ಮೈಸೂರಿನಲ್ಲಿ ಗ್ಯಾಂಗ್ ರೇಪ್ ಪ್ರಕರಣ:ಪೊಲೀಸರ ಬಳಿ ಮಹತ್ವದ ಸುಳಿವು
ಮೈಸೂರು, ಮೇ 10:ಮೈಸೂರಿನ ಲಿಂಗಾಂಬುಧಿ ಪಾಳ್ಯದ ಬಳಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ಜಯಪುರ ಪೊಲೀಸ್ ಠಾಣೆಯಿಂದ ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿದೆ. ಅಲ್ಲದೇ ಪ್ರಕರಣದ ಸಂಬಂಧ ಐವರು ಶಂಕಿತರನ್ನು ವಿಚಾರಣೆಗೊಳಪಡಿಸಲಾಗಿದೆ.
ಅತ್ಯಾಚಾರ ಪ್ರಕರಣವನ್ನು ಜಯಪುರ ಪೊಲೀಸ್ ಠಾಣೆಯಿಂದ ಮೈಸೂರಿನ ಕುವೆಂಪುನಗರ ಠಾಣೆಗೆ ನೀಡಲು ಎಸ್ಪಿ ಅಮಿತ್ ಸಿಂಗ್ ಚಿಂತನೆ ನಡೆಸಿ ಬಳಿಕ ಪ್ರಕರಣವನ್ನು ಹಸ್ತಾಂತರಿಸಿದರು. ಘಟನೆ ಬಳಿಕ ನಗರ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದು, ಘಟನಾ ಸ್ಥಳದ ಮ್ಯಾಪ್ ನೋಡಿ ಇದು ನಮ್ಮ ವ್ಯಾಪ್ತಿಗೆ ಬರಲ್ಲ ಎಂದಿದ್ದಾರೆ.
ಇದಾದ ಬಳಿಕ ಎಸ್ಪಿ ಅಮಿತ್ ಸಿಂಗ್ ಮುತುವರ್ಜಿಯಿಂದ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಮೊದಲು ಪ್ರಕರಣ ದಾಖಲು ಮಾಡಿ ನಂತರ ನೋಡೋಣ ಎಂದು ಎಸ್ಪಿ ಅಮಿತ್ ಸಿಂಗ್ ತಿಳಿಸಿದ್ದರು.

ಪ್ರಕರಣ ದಾಖಲು ಮಾಡಿ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಮಹತ್ವದ ಸುಳಿವು ದೊರೆತಿದೆ ಎನ್ನಲಾಗಿದೆ.ಅತ್ಯಾಚಾರ ಪ್ರಕರಣ ಸಂಬಂಧಿಸಿದಂತೆ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.
ಆದರೆ ಘಟನೆಯಿಂದ ಹಲ್ಲೆಗೊಳಗಾದ ವ್ಯಕ್ತಿ ಮತ್ತು ಅತ್ಯಾಚಾರಕ್ಕೆ ಒಳಗಾದ ಮಹಿಳೆಯಿಂದ ಸ್ಪಷ್ಟವಾದ ಮಾಹಿತಿ ಸಿಗುತ್ತಿಲ್ಲ. ಸುಮಾರು 8 ತಂಡಗಳಿಂದ ಪ್ರಕರಣದ ತನಿಖೆ ಚುರುಕುಗೊಂಡಿದೆ.
ಘಟನೆಯ ಹಿನ್ನೆಲೆ
ಫೇಸ್ಬುಕ್ನಲ್ಲಿ ಪರಿಚಯವಾಗಿದ್ದ ವಿವಾಹಿತ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದ ಯುವತಿಯು ಸುತ್ತಾಟಕ್ಕೆಂದು ಬುಧವಾರ ರಾತ್ರಿ ಹತ್ತೂವರೆ ವೇಳೆಗೆ ಬೈಕ್ನಲ್ಲಿ ಲಿಂಗಾಂಬುಧಿಪಾಳ್ಯ ಬಳಿ ಬಂದಿದ್ದಾರೆ. ಈ ವೇಳೆ ಅಲ್ಲಿ ಮದ್ಯ ಸೇವಿಸುತ್ತಿದ್ದ ಮೂವರು ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾರೆ. ತಡೆಯಲು ಬಂದ ಸ್ನೇಹಿತನ ಕಾಲನ್ನು ಕಲ್ಲಿನಿಂದ ಬಲವಾಗಿ ಜಜ್ಜಿದ್ದಾರೆ.
ಆತನ ತಲೆ ಮತ್ತು ಎದೆಯ ಭಾಗಗಳ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.ನಂತರ ರಕ್ತದ ಮಡುವಿನಲ್ಲಿ ಬಿದ್ದಿದ್ದ ವ್ಯಕ್ತಿಯನ್ನು ಕಂಡ ದಾರಿಹೋಕರು ತಕ್ಷಣ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.












Click it and Unblock the Notifications