ಕೊರೊನಾ ವೈರಸ್ ನಿಂದ ಮೈಸೂರಿನ ಯುವ ಪತ್ರಕರ್ತ ನಿಧನ
ಮೈಸೂರು, ಅಕ್ಟೋಬರ್ 18: ಪ್ರಜಾವಾಣಿ, ವಿಜಯವಾಣಿ, ಕಸ್ತೂರಿ ಟಿವಿಯಲ್ಲಿ ಕೆಲಸ ಮಾಡಿದ್ದ ಉತ್ಸಾಹಿ ಪತ್ರಕರ್ತ ಪವನ್ ಹೆತ್ತೂರು (35) ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ.
ಮೈಸೂರು ಪ್ರಜಾವಾಣಿ ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದ ಪವನ್ ಹೆತ್ತೂರು ಅವರು ಪತ್ನಿ, ಇಬ್ಬರು ಚಿಕ್ಕ ವಯಸ್ಸಿನ ಮಕ್ಕಳನ್ನು ಅಗಲಿದ್ದಾರೆ. ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಪವನ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿ, ಚಿಕಿತ್ಸೆಗೆ ಸ್ಪಂಧಿಸಲಿಲ್ಲ. ಅ.18 ರ ರಾತ್ರಿ 1.30 ಸುಮಾರಿಗೆ ಕೊನೆಯುಸಿರೆಳೆದರು.
ಕರ್ನಾಟಕದಲ್ಲಿ ಕೊವಿಡ್-19 ಸೋಂಕಿತರಿಗಿಂತ ಗುಣಮುಖರೇ ಹೆಚ್ಚು!
ಮೈಸೂರಿನ ಪ್ರಜಾವಾಣಿ ವರದಿಗಾರ ಪವನ್ ಬದುಕಿ ಬರಲೆಂದು ಅವರ ಪತ್ರಕರ್ತ ಸ್ನೇಹಿತರು ಪ್ರಾರ್ಥಿಸಿದ್ದು ಪ್ರಯೋಜನವಾಗಲಿಲ್ಲ. ಮೃತರ ಅಂತ್ಯಕ್ರಿಯೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ನಡೆಯಲಿದೆ.
ಪತ್ರಕರ್ತ ಪವನ್ ಹೆತ್ತೂರು ಕೊರೊನಾ ಸೋಂಕಿನಿಂದ ನಿಧನವಾಗಿರುವುದಕ್ಕೆ ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(KUWJ) ತೀವ್ರ ಸಂತಾಪ ವ್ಯಕ್ತಪಡಿಸಿದೆ.
ಮಡಿಕೇರಿಯ ಪ್ರಜಾವಾಣಿ ವರದಿಗಾರ ಕೆ.ಎ ಆದಿತ್ಯ ಮಾತನಾಡಿ, ನನ್ನ ಸಹೋದ್ಯೋಗಿ, ಗೆಳೆಯ ಪವನ್ಗೆ ಏನೂ ಆಗುವುದಿಲ್ಲ ಎಂಬ ನಂಬಿಕೆಯಿತ್ತು. ಮತ್ತೆ ಮೊದಲಿನಂತೆ ಆಗುವ ಭರವಸೆಯೂ ಎರಡು ದಿನಗಳ ಹಿಂದೆ ಮೂಡಿತ್ತು. ವಿಧಿ ಕ್ರೂರಿ ಕೊರೊನಾ ಈ ರೀತಿ ಮಾಡಿದೆ. ಅವನ ನಗು, ಮಾತು ಕಣ್ಮುಂದೆ ಬರುತ್ತಿದೆ. ಚಿಕ್ಕ ಅವಳಿ ಮಕ್ಕಳಿದ್ದಾರೆ ಎಂದು ದುಃಖ ವ್ಯಕ್ತಪಡಿಸಿದರು.
ಎರಡು ದಿನಗಳ ಎಲ್ಲ ಪತ್ರಕರ್ತ ಗೆಳೆಯರಿಗೆ ಆಸ್ಪತ್ರೆಯಿಂದ ಪವನ್ ಮಸೇಜ್ ಸಹ ಮಾಡಿದ್ದರು. ಆದರೆ, ಕೊರೊನಾ ಅವನಿಗೆ ಗೊತ್ತಿಲ್ಲದೇ ಅವನ ಶ್ವಾಸಕೋಶ ಹಾಳು ಮಾಡಿತ್ತು ಎಂದರು.
ಪವನ್ ಎರಡು ದಿನಗಳ ಹಿಂದೆ ಕಳುಹಿಸಿದ್ದ ಸಂದೇಶ...
""ಆತ್ಮೀಯರೆ, ನನ್ನ ಆರೋಗ್ಯದಲ್ಲಿ ಬಹುತೇಕ ಸುಧಾರಣೆ ಆಗಿದೆ. ಮೂರು ದಿನದಲ್ಲಿ ಸಂಪೂರ್ಣ ಸುಧಾರಣೆ ಆಗಲಿದೆ ಎಂದು ಡಾ.ಸುಯೋಗ ತಿಳಿಸಿದ್ದಾರೆ. ನಿಮ್ಮ ಪ್ರೀತಿಗೆ ನಾನು ಋಣಿ. ದಯವಿಟ್ಟು ನನಗೂ, ನನ್ನ ಕುಟುಂಬದವರಿಗೆ ಆರೋಗ್ಯ ವಿಚಾರಿಸಲು ಕರೆ ಮಾಡದಂತೆ ಕೋರುತ್ತೇನೆ. ಇದರಿಂದ ಅವರೂ ಆತಂಕಗೊಳ್ಳುತ್ತಾರೆ. ಇತರೆ ಪತ್ರಕರ್ತ ಮಿತ್ರರಿಗೂ ತಿಳಿಸಿ. ಅಂದಿಗೂ, ಇಂದಿಗೂ ಬಹುತೇಕ ಸುಧಾರಣೆ ಆಗಿದೆ. ಸ್ವಲ್ಪ ಕೆಮ್ಮು ಹಾಗೂ ಸುಸ್ತು ಇದೆ ಅಷ್ಟೇ. ಎಲ್ಲರ ಪ್ರೀತಿ, ವಿಶ್ವಾಸಕ್ಕೆ ಋಣಿ.'' ಎಂದು ಸಂದೇಶ ಕಳುಹಿಸಿದ್ದರು.