ಮೈಸೂರು: ನಮ್ಮ ರಾಜಕಾರಣಿಗಳು ಎಷ್ಟು ವಿದ್ಯಾವಂತರು..?!
Recommended Video

ಮೈಸೂರು, ಏಪ್ರಿಲ್ 5 : ಈ ಚುನಾವಣೆಗೆ ದಿನಾಂಕವೇನೋ ನಿಗದಿಯಾಗಿದೆ. ಪಕ್ಷದ ಹುರಿಯಾಳುಗಳು ದಿನದಿಂದ ದಿನಕ್ಕೆ ಗೆಲುವಿನ ಕುದುರೆಯೇರಲು ಸೈಕಲ್ ತುಳಿಯುತ್ತಲೇ ಇದ್ದಾರೆ. ರಾಷ್ಟ್ರೀಯ ಪಕ್ಷಗಳು ತಮ್ಮ ಅಭ್ಯರ್ಥಿ ಘೋಷಣೆಯ ಲೆಕ್ಕಾಚಾರದಲ್ಲಿ ತೊಡಗಿದೆ. ಅಭ್ಯರ್ಥಿಗಳು ತಾವು ಸ್ಫರ್ಧಿಸಲು ಮೊದಲು ಬೇಕಾಗಿರುವುದೇ ಠೇವಣಿ, ವಿದ್ಯಾರ್ಹತೆ. ಇವೆಲ್ಲವೂ ಒಂದೆಡೆಯಾದರೆ ಇತ್ತ ಮೈಸೂರಿನಲ್ಲಿ ಕಳೆದ ಚುನಾವಣೆಯಲ್ಲಿ ಸ್ಫರ್ಧಿಸಿದ ಅಭ್ಯರ್ಥಿಗಳಲ್ಲಿ ಠೇವಣಿ ಕಳೆದುಕೊಂಡವರೆಷ್ಟು ? ಜನನಾಯಕರ ವಿದ್ಯಾರ್ಹತೆ ಎಷ್ಟು ? ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ
ವಿದ್ಯಾವಂತರು ಹಾಗೂ ಯುವ ಸಮೂಹ ರಾಜಕೀಯ ಪ್ರವೇಶಿಸಬೇಕು ಎಂಬ ಒತ್ತಾಸೆ ಆಗಾಗ ಕೇಳಿಬರುತ್ತಿದೆ. ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ರಾಜಕೀಯದೆಡೆಗೆ ವಿದ್ಯಾವಂತರು ಆಕರ್ಷಿತರಾಗುತ್ತಿದ್ದಾರೆ. ಆದರೆ ಇದು ನಿರೀಕ್ಷಿತ ಪ್ರಮಾಣದಲ್ಲಿ ಆಗುತ್ತಿಲ್ಲ ಎಂಬುದನ್ನು 2013ರಲ್ಲಿ ವಿಧಾನಸಭೆಗೆ ನಡೆದ ಸಾರ್ವತ್ರಿಕ ಚುನಾವಣೆ ದೃಢಪಡಿಸುತ್ತದೆ. ಜಿಲ್ಲೆಯ 11 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 160 ಮಂದಿ ಸ್ಫರ್ಧಿಸಿದ್ದರು. ಇವರ ಶೈಕ್ಷಣಿಕ ಆರ್ಹತೆ ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಡುತ್ತಿದೆ. ಪಿಯು ಶಿಕ್ಷಣ ಪೂರೈಸದಿರುವವರ ಸಂಖ್ಯೆಯೇ ಗಣನೀಯವಾಗಿದೆ.

ಹೆಚ್.ಡಿ ಕೋಟೆ ಕ್ಷೇತ್ರದಲ್ಲಿ ಬಹುಜನ ಪಕ್ಷದಿಂದ ಸ್ಪರ್ಧಿಸಿದ್ದ ಗೋಪಾಲ ಎಂಬುವವರು ಅನಕ್ಷರಸ್ಥರು ಎಂದು, ಹುಣಸೂರಿನಿಂದ ಸ್ಫರ್ಧಿಸಿದ್ದ ತಿಮ್ಮೇಗೌಡ ಅಕ್ಷರಸ್ಥ ಎಂಬಷ್ಟೇ ಉಲ್ಲೇಖಿಸಿದ್ದರು. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದಂತೆ ತಿ .ನರಸೀಪುರದಲ್ಲಿ ಕಣಕ್ಕೆ ಇಳಿದಿದ್ದ ಸಿದ್ದಯ್ಯ ಹಾಗೂ ನರಸಿಂಹರಾಜ ಕ್ಷೇತ್ರದಲ್ಲಿ ಸ್ಫರ್ಧಿಸಿದ್ದ ಜೆಡಿಯು ಅಭ್ಯರ್ಥಿ ಅಯೂಬ್ ಖಾನ್ ಯಾವುದೇ ಮಾಹಿತಿ ನೀಡಿಲ್ಲ. 10 ಅಭ್ಯರ್ಥಿಗಳು 5 ನೇ ತರಗತಿ, 6 ಮಂದಿ 8 ನೇ ತರಗತಿವರೆಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದಾರೆ. ಶಾಸಕರಾಗಿ ಆಯ್ಕೆಯಾಗಿದ್ದವರ ಪೈಕಿ ಜಿಟಿಡಿ ಅತಿ ಕಡಿಮೆ ವಿದ್ಯಾರ್ಹತೆ ಅಂದರೆ 8 ನೇ ತರಗತಿ ವ್ಯಾಸಂಗ ಮಾಡಿದ್ದಾರೆ. 21 ಮಂದಿ ಹತ್ತನೇ ತರಗತಿ ಹಾಗೂ 19 ಮಂದಿ ಪದವಿ ಪೂರ್ವ ಶಿಕ್ಷಣ ಪೂರೈಸಿದ್ದಾರೆ.
ಶ್ರೀಮಂತ ಸಿಎಂಗಳ ಪಟ್ಟಿ ಬಿಡುಗಡೆ, ಸಿದ್ದರಾಮಯ್ಯಗೆ ಎಷ್ಟನೇ ಸ್ಥಾನ?
40 ವರುಷ ವಯಸ್ಸಿನವರೇ ಹೆಚ್ಚು
ಈ ಹಿಂದೆ ಕಣದಲ್ಲಿದ್ದ 160 ಅಭ್ಯರ್ಥಿಗಳ ಪೈಕಿ 119 ಮಂದಿ 40 ವರುಷ ಮೇಲಿನವರು, 41 ಮಂದಿ ಮಾತ್ರ 40 ವರುಷದ ಳಗಿನವರು, ಇವರಲ್ಲಿ ಬಹುತೇಕರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಫರ್ಧಿಸಿದವರು. ಯುವಕರ ಸಂಖ್ಯೆ ತೀರಾ ಕಡಿಮೆ ಎಂಬುದು ಬೇಸರದ ಸಂಗತಿಯೇ ಸರಿ.
ಠೇವಣಿ ಕಳೆದುಕೊಂಡವರು 134 ಮಂದಿ
2013 ಚುನಾವಣೆಯಲ್ಲಿ ಮೈಸೂರು ವ್ಯಾಪ್ತಿಯ ಕ್ಷೇತ್ರಗಳಲ್ಲಿ ಬರೋಬ್ಬರಿ 134 ಅಭ್ಯರ್ಥಿಗಳು ಠೇವಣಿ ಕಳೆದುಕೊಂಡವರೇ ಹೆಚ್ಚು. 11 ಕ್ಷೇತ್ರಗಳಲ್ಲಿ 63 ಸ್ವತಂತ್ರ ಅಭ್ಯರ್ಥಿಗಳು ಸೇರಿದಂತೆ ಒಟ್ಟು 160 ಸ್ಫರ್ಧಿಗಳು ಅಂತಿಮವಾಗಿ ಕಣದಲ್ಲಿದ್ದರು. ಅವರಲ್ಲಿ 26 ಮಂದಿ ಮಾತ್ರ ಠೇವಣಿ ಉಳಿಸುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಚುನಾವಣೆಯಲ್ಲಿ ಸ್ಪರ್ಧಿಸಲು ಸಾಮಾನ್ಯ ಅಭ್ಯರ್ಥಿಗಳು ತಲಾ 10 ಸಾವಿರ, ಮೀಸಲು ಕ್ಷೇತ್ರದ ಅಭ್ಯರ್ಥಿಗಳು 5 ಸಾವಿರ ಪಾವತಿಸಬೇಕು. ಚುನಾವಣಾ ಆಯೋಗದ ಪ್ರಕಾರ ಚಲಾವಣೆಯಾದ ಸಿಂಧು ಮತಗಳಲ್ಲಿ ಆರನೇ ಒಂದು ಭಾಗದಷ್ಟು ಮತ ಪಡೆಯದ ಅಭ್ಯರ್ಥಿಗಳಿಗೆ ಅವರು ಪಾವತಿಸಿದ ಠೇವಣಿ ವಾಪಸ್ ದೊರೆಯುವುದಿಲ್ಲ.
ಒಟ್ಟಾರೆ ನಾವೇ ಆರಿಸಿಕಳಿಸುವ ರಾಜಕಾರಣಿಗಳು ಎಷ್ಟು ವಿದ್ಯಾವಂತರು ಹಾಗೂ ಎಷ್ಟು ಜನಾನುರಾಗಿಗಳು ಎಂಬುದಕ್ಕೆ ಮೇಲಿನ ಬೆಳವಣಿಗೆಗಳೇ ನಮಗೆ ಮತಹಾಕಲು ಹಿಡಿದ ಕೈಗನ್ನಡಿ ಎಂದರೇ ತಪ್ಪಾಗಲಾರದು.












Click it and Unblock the Notifications