ಮೈಸೂರಿನಲ್ಲಿ ಬಲೆಗೆ ಬಿದ್ದರು ಕನ್ನಹಾಕುತ್ತಿದ್ದ ಖದೀಮರು
ಮೈಸೂರು, ಜುಲೈ 22: ಮೈಸೂರಿನ ಟಿ. ನರಸಿಪುರ ತಾಲೂಕಿನ ವಿವಿಧೆಡೆ ನಡೆದಿದ್ದ ಕಳ್ಳತನಗಳ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ನರಸೀಪುರ ಹಾಗೂ ಬನ್ನೂರು ಪೊಲೀಸರು ಇಬ್ಬರು ಖದೀಮರನ್ನು ಬಂಧಿಸಿ, ಕಳವು ಮಾಡಲಾಗಿದ್ದ 89,800 ರೂ. ಮೌಲ್ಯದ ಮಾಲುಗಳನ್ನು ನಿನ್ನೆ (ಜುಲೈ 21) ವಶಪಡಿಸಿಕೊಂಡಿದ್ದಾರೆ.
ಭೈರಾಪುರ ನಿವಾಸಿ ವಸಂತ್ ಹಾಗೂ ಚಿಕ್ಕಬೂವಳ್ಳಿ ಗ್ರಾಮದ ಮಲ್ಲೇಶ್ ಅಲಿಯಾಸ್ ಮಲ್ಲು ಬಂಧಿತರಾಗಿದ್ದಾರೆ ಈ ಕುರಿತು ನಂಜನಗೂಡು ಉಪವಿಭಾಗದ ಎಎಸ್ಪಿ ಎಂ.ಎಸ್.ಮೊಹಮ್ಮದ್ ಸುಜೇತ ಅವರು ಖದೀಮರು ನಡೆಸಿದ್ದ ಕಳ್ಳತನದ ಕುರಿತು ಮಾಹಿತಿ ನೀಡಿದರು.

ಆರೋಪಿಗಳು ತಿ.ನರಸೀಪುರ ಲಿಂಕ್ ರಸ್ತೆಯಲ್ಲಿರುವ ಉಷಾ ಕಿರಣ ಮೊಬೈಲ್ಸ್ ಅಂಗಡಿಯಲ್ಲಿ ಕಳೆದ 2017ರ ಸೆ.3ರ ರಾತ್ರಿ ಬೀಗ ಮುರಿದು 22 ಕಂಪನಿಯ ಮೊಬೈಲ್ ಹ್ಯಾಂಡ್ ಸೆಟ್ ಕಳ್ಳತನ ಮಾಡಿದ್ದರು. ಭೈರಾಪುರ ಸರ್ಕಾರಿ ಶಾಲೆಯಲ್ಲಿ ಕಳೆದ ಮೇ.25 ರಂದು ಪ್ರೋಜೆಕ್ಟರ್, ಹೋಮ್ ಥಿಯೇಟರ್, ಯುಪಿಎಸ್ಸಿ ಹಾಗೂ ಬ್ಯಾಟರಿ ಕಳ್ಳತನವಲ್ಲದೆ, ಬೆನಕನಹಳ್ಳಿ ಗ್ರಾಮದ ಶ್ರೀ ಗೌರಿಶಂಕರ ಪ್ರೌಢಶಾಲೆಯಲ್ಲಿ ಕಳೆದ ಫೆ.2 ರಂದು ಕಂಪ್ಯೂಟರ್, ಪ್ರೊಜೆಕ್ಟರ್, ಎರಡು ಸ್ಪೀಕರ್ ಬಾಕ್ಸ್ ಹಾಗೂ ಎರಡು ಕಂಪ್ಯೂಟರ್ ಸ್ಪೀಕರ್, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಳೆದ
ಆ.8 ರಂದು ಬಿಸಿಯೂಟಕ್ಕೆ ಇಡಲಾಗಿದ್ದ 100 ಕೆ.ಜಿ ತೊಗರಿ ಬೇಳೆ, 50 ಕೆ.ಜಿ. ಅಕ್ಕಿ ಹಾಗೂ ತೂಕದ ಯಂತ್ರವನ್ನು ಹಾಗೂ ಸೋಸಲೆ ಗ್ರಾ.ಪಂ ಕಚೇರಿಯಲ್ಲಿ ಎಸರ್ ಕಂಪನಿಯ ಮಾನಿಟರ್, ಸಿಪಿಯು ಮತ್ತು ಕೀ ಬೋರ್ಡ್ ಕಳ್ಳತನ ಮಾಡಿದ್ದರು.
ಮೇಲಿಂದ ಮೇಲೆ ನಡೆಯುತ್ತಿದ್ದ ಕಳ್ಳತನ ಪ್ರಕರಣಗಳ ಬಗ್ಗೆ ನಿಗಾವಹಿಸಿದ್ದ ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದರು. ಈ ನಡುವೆ ಸ್ಥಳೀಯ ಖಾಸಗಿ ಬಸ್ ನಿಲ್ದಾಣದಲ್ಲಿ ಕಳ್ಳತನಕ್ಕೆ ಬಳಸಲಾಗುತ್ತಿದ್ದ ಹಾರೆಯೊಂದಿಗೆ ಅನುಮಾನಾಸ್ಪದವಾಗಿ ಇಬ್ಬರು ತಿರುಗಾಡುತ್ತಿರುವುದು ಕಂಡು ಬಂದಿತ್ತು. ಹೀಗಾಗಿ ಅವರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಒಪ್ಪಿಕೊಂಡಿದ್ದಾರೆ.
ಎಸ್ಪಿ ರವಿ ಡಿ.ಚನ್ನಣ್ಣನವರ್ ಮತ್ತು ಎಎಸ್ಪಿ ಎಂ.ಎಸ್.ಮೊಹಮ್ಮದ್ ಸುಜೀತ ಮಾರ್ಗದರ್ಶನದಲ್ಲಿ ಪೊಲೀಸ್ ಸರ್ಕಲ್ ಇನ್ಸ್ ಪೆಕ್ಟರ್ ಮನೋಜ್ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪೊಲೀಸ್ ಸಬ್ಇನ್ಸ್ ಪೆಕ್ಟರ್ ಗಳಾದ ಎನ್.ಆನಂದ್, ಲತೇಶ್ ಕುಮಾರ್, ನಂದೀಶ್, ಎಎಸ್ ಐ ರಾಜೇಂದ್ರ, ಪೇದೆಗಳಾದ ಎಂ.ಎಸ್.ಮಂಜುನಾಥ್, ವಸಂತ್ ಕುಮಾರ್, ಸಂಜಯ್, ರವೀಶ, ವೆಂಕಟೇಶ್, ಚರಣ್, ಕೃಷ್ಣಯ್ಯ, ಮಂಚಿಗಯ್ಯ, ಇಮ್ರಾನ್, ನಾರಾಯಣ, ರಾಮಕೃಷ್ಣ, ಸೋಮಶೇಖರ್, ಸುಮಂತ್, ರಾಮೇಶ್ವರ್, ಪ್ರಭಾಕರ್, ನಿಜಾಮುದ್ದೀನ್, ಮೋಹನ್, ಚಾಲಕರಾದ ಯಾದವನ್ ಹಾಗೂ ದಯಾನಂದ್ ಭಾಗವಹಿಸಿದ್ದರು.












Click it and Unblock the Notifications