ್ಯಾಂಟ್ರೋ ರವಿ ವಿಮಾನದಲ್ಲಿ ಗುಜರಾತ್ಗೆ ಹಾರಿದ್ದ. ಮೈಸೂರಿನಿಂದ ಮಂಗಳೂರಿಗೆ ತೆರಳಿದ್ದ. ಮಂಗಳೂರಿನಿಂದ ಪೂನಾಗೆ ಹೊರಟು, ಅಲ್ಲಿಂದ ವಿಮಾನದಲ್ಲಿ ಗುಜರಾತ್ಗೆ ತೆರಳಿದ್ದ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಸ್ಯಾಂಟ್ರೋ ರವಿ ಮೈಸೂರಿಗೆ ಮತ್ತೆ ಆಗಮಿಸಿದ್ದ. ಈ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ ಮೈಸೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಸಿದ್ದರು. ಸ್ಯಾಂಟ್ರೋ ರವಿ ಪ್ರಕರಣ ಬೆಳಕಿಗೆ ಬಂದ ನಂತರ ಇದು ಎರಡನೇ ಎಡಿಜಿಪಿ ಸಭೆ ಆಗಿತ್ತು. ಸಭೆಯಲ್ಲಿ ಮೈಸೂರು ಸಿಟಿ ಪೊಲೀಸ್ ಕಮಿಷನರ್ ರಮೇಶ್ ಬಾನೋಟ್, ಮೈಸೂರು ಎಸ್ಪಿ ಸೀಮಾ ಲಟ್ಕರ್, ಮಂಡ್ಯ ಎಸ್ಪಿ ಯತೀಶ್, ರಾಮನಗರ ಎಸ್ಪಿ ಸಂತೋಷ್ ಬಾಬು ಹಾಗೂ ಇವರೊಂದಿಗೆ ಮೈಸೂರಿನ ಡಿಸಿಪಿಗಳೂ ಹಾಜರಿದ್ದರು.












Click it and Unblock the Notifications