ಒಂದು ಹಿಡಿ ಮಣ್ಣಿನೊಂದಿಗೆ ಇಂದು ಪುಟ್ಟಣ್ಣಯ್ಯ ಅಂತ್ಯಕ್ರಿಯೆ
ಮೈಸೂರು, ಫೆಬ್ರವರಿ 21: ರೈತನಾಯಕ ಮತ್ತು ಮೇಲುಕೋಟೆ ಶಾಸಕ ಕೆ ಎಸ್ ಪುಟ್ಟಣ್ಣಯ್ಯ ಅವರ ಅಂತ್ಯ ಸಂಸ್ಕಾರ ಫೆ.22 ರಂದು ನಡೆಯಲಿದ್ದು, ಅಂತ್ಯಸಂಸ್ಕಾರದ ಸಮಯದಲ್ಲಿ ಯಾವುದೆ ಧಾರ್ಮಿಕ ವಿಧಿ ವಿಧಾನ ಇರುವುದಿಲ್ಲ.
ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯ ತೋಟದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದ್ದು, ಗುರುವಾರ ಬೆಳಿಗ್ಗೆ 6 ಗಂಟೆಗೆ ಜೆ ಎಸ್ ಎಸ್ ಕಾಲೇಜಿನಿಂದ ಮೃತ ದೇಹ ರವಾನೆ ಮಾಡಲಾಗುತ್ತದೆ.
ಈ ವೇಳೆ ಮೈಸೂರು ಜಿಲ್ಲಾಡಳಿತದಿಂದ ಗೌರವ ವಂದನೆ ಸಮರ್ಪಿಸಲಿದೆ. ನಂತರ 7:30 ರಿಂದ 10:30 ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಪುಟ್ಟಣ್ಣಯ್ಯ ಅವರ ಆದರ್ಶದಂತೇ ಅಂತ್ಯಕ್ರಿಯೆ ನಡೆಯಲಿದೆ.
ಧಾರ್ಮಿಕ ಕೈಂಕರ್ಯಗಳಲ್ಲಿ ಪುಟ್ಟಣ್ಣಯ್ಯ ಅವರಿಗೆ ನಂಬಿಕೆ ಇಲ್ಲದಿದ್ದರಿಂದ ಅವರ ಆಶಯದಂತೆಯೇ ಅಂತ್ಯ ಸಂಸ್ಕಾರ ಮಾಡಲು ಅವರ ಕುಟುಂಬ ನಿರ್ಧರಿಸಿದೆ.

ಪ್ರತಿ ಜಿಲ್ಲೆಯಿಂದ ಅವರ ಅಂತ್ಯ ಸಂಸ್ಕಾರಕ್ಕೆ ಆಗಮಿಸುವ ರೈತರು ಒಂದು ಹಿಡಿ ಮಣ್ಣು ತಂದು ಅಂತ್ಯ ಸಂಸ್ಕಾರ ನೆರವೇರಿಸಲು ಚಿಂತಿಸಲಾಗಿದೆ.
ರಾಷ್ಟ್ರ ಹಾಗೂ ರಾಜ್ಯದ ಗಣ್ಯರು ಹಾಗೂ ಸ್ವರಾಜ್ಯ ಪಕ್ಷದ ಮುಖಂಡರು ಭಾಗಿಯಾಗಲಿದ್ದು, ವಿವಿಧ ರಾಜ್ಯಗಳ ರೈತ ಮುಖಂಡರು ಅಂತ್ಯ ಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ ಎಂದು ಮೈಸೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತಮುಖಂಡ ಬಡಗಲಪೂರ ನಾಗೇಂದ್ರ ಹೇಳಿದ್ದಾರೆ.
ಮೈಸೂರಿನಿಂದ ಕ್ಯಾತನಹಳ್ಳಿಯ ವರೆಗೆ ರಂಗ ಕಲಾವಿದ ಜನಾರ್ಧನ್ (ಜನ್ನಿ) ಅವರ ಮಗ ರೈತ ಗೀತೆ ಹಾಡುವ ಮೂಲಕ ನಮನ ಸಲ್ಲಿಸಲಿದ್ದಾರೆ. ಫೆ.28 ರಂದು ಕೆ ಎಸ್ ಪುಟ್ಟಣ್ಣಯ್ಯ ಅವರನ ನುಡಿನಮನ ಕಾರ್ಯಕ್ರಮ ನೆರವೇರಲಿದೆ.
ವಿವಿಧ ಕ್ಷೇತ್ರಗಳ ಗಣ್ಯರಿಗೆ ಪುಟ್ಟಣ್ಣಯ್ಯ ಹೆಸರಿನಲ್ಲಿ ಪ್ರಶಸ್ತಿ ನೀಡಲೂ ಚಿಂತನೆ ನಡೆಯುತ್ತಿದೆ.
ಶವಾಗಾರದಿಂದ ಮೃತದೇಹ ತೆರೆದ 5 ಗಂಟೆಗಳ ಒಳಗೆ ಅಂತ್ಯ ಸಂಸ್ಕಾರ ಮಾಡಬೇಕಾದ್ದರಿಂದ ಮಧ್ಯಾಹ್ನ 12 ಗಂಟೆಯಿಂದ 3 ಅಂತ್ಯಸಂಸ್ಕಾರ ನಡೆಯಲಿದೆ.












Click it and Unblock the Notifications