ವಿವಾದಾತ್ಮಕ ಹೇಳಿಕೆ ನೀಡದಂತೆ ಭಗವಾನ್ ಗೆ ವಾರ್ನ್ ಮಾಡಿದ ಪೊಲೀಸರು
ಮೈಸೂರು, ಜನವರಿ 3: ಮೈಸೂರಿನಲ್ಲಿ ಕಳೆದೊಂದು ವಾರದಿಂದಲೂ ಕೇಳಿಬರುತ್ತಿರುವ ಚರ್ಚೆ ಭಗವಾನ್ ರವರದ್ದು. 'ರಾಮಮಂದಿರ ಏಕೆ ಬೇಡ?' ಎಂಬ ಪುಸ್ತಕದಲ್ಲಿ ಶ್ರೀರಾಮನ ಬಗ್ಗೆ ಅವಹೇಳನಕಾರಿಯಾಗಿ ಬರೆದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೈಸೂರು ಸೇರಿದಂತೆ ರಾಜ್ಯದ ವಿವಿಧೆಡೆ ಸಾಹಿತಿ ಕೆ.ಎಸ್.ಭಗವಾನ್ ವಿರುದ್ಧ ದೂರು ದಾಖಲಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಭಗವಾನ್ ಗೆ ವಿವಾದಾತ್ಮಕ ಹೇಳಿಕೆ ನೀಡದಂತೆ ವಾರ್ನ್ ಮಾಡಿದ್ದಾರೆ.
ಯಾವುದೇ ರೀತಿಯ ವಿವಾದಾತ್ಮಕ ಹೇಳಿಕೆ ನೀಡುವುದಾಗಲಿ, ಮಾಧ್ಯಮಗಳಿಗೆ ಸಂದರ್ಶನ ನೀಡುವುದಾಗಲಿ ಮಾಡದಂತೆ ಮೈಸೂರು ನಗರ ಪೊಲೀಸ್ ಆಯುಕ್ತರು ಭಗವಾನ್ ಗೆ ಮೌಖಿಕವಾಗಿ ಆದೇಶ ನೀಡಿದ್ದಾರೆ.
ಮಾಧ್ಯಮಗಳು ಭಗವಾನ್ ಸಂದರ್ಶನಕ್ಕೆ ಹೋದಾಗ ಅಲ್ಲಿದ್ದ ಪೊಲೀಸರೂ ಯಾವುದೇ ರೀತಿಯ ಸಂದರ್ಶನ ನೀಡದಂತೆ ನಿರ್ಬಂಧ ವಿಧಿಸಿದ್ದಾರೆ ಎನ್ನಲಾಗಿದೆ. ಈಗಾಗಲೇ ಕುವೆಂಪುನಗರ ಪೊಲೀಸರು ಭಗವಾನ್ ವಿರುದ್ಧ ಐಪಿಸಿ ಸೆಕ್ಷನ್ 295ಎ ಅಡಿಯಲ್ಲಿ ಎಫ್ಐಅರ್ ದಾಖಲಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಕುವೆಂಪುನಗರದಲ್ಲಿರುವ ಭಗವಾನ್ ಮನೆಗೆ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಅಲ್ಲದೆ ಅವರ ಮನೆಯಲ್ಲಿದ್ದ ಹಳೆಯ ಸಿಸಿಟಿವಿ ಕ್ಯಾಮೆರಾಗಳನ್ನು ತೆಗೆದು ನಾಲ್ಕು ಹೊಸ ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ. ಮತ್ತೊಂದು ಸಿಸಿ ಕ್ಯಾಮೆರಾ ಮನೆಯ ಒಳಗೆ ಹಾಕಲಾಗಿದ್ದು, ಇನ್ನೆರೆಡು ಕ್ಯಾಮೆರಾಗಳನ್ನು ಮನೆಯ ಮೇಲ್ಭಾಗ ಅಳವಡಿಸಲಾಗಿದೆ. ಈ ಎಲ್ಲಾ ಸಿಸಿ ಟಿವಿಗಳ ಕಂಟ್ರೋಲ್ ನಗರ ಪೊಲೀಸ್ ಆಯುಕ್ತರ ಕಚೇರಿಗೆ ಸಂಪರ್ಕವಿದೆ. ಈ ಮೂಲಕ ಭಗವಾನ್ ಮನೆಯ ಮುಂಭಾಗದ ಪ್ರಮುಖ ರಸ್ತೆಯ ಸುತ್ತಮುತ್ತಲಿನ ಪ್ರದೇಶವನ್ನು ಸಿಸಿ ಕ್ಯಾಮರಾ ಕಣ್ಗಾವಲಿನಲ್ಲಿಡಲಾಗಿದೆ.

ಸಶಸ್ತ್ರ ಮೀಸಲು ಪಡೆಯ ಮೂವರು ಪೊಲೀಸರು ಮತ್ತು ಓರ್ವ ಪೊಲೀಸ್ ಅಧಿಕಾರಿ ಭಗವಾನ್ ಮನೆಯನ್ನು ಕಾಯುತ್ತಿದ್ದಾರೆ. ಜೊತೆಗೆ ಭಗವಾನ್ ಹೋದ ಬಂದ ಕಡೆಯೆಲ್ಲಾ ಓರ್ವ ಗನ್ ಮ್ಯಾನ್ ಇರುತ್ತಾರೆ. ಅದರ ನಿರ್ವಹಣೆಯನ್ನೂ ಸರ್ಕಾರವೇ ಮಾಡುತ್ತಿದೆ.












Click it and Unblock the Notifications